Categories: ಬಂಟ್ವಾಳ

ನಂದಾವರ ಜಾತ್ರೆ, 22ರಂದು ರಥೋತ್ಸವ

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ


ಬಂಟ್ವಾಳ: ಪಾಣೆಮಂಗಳೂರಿನಲ್ಲಿರುವ ಇತಿಹಾಸ ಪ್ರಸಿದ್ಧ ದೇವಸ್ಥಾನ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಬ್ರಹ್ಮಶ್ರೀ ನೀಲೇಶ್ವರ ಕೆ.ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ ಫೆ.19ರಿಂದ 24ರವರೆಗೆ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಜಾಹೀರಾತು

ಈ ವಿಷಯವನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದು, ಫೆ.೨೨ರಂದು ರಥೋತ್ಸವ ಕಾರ್ಯಕ್ರಮ ನಡೆಯುವುದಾಗಿ ಮಾಹಿತಿ ನೀಡಿದ್ದಾರೆ.

ಫೆ.19, ಮಂಗಳವಾರ. ಬೆಳಗ್ಗೆ ೧೦ಕ್ಕೆ ತಂತ್ರಿಗಳವರ ಆಗಮನ, ರಾತ್ರಿ ೭ರಿಂದ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿ ಎಡನೀರು, ಕಾಸರಗೋಡು ಇವರಿಂದ ಕಾಲಮಿತಿ ಯಕ್ಷಗಾನ. ರಾತ್ರಿ ೯ಕ್ಕೆ ಸಜೀಪನಡು ಶ್ರೀ ನಾಲ್ಕೈತ್ತಾಯ ದೈವಸ್ಥಾನದಿಂದ ಭಂಡಾರ ಹೊರಡುವುದು. ರಾತ್ರಿ ೧೦.೩೦ಕ್ಕೆ ಶ್ರೀ ದೈವದ ಭಂಡಾರ ಶ್ರೀ ಕ್ಷೇತ್ರಕ್ಕೆ ತಲುಪುವುದು. ನಂತರ ಧ್ವಜಾರೋಹಣ. ರಾತ್ರಿ ೧೧ರಿಂದ ಶ್ರೀ ದೇವರ ಬಲಿ, ಉತ್ಸವ ನಡೆಯಲಿದೆ.

ಫೆ.20, ಬುಧವಾರ ಬಯನ ಬಲಿ ಉತ್ಸವ. ಸಂಜೆ ೬ಕ್ಕೆ ಚಿಣ್:ಣರ ಮನೆ ಇವರಿಂದ ನೃತ್ಯ ಕಾರ್ಯಕ್ರಮ. ೭.೩೦ಕ್ಕೆ ಲಿಖಿತಾ ಮಾರ್ನಬೈಲು, ವಿದ್ಯಾ ಕಾಮತ್ ಮತ್ತು ತಂಡದಿಂದ ಹರಿನಾಮ ಸಂಕೀರ್ತನೆ. ೮.೩೦ಕ್ಕೆ ಶ್ರೀ ದೇವರ ಬಲಿ ಉತ್ಸವ ನಡೆಯುವುದು.

ಫೆ.21, ಗುರುವಾರ ನಡುಬಲಿ ಮತ್ತು ಪಾಲಕಿ ಉತ್ಸವ. ಸಂಜೆ ೭ಕ್ಕೆ ರಾಕ್ ಸ್ಟಾರ್ ನೃತ್ಯತಂಡ ಮಾರ್ನಬೈಲು ಇವರಿಂದ ನೃತ್ಯವೈವಿಧ್ಯ. ೮.೩೦ರಿಂದ ಶ್ರಿದೇವರ ಬಲಿ, ಪಾಲಕಿ ಉತ್ಸವ, ರಥಬೀದಿಯಲ್ಲಿ ಸಾಗಿ ಕಟ್ಟೆ ಉತ್ಸವ ನಡೆಯಲಿದೆ.

ಫೆ.22ರಂದು ಶುಕ್ರವಾರ ಮಹಾರಥೋತ್ಸವ. ಬೆಳಗ್ಗೆ ೭.೩೦ರಿಂದ ಶ್ರೀ ದುರ್ಗಾಂಬಾ ದೇವರ ಸನ್ನಿಧಿಯಲ್ಲಿ ವೇ.ಮೂ.ಎನ್.ಶಿವರಾಮ ಮಯ್ಯ ತನ್ನಚ್ಚಿಲ್ ಪೌರೋಹಿತ್ಯದಲ್ಲಿ ಲಲಿತಾ ತ್ರಿಪುರಸುಂದರಿ ಯಾಗ. ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ, ಶ್ರೀ ದೇವರ ರಥಾರೋಹಣ, ಅನ್ನಸಂತರ್ಪಣೆ. ಸಂಜೆ ೬.೩೦ಕ್ಕೆ ಕಲಾಕುಂಭ ಸಾಂಸ್ಕೃತಿಕ ವೇದಿಕೆ ಕುಳಾಯಿ ಇವರಿಂದ ತುಳುನಾಡ ಸಂಸ್ಕೃತಿ (ನಿರೂಪಣೆ: ದಯಾನಂದ ಕತ್ತಲಸಾರ್), ರಾತ್ರಿ ೮ಕ್ಕೆ ಶಿಲ್ಪಾ ಗೊಂಬೆ ಬಳಗ ಕಲ್ಲಡ್ಕ ಇವರಿಂದ ಕೀಲುಕುದುರೆ, ಕರಗ ನೃತ್ಯ, ಗೊಂಬೆ ಕುಣಿತ. ಮೋಹನದಾಸ ಕೊಟ್ಟಾರಿ ಪ್ರಾಯೋಜಕತ್ವದಲ್ಲಿ ಶ್ರೀ ಶಾರದಾ ಚೆಂಡೆ ಬಳಗದ ಚೆಂಡೆ ವಾದನ. ರಾತ್ರಿ ೯ಕ್ಕೆ ಮಹಾರಥೋತ್ಸವ. ಸುಡುಮದ್ದು ಪ್ರದರ್ಶನ, ಶ್ರೀ ದೇವರ ಬಲಿ ಉತ್ಸವ ನಡೆಯುವುದು.

ಫೆ.23ರಂದು ಶನಿವಾರ ಧ್ವಜಾವರೋಹಣ, ಶ್ರೀ ನಾಲ್ಕೈತ್ತಾಯ ದೈವದ ನೇಮ. ಸಂಜೆ ೬ಕ್ಕೆ ವೇಣಿ ಸುಬ್ರಹ್ಮಣ್ಯ ಭಟ್ ಕಾರ್ಕಳ ಇವರಿಂದ ಯಕ್ಷ ದಾಸ ಗಾನ ವೈಭವ. ರಾತ್ರಿ ೮.೩೦ಕ್ಕೆ ಶ್ರೀ ದೇವರ ಬಲಿ ಹೊರಟು ಅವಭೃತ ಸ್ನಾನ, ಧ್ವಜಾವರೋಹಣ. ರಾತ್ರಿ ೧೧ಕ್ಕೆ ಅದೃಷ್ಟ ಚೀಟಿ ಎತ್ತುವುದು. ರಾತ್ರಿ ೧೧.೩೦ಕ್ಕೆ ಮಾಗಣೆಯ ಶ್ರೀ ನಾಲ್ಕೈತ್ತಾಯ ದೈವದ ನೇಮೋತ್ಸವ. ೨೪ರಂದು ಭಾನುವಾರ ಸಂಪ್ರೋಕ್ಷಣೆ ಮತ್ತು ಮಂತ್ರಾಕ್ಷತೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

ಹೊಸ ಕಟ್ಟಡ: ದೇವಸ್ಥಾನದ ಸನಿಹ ನೇತ್ರಾವತಿ ತಟದಲ್ಲಿ ಅಪರಕ್ರಿಯೆಗಳಿಗೆಂದೇ ಪ್ರತ್ಯೇಕ ಕಟ್ಟಡವನ್ನು ನಿರ್ಮಿಸಲಾಗುತ್ತಿದ್ದು, ಅದೀಗ ಮೊದಲನೇ ಮಹಡಿ ನಿರ್ಮಾಣವಾಗುವ ಹಂತದಲ್ಲಿದೆ. ಕೆಳಗೆ ಅಪರಕ್ರಿಯೆಗಳಿಗೆ ಅವಕಾಶವಿದ್ದರೆ, ಮಾಳಿಗೆಯಲ್ಲಿ ಧ್ಯಾನಾಸಕ್ತರಿಗೆ ಅವಕಾಶವಿದೆ. ಜ್ಞಾನಮಂದಿರದ ಜೊತೆಗೆ ನಂದಾವರದಿಂದ ಪಾಣೆಮಂಗಳೂರುವರೆಗೆ ರಿಂಗ್ ರೋಡ್ ನಿರ್ಮಾಣದ ಪ್ರಸ್ತಾಪವೂ ಇದೆ ಎಂದು ಭಂಡಾರಿ ತಿಳಿಸಿದ್ದಾರೆ.

ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ನಂದಾವರ ದೇವಸ್ಥಾನದ ಪ್ರಧಾನ ಅರ್ಚಕರು ವೇದಮೂರ್ತಿ ಮಹೇಶ್ ಭಟ್. ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಮಾರ್ಗದರ್ಶನದಲ್ಲಿ ಇಲ್ಲಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ನೇತೃತ್ವದಲ್ಲಿ ಹತ್ತು ಹಲವು ಕಾರ್ಯಗಳನ್ನು ನಡೆಸುತ್ತಿದೆ. ಕೆ.ಪ್ರಭಾಕರ ಶೆಟ್ಟಿ, ಎಸ್.ಗಂಗಾಧರ ಭಟ್ ಕೊಳಕೆ, ಎಸ್.ಎಂ.ಗೋಪಾಲಕೃಷ್ಣ ಆಚಾರ್ಯ, ಮೋಹನದಾಸ ಪೂಜಾರಿ ಬೊಳ್ಳಾಯಿ, ಅಣ್ಣು ನಾಯ್ಕ, ರಮಾ ಎಸ್. ಭಂಡಾರಿ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.