ಕಾರುಗಳೆರಡು ಮುಖಾಮುಖಿ ಡಿಕ್ಕಿಯಾಗಿ ಅಪಘಾತವಾದ ಘಟನೆ ಸೋಮವಾರ ಕೊಕ್ಕಡದಿಂದ ಧರ್ಮಸ್ಥಳಕ್ಕೆ ಹೋಗುವ ಹೆದ್ದಾರಿಯಲ್ಲಿ ನಡೆದಿದೆ. ಘಟನೆಯಿಂದ ಹಲವರು ಗಾಯಗೊಂಡಿದ್ದಾರೆ. ಇದೇ ಅಪಘಾತದ ಗಾಯಾಳುಗಳನ್ನು ಕೊಂಡೊಯ್ಯಲು ಬಂದಿದ್ದ ಆಂಬುಲೆನ್ಸ್ ಕೂಡ ಅಪಘಾತಕ್ಕೀಡಾಯಿತು. ಸೌತಡ್ಕ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಆಂಬುಲೆನ್ಸ್ ಪಲ್ಟಿಯಾಯಿತು.
ಧರ್ಮಸ್ಥಳದಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಸ್ವಿಪ್ಟ್ ಡಿಜೈರ್ ಕಾರು ಕಾಪಿನಬಾಗಿಲು ಸಮೀಪಿಸುತ್ತಿದ್ದಂತೆ ಆಲಂಕಾರಿನಿಂದ ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ ಸೆಲಾರಿಯೋ ಕಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ. ಸೆಲಾರಿಯೋ ಕಾರಿನಲ್ಲಿದ್ದ ಯಮುನಾ, ಮುತ್ತಪ್ಪ, ಮೋಹಿನಿ, ಮೋಕ್ಷಿ, ಧನ್ಯ ಎಂಬವರು ಗಾಯಗೊಂಡಿದ್ದಾರೆ. ಪೈಕಿ ಧನ್ಯ ಎಂಬಾಕೆಗೆ ತೀವ್ರ ಗಾಯಗಳಾಗಿದ್ದು ಉಳಿದ ನಾಲ್ಕು ಮಂದಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದೇ ವೇಳೆ ಗಾಯಾಳುಗಳನ್ನು ಕೊಂಡೊಯ್ಯಲೆಂದು ಬಂದ ಆಂಬುಲೆನ್ಸ್ ಸೌತಡ್ಕ ದೇವಳದ ದ್ವಾರದ ಸಮೀಪಿಸುತ್ತಿದ್ದಂತೆ ಎದುರು ಗಡೆಯಿಂದ ವಾಹನಗಳು ಬರುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ನೆಲ್ಯಾಡಿ ಹೊರಠಾಣಾ ಪೋಲೀಸರು ಮತ್ತು ಹೈವೇ ಪ್ಯಾಟ್ರೋಲ್ ಸಿಬ್ಬಂದಿಗಳು ಅಪಘಾತ ಸ್ಥಳಕ್ಕೆ ಆಗಮಿಸಿ ಸಂಚಾರ ನಿಯಂತ್ರಣ ನಡೆಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…