ಜಿಲ್ಲಾ ಸುದ್ದಿ

ಮಹಾಮಸ್ತಕಾಭಿಷೇಕ ಮಹೋತ್ಸವ: ’ಕೇವಲಿ’ ಸ್ಮರಣ ಸಂಚಿಕೆ ಬಿಡುಗಡೆ

ವರದಿ: ಮೇಧಾ ರಾಮಕುಂಜ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಎಸ್.ಡಿ.ಎಂ. ಸ್ನಾತಕೋತ್ತರ ಅಧ್ಯಯನ ಕೇಂದ್ರ, ಉಜಿರೆ


ಶ್ರೀ ಕ್ಷೇತ್ರ ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಜನಕಲ್ಯಾಣ ಕಾರ್ಯಕ್ರಮದಲ್ಲಿ ’ಕೇವಲಿ’ ಸ್ಮರಣ ಸಂಚಿಕೆಯನ್ನು ಕೇಂದ್ರ ಸರಕಾರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಇಲಾಖೆಯ ಸಚಿವ ಡಿ.ವಿ.ಸದಾನಂದ ಗೌಡ ಲೋಕಾರ್ಪಣೆಗೊಳಿಸಿದರು. ಉಡುಪಿ ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೆಂದ್ರ ಹೆಗ್ಗಡೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಉಪಸ್ಥಿತರಿದ್ದರು.

ಜಾಹೀರಾತು

ಧರ್ಮಸ್ಥಳದ ಭಗವಾನ್ ಬಾಹುಬಲಿಗೆ ನಡೆಯಲಿರುವ ನಾಲ್ಕನೇ ಮಹಾಮಸ್ತಕಾಭಿಷೇಕ ಸಂದರ್ಭವನ್ನು ಸ್ಮರಣೀಯವಾಗಿರಿಸಲು ’ಕೇವಲಿ’ ಸಂಚಿಕೆಯನ್ನು ರೂಪಿಸಲಾಗಿದೆ. ಸ್ಮರಣ ಸಂಚಿಕೆಯು ಭಗವಾನ್ ಬಾಹುಬಲಿಗೆ ಸಂಬಂಧಿಸಿದ ಲೇಖನಗಳು, ಮಹಾಮಸ್ತಕಾಭಿಷೇಕದ ವಿಶೇಷತೆ ಹಾಗೂ ಹಿನ್ನೆಲೆ ಮತ್ತು ಸಂದರ್ಶನ ಆಧಾರಿತ ಬರಹಗಳನ್ನು ಒಳಗೊಂಡಿದೆ.

ಪುರಾಣ, ಶಿಲ್ಪಕಲೆ, ಸಾಹಿತ್ಯ ಜಾನಪದ ಹೀಗೆ ಹಲವಾರು ಪ್ರಕಾರಗಳಲ್ಲಿ ಬಾಹುಬಲಿಯನ್ನು ಬಿಂಬಿಸಿರುವ ಕುರಿತ ಬರಹಗಳು ಈ ಸ್ಮರಣ ಸಂಚಿಕೆಯಲ್ಲಿದೆ. ಜೊತೆಗೆ ಬಾಹುಬಲಿಗೆ ಸಂಬಂಧಿಸಿದ ಕವಿತೆಗಳನ್ನು ಒಳಗೊಂಡಿದೆ. ಬಾಹುಬಲಿ ಸ್ವಾಮಿಯ ಸಂದೇಶ ಹಾಗೂ ವ್ಯಕ್ತಿತ್ವ, ಕವಿಗಳು ಹಾಗೂ ಸಾಹಿತಿಗಳು ಕಂಡಂತೆ ಬಾಹುಬಲಿ, ಜೈನ ಸಂಪ್ರದಾಯದಲ್ಲಿ ಮಸ್ತಕಾಭಿಷೇಕದ ಮಹತ್ವ, ಕರ್ನಾಟಕದಲ್ಲಿನ ಬಾಹುಬಲಿ ಶಿಲ್ಪಗಳು, ಪ್ರತಿಮೆಗಳು ಮತ್ತು ವರ್ಣ ಚಿತ್ರಗಳು, ಧರ್ಮಸ್ಥಳದ ಭಗವಾನ್ ಶ್ರೀ ಬಾಹುಬಲಿಯ ಮಹಾಮಸ್ತಕಾಭಿಷೇಕದ ವೈಶಿಷ್ಟ್ಯಗಳು ಹಾಗೂ ಧರ್ಮಸ್ಥಳದ ಕಲ್ಯಾಣ ಯೋಜನೆಗಳ ಚಿತ್ರಣವು ಸ್ಮರಣ ಸಂಚಿಕೆಯಲ್ಲಿದೆ. ಬಾಹುಬಲಿಯ ಕುರಿತು ಸಮಗ್ರ ಅಧ್ಯಯನಕ್ಕೆ ಸಹಾಯಕವಾಗುವ ಬರಹಗಳು ’ಕೇವಲಿ’ಯಲ್ಲಿದೆ. ಪ್ರಸ್ತುತ ಕಾಲಕ್ಕೆ ಅನುಗುಣವಾಗುವಂತೆ ಬಾಹುಬಲಿಯ ವ್ಯಕ್ತಿತ್ವವನ್ನು ಚಿಂತಕರು ಬರಹ ರೂಪಕ್ಕಿಳಿಸಿದ್ದಾರೆ.

ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ ಹೆಗ್ಗಡೆ ಅವರ ಸಂದರ್ಶನ ಆಧಾರಿತ ಬರಹಗಳನ್ನೂ ಈ ಸಂಚಿಕೆ ಒಳಗೊಂಡಿದೆ. ಡಿ. ಸುರೇಂದ್ರ ಕುಮಾರ್ ಪ್ರಧಾನ ಸಂಪಾದಕರಾಗಿ, ಡಾ. ಬಿ. ಯಶೋವರ್ಮ ಸಂಪಾದಕರಾಗಿ, ಡಾ. ಬಿ. ಪಿ. ಸಂಪತ್ ಕುಮಾರ್ ಹಾಗೂ ಡಾ. ಹಳೆಮನೆ ರಾಜಶೇಖರ ಅವರು ಸಹ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಸುದ್ದಿ, ಲೇಖನಗಳಿಗೆ www.bantwalnews.comಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.