ಮಾಲಿನ್ಯ ತಡೆಗಟ್ಟುವುದಷ್ಟೇ ಅಲ್ಲ, ಔಷಧೀಯ ಸಸ್ಯಗಳನ್ನು ನೆಡುವುದರ ಮೂಲಕ ಆರೋಗ್ಯ ಜಾಗೃತಿಯನ್ನೂ ನಡೆಸುವ ಹಿನ್ನೆಲೆಯಲ್ಲಿ ಜೋಡುಮಾರ್ಗ ನೇತ್ರಾವತಿ ಜೇಸಿ ವತಿಯಿಂದ ಜೂನ್.5ರಂದು ವಿಶ್ವ ಪರಿಸರ ದಿನಾಚರಣೆಯನ್ನು ಬಿ.ಸಿ.ರೋಡಿನ ಚಂಡಿಕಾಪರಮೇಶ್ವರಿ ದೇವಸ್ಥಾನದ ಹಿಂಬದಿ ನಡೆಸಲಾಯಿತು.
ಜನರಲ್ಲಿ ಮರ ಗಿಡಗಳನ್ನು ಬೆಳೆಸುವದರ ಬಗ್ಗೆ ಜಾಗೃತಿ ಮತ್ತು ಜಾಗತಿಕ ತಾಪಮಾನ, ಮಾಲಿನ್ಯ ತಡೆಗಟ್ಟಲು ಪರಿಸರ ದಿನಾಚರಣೆಯನ್ನು ಆಚರಿಸುವುದು ಒಂದು ಉತ್ತಮ ಮಾರ್ಗ, ಹಸಿರು ಉಳಿಸಿ ಬೆಳೆಸುವುದರ ಮೂಲಕ ನಾವು ನಮ್ಮ ಮುಂದಿನ ಪೀಳಿಗೆಯವರು ಒಂದು ಉತ್ತಮ ವಾತಾವರಣದಲ್ಲಿ ಬದುಕಲು ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಕಾರ್ಯಕ್ರಮವನ್ನು ಗಿಡ ನೆಟ್ಟು ಉದ್ಘಾಟಿಸಿದ ಎಸ್. ವಿ.ಎಸ್. ಕಾಲೇಜಿನ ಪ್ರಾಂಶುಪಾಲ ಪಾಂಡುರಂಗ ನಾಯಕ್ ಹೇಳಿದರು.
ಈ ಸಂದರ್ಭ ಮಾವು, ಚಿಕ್ಕು, ಬಿಲ್ವಪತ್ರೆ ಗಿಡಗಳನ್ನು ನೆಟ್ಟು ಅದಕ್ಕೆ ನೀರೆಯಲಾಯಿತು. ಕಾಟಾಚಾರಕ್ಕೆ ಗಿಡನೆಡುವುದರ ಬದಲು ಅವುಗಳನ್ನು ಪೋಷಿಸಿ ಬೆಳೆಸಿ ಅವುಗಳಿಗೆ ಪ್ರತೀ ವರ್ಷ ಹುಟ್ಟು ಹಬ್ಬ ಆಚರಿಸುವುದರ ಮೂಲಕ ಪರಿಸರ ಕಾಳಜಿ ತೋರಿಸಿ ಇತರರಿಗೆ ಮಾದರಿಯಾಗಬೇಕೆಂದು ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಜೇಸಿ ಘಟಕದ ಪೂರ್ವಾಧ್ಯಕ್ಷ ರಾಮಚಂದ್ರ ರಾವ್ ತಿಳಿಸಿದರು.
ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ಮಾಂಬಾಡಿ, ಜೇಸಿ ಅಧ್ಯಕ್ಷ ಹರ್ಷರಾಜ್ ಸಿ, ಜೇಸಿರೆಟ್ ಅಧ್ಯಕ್ಷೆ ಅಮಿತಾ ಹರ್ಷರಾಜ್, ಉಪಾಧ್ಯಕ್ಷರಾದ ಜಯರಾಜ್ ಬಂಗೇರ, ಧೀರಜ್ ಹೆಚ್, ನಿರ್ದೇಶಕರಾದ ಸುಧಾಕರ್ ವೈ, ಖಜಾಂಚಿ ಹರಿಶ್ಚಂದ್ರ ಆಳ್ವ, ಸದಸ್ಯರುಗಳಾದ ಶ್ರೀನಿಧಿ ಭಟ್, ಕೃಷ್ಣರಾಜ್ ರಾವ್, ಸುಬ್ರಹ್ಮಣ್ಯ ರಾವ್, ಜೇಜೇಸಿಗಳಾದ ವರುಣ್ ರಾಜ್, ಆದಿತ್ಯ, ತನಿಷ್ಕಾ ಉಪಸ್ಥಿತರಿದ್ದರು.