ಬಂಟ್ವಾಳ

ಗಾಬರಿ ಬೇಡ, ಬಂಟ್ವಾಳದಲ್ಲಿ ನೀರಿದೆ, ಮಿತವಾಗಿ ಬಳಸಿದರೆ ತೊಂದರೆ ಇಲ್ಲ – ಶಾಸಕ ರಾಜೇಶ್ ನಾಯ್ಕ್

  • 10 ದಿನಕ್ಕಾಗುವಷ್ಟು ಸ್ಟಾಕ್ ಈಗಿದೆ, ಬೇರೆ ಮೂಲಗಳಿಂದದ ಪಡೆಯಲು ಪ್ರಯತ್ನ ಸಾಗಿದೆ

ಜಾಹೀರಾತು

Read More for News:

ಬಂಟ್ವಾಳ ಪುರಸಭೆ ವ್ಯಾಪ್ತಿಯ ಜನರಿಗೆ ದಿನವೊಂದಕ್ಕೆ 8 ಎಂ.ಎಲ್.ಡಿ. ನೀರು ಬೇಕಾಗುತ್ತದೆ. ಆದರೆ ಈಗ ಲಭ್ಯವಿರುವ ನೀರಿನ ಸ್ಟಾಕ್ ನೋಡಿದರೆ, 5 ಎಂಎಲ್ ಡಿಯಷ್ಟು ಪೂರೈಕೆ ಮಾಡಲು ಆಗುತ್ತದೆ. ಆದರೂ ಆತಂಕ ಬೇಡ. ಬೇರೆ ಮೂಲಗಳಿಂದ ನೀರು ಪಡೆಯಲು ಪ್ರಯತ್ನ ನಡೆಸಲಾಗುತ್ತಿದೆ.

ಹೀಗಂದವರು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ.

ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಶಾಸಕ ರಾಜೇಶ್ ನಾಯಕ್ ಹಾಗೂ ಅಧಿಕಾರಿಗಳು ಬುಧವಾರ ಜಕ್ರಿಬೆಟ್ಟುವಿನ ಇಂಟಕ್‌ವೆಲ್‌ಗೆ ಭೇಟಿ ಪಂಪಿಂಗ್ ವ್ಯವಸ್ಥೆಯನ್ನು ವೀಕ್ಷಿಸಿದರು. ನಗರವಾಸಿಗಳಿಗೆ ನೀರು ಪೂರೈಸಲು ಇರುವ ನೀರಿನ ಲಭ್ಯತೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಬಳಿಕ ನೀರು ಶುದ್ದೀಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ ಕಳೆದ ಒಂದು ತಿಂಗಳಿನಿಂದ ಬಂಟ್ವಾಳ ತಾಲೂಕು ವ್ಯಾಫ್ತಿಯಲ್ಲಿ ಜನರ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಓಡಾಟ ನಡೆಸುತ್ತಿದ್ದು ನೀರಿನ ಸಮಸ್ಯೆ ತಲೆದೋರದಂತೆ ಪ್ರಯತ್ನ ನಡೆಸಿದ್ದೇವೆ. ಕೆಲ ದಿನಗಳಿಂದ ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ ಉಂಟಾಗಿತ್ತು. ಮಂಗಳವಾರ ಸಂಜೆಯಿಂದ ಡ್ರೆಜ್ಜಿಂಗ್ ಮೂಲಕ ನೀರು ಪಂಪ್ ಮಾಡಲಾಗುತ್ತಿದ್ದು 8 ಗಂಟೆಗಳ ಪಂಪಿಂಗ್‌ನಲ್ಲಿ 5 ಎಂಎಲ್‌ಡಿ ನೀರು ಸಂಗ್ರಹಗೊಂಡಿದ್ದು ಅದನ್ನು ನಗರದ ಜನರಿಗೆ ಒದಗಿಸಲಾಗಿದೆ. ಬಂಟ್ವಾಳಕ್ಕೆ 8 ಎಂಎಲ್‌ಡಿ ನೀರಿನ ಅಗತ್ಯತೆ ಇದ್ದು 10 ರಿಂದ 12 ಗಂಟೆ ನೀರಿನ ಪಂಪಿಗ್ ಮಾಡಬೇಕಾಗುತ್ತದೆ. ನೀರಿಲ್ಲ ಎಂದು ಜನರು ಆತಂಕ ಪಡುವುದು ಬೇಡ, ಮೇಲ್ಭಾಗದಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದು ಬಂಡೆಗಳು ಅಡ್ಡಲಾಗಿರುವುದರಿಂದ ನೀರು ಕೆಳ ಭಾಗಕ್ಕೆ ಹರಿದು ಬರುತ್ತಿಲ್ಲ. ನೀರು ಪಂಪ್ ಮಾಡಿದರೆ ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳಬಹುದು ಎಂದರು.  ಪುರಸಭೆಯ ಜನರಿಗೆ ನೀರು ಪೂರೈಸಲು ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡುತ್ತಿದ್ದು  ಜನರಿಗೆ ತೊಂದರೆಯಾಗದಂತೆ ನೀರು ಕೊಡುತ್ತೇವೆ ಎಂದ ಅವರು ಮಿತವಾಗಿ ಬಳಸುವಂತೆ ಮನವಿ ಮಾಡಿಕೊಂಡರು.

ಈ ಸಂದರ್ಭ ಪುರಸಭೆಯ ಸದಸ್ಯ ಗೋವಿಂದ ಪ್ರಭು, ಮಾಜಿ ಸದಸ್ಯ ದೇವದಾಸ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ತುಂಗಪ್ಪ ಬಂಗೇರ, ಕ.ನ.ನೀ.ಸ.ಒ.ಮಂಡಳಿ ಇಂಜಿನಿಯರ್ ಶೋಭಾಲಕ್ಷ್ಮಿ, ಪುರಸಭೆ ಎಂಜಿನಿಯರ್ ಡೊಮೆನಿಕ್ ಡಿಮೆಲ್ಲೋ, ಮೊದಲಾದವರು ಹಾಜರಿದ್ದರು.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.