ಸುದ್ದಿ, ಲೇಖನಗಳಿಗೆ www.bantwalnews.com – ಸಂಪಾದಕ: ಹರೀಶ ಮಾಂಬಾಡಿ
ಬಂಟ್ವಾಳ : ತಾಲೂಕಿನ ಇರಾ ಮತ್ತು ಕುರ್ನಾಡು ಗ್ರಾಮದಲ್ಲಿ ನಿರ್ಮಾಣವಾಗಲಿರುವ ಕೇಂದ್ರ ಕಾರಾಗೃಹ ಮತ್ತು ಅಧಿಕಾರಿಗಳ ವಸತಿ ಸಮುಚ್ಚಯದ ಜಮೀನು ಮಂಗಳವಾರ ಪರಿಶೀಲಿಸಿದ ಎಡಿಜಿಪಿ ಎನ್.ಎಸ್.ಮೇಘರಿಕ್ ಈ ಸಂಬಂಧ ಅಧಿಕಾರಿಗಳ ಜೊತೆ ಚರ್ಚಿಸಿ ಮಾಹಿತಿ ಪಡೆದರು.
ಪ್ರಸ್ತುತ ಮಂಗಳೂರು ಕೆನರಾ ಕಾಲೇಜ್ ಪಕ್ಕದಲ್ಲಿರುವ ಹಳೆಯ ಕಾರಾಗೃಹ ಜಾಗದ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ ಮಂಗಳೂರು ಕ್ಷೇತ್ರಕ್ಕೊಳಪಟ್ಟ ಬಂಟ್ವಾಳ ತಾಲೂಕಿನ ಇರಾ ಮತ್ತು ಕುರ್ನಾಡು ಸಮೀಪದ ಕೈಗಾರಿಕಾ ಪ್ರದೇಶ ಅಭಿವೃದ್ಧಿ ನಿಗಮ ನೀಡಿರುವ ಸುಮಾರು 64 ಎಕರೆ ಜಮೀನಿನಲ್ಲಿ 250 ಕೋ.ರೂ. ವೆಚ್ಚದಲ್ಲಿ 1000 ಕೈದಿಗಳಿಗೆ ವ್ಯವಸ್ಥೆಯ ಸುಸಜ್ಜಿತ ಕಾರಾಗೃಹ ಮತ್ತು ಸಮೀಪದಲ್ಲಿ ಅಧಿಕಾರಿಗಳ ವಸತಿಗೃಹ ನಿರ್ಮಾಣಕ್ಕೆ ಸರಕಾರ ಮುಂದಾಗಿದೆ. ಪ್ರಥಮ ಹಂತದಲ್ಲಿ 100 ಕೋಟಿ ವೆಚ್ಚದಲ್ಲಿ ಜೈಲು ನಿರ್ಮಾಣದ ಬಳಿಕ ಎರಡನೇ ಹಂತದಲ್ಲಿ ಅಧಿಕಾರಿಗಳ ವಸತಿಗೃಹ ನಿರ್ಮಾಣಕ್ಕೆಯೋಜನೆ ರೂಪಿಸಲಾಗಿದೆ. ಕಾರಾಗೃಹ ಮತ್ತು ವಸತಿ ಸಮುಚ್ಚಯದ ಪ್ರಸ್ತಾವನೆಗೆ ಆಡಳಿತಾತ್ಮಕ ಅನುಮೋದನೆಯ ಹಂತದಲ್ಲಿದೆ ಎಂದು ಎಡಿಜಿಪಿ ಮೇಘರಿಕ್ ತಿಳಿಸಿದ್ದಾರೆ.
ಪೋಲೀಸ್ ಆಯುಕ್ತ ಟಿ.ಆರ್.ಸುರೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಮ್.ಲಕ್ಮೀ ಪ್ರಸಾದ್, ಡಿ.ಸಿ.ಪಿ.ಉಮಾ, ಎ.ಸಿ.ಪಿ.ಶ್ರೀನಿವಾಸ ಗೌಡ,ಬಂಟ್ವಾಳ ಎ.ಎಸ್.ಪಿ.ಸೈದುಲ್ ಅಡಾವತ್ , ಜಿಲ್ಲಾ ಕಾರಾಗೃಹ ಅಧೀಕ್ಷಕ ಚಂದನ್ , ಪಿ.ಡಬ್ಲೂ.ಡಿ. ಸ .ಕಾ. ಇಂಜಿನಿಯರ್ ಉಮೇಶ್ ಭಟ್, ಬಂಟ್ವಾಳ ಗ್ರಾಮಾಂತರ ಎಸ್.ಐ.ಪ್ರಸನ್ನ, ಇರಾ ಪಂ. ಅಧ್ಯಕ್ಷ ಅಬ್ದುಲ್ ರಜಾಕ್ ಕುಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…