ಬಂಟ್ವಾಳ

ಪ್ರಧಾನಿ ಕನಸು ಈಡೇರಿಸಿದರೆ ಭಾರತ ಜಗತ್ತಿಗೆ ನಂ.1

  • ಬಂಟ್ವಾಳದಲ್ಲಿ ನಡೆದ ಉಜ್ವಲ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಪ್ರಹ್ಲಾದ ಜೋಷಿ

www.bantwalnews.com Editor: Harish Mambady

ಜಾಹೀರಾತು

ಬಂಟ್ವಾಳ ವರದಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಬಡತನವನ್ನು ಅನುಭವಿಸಿದ ಕಾರಣ ಅವರು ಜನರ ಸಂಕಷ್ಟಗಳನ್ನು ಅರಿತಿದ್ದಾರೆ. ಎಲ್ಲರಿಗೂ ಅಡುಗೆ ಅನಿಲ ವಿತರಣೆ ಯೋಜನೆಯನ್ನು ಯಶಸ್ವಿಯಾಗಿ ನಡೆಸುವುದರ ಮೂಲಕ ಜಗತ್ತಿನಲ್ಲಿ ಭಾರತ ತಲೆ ಎತ್ತಿ ನಿಲ್ಲುವ ಕೆಲಸ ಮಾಡಿದ್ದಾರೆ. ಭಾರತ ಜಗತ್ತಿನಲ್ಲಿ ಪ್ರಥಮ ಸ್ಥಾನ ಪಡೆಯುವ ಕಾಲ ಹತ್ತಿರ ಬರುತ್ತಿದೆ ಎಂದು ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ, ಸಂಸದ ಪ್ರಹ್ಲಾದ ಜೋಷಿ ಹೇಳಿದ್ದಾರೆ.

ಬಂಟ್ವಾಳದ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಮೈದಾನದಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಉಜ್ವಲ ಯೋಜನೆಯಡಿ ಎರಡನೇ ಹಂತದ ಉಚಿತ ಅಡುಗೆ ಅನಿಲ ವಿತರಣೆ ಮತ್ತು ಫಲಾನುಭವಿಗಳ ಸಮಾವೇಶದಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕುಡಿಯುವ ನೀರು ಮತ್ತು ನೈರ್ಮಲ್ಯ ಖಾತೆ ಸಚಿವ ರಮೇಶ್ ಜಿಗಜಿಣಗಿ ಮಾತನಾಡಿ, ಎಲ್ಪಿಜಿ ಸಂಪರ್ಕಗಳನ್ನು ಅಳವಡಿಸುವ ಮೂಲಕ ದೇಶಾದ್ಯಂತ ಬಡಜನರ ಸಂಕಷ್ಟಗಳನ್ನು ನಿವಾರಿಸುವ ಕಾರ್ಯವನ್ನು ಪ್ರಧಾನಿ ನಡೆಸುತ್ತಿದ್ದಾರೆ. ಎಲ್ಲ ಅಡುಗೆಮನೆಗಳನ್ನು ಹೊಗೆಮುಕ್ತ ಮಾಡಬೇಕು ಎಂಬ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಇದಾಗಿದೆ ಎಂದರು.

ಚಿಕ್ಕಮಗಳೂರು ಶಾಸಕ ಸಿ.ಟಿ.ರವಿ ಮಾತನಾಡಿ, ಬಡತನವನ್ನು ಪ್ರಧಾನಿ ಅನುಭವಿಸಿದವರು. ಅವರಿಗೆ ಯಾರೂ ಹೇಳಿಕೊಡಬೇಕಾಗಿಲ್ಲ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್, ಒಂದು ತಿಂಗಳ ಒಳಗೆ ದಕ್ಷಿಣ ಕನ್ನಡ ಜಿಲ್ಲೆ ಹೊಗೆಮುಕ್ತ ಜಿಲ್ಲೆಯಾಗಲಿದೆ ದಕ್ಷಿಣ ಕನ್ನಡ ಜಿಲ್ಲೆಗೆ 15 ಸಾವಿರ ಕೋಟಿ ರೂ ಅನುದಾನ ಕೇಂದ್ರದಿಂದ ಒದಗಿಸಲಾಗಿದೆ. 5 ವರ್ಷಗಳಲ್ಲಿ ದ.ಕ.ದ ಹಳ್ಳಿ ಹಳ್ಳಿಗೆ ಹಲವು ಯೋಜನೆ ರೂಪಿಸಲಾಗಿದೆ. ಭಾರತ್ ಮಾಲ್ ಯೋಜನೆಯಡಿ ಚತುಷ್ಪಥ ರಸ್ತೆಗಳು, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಯಾಗಲಿವೆ. ದ.ಕ.ಜಿಲ್ಲೆಗಳಲ್ಲಿ ಕೇಂದ್ರ ಯೋಜನೆಗಳನ್ನು ಬಿತ್ತರಿಸುವ 23 ಸಮಾವೇಶಗಳನ್ನು ಐದುವರ್ಷಗಳಲ್ಲಿ ನಡೆಸಲಾಗಿದೆ. 10 ದಿನಗಳಲ್ಲಿ ಬೆಳ್ತಂಗಡಿ ತಾಲೂಕು ಹೊಗೆಮುಕ್ತವಾಗಲಿದೆ ಎಂದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್ತು ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ, ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕರಾದ ವೇದವ್ಯಾಸ ಕಾಮತ್, ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಹರೀಶ್ ಪೂಂಜ, ಸಂಜೀವ ಮಠಂದೂರು, ಎಸ್.ಅಂಗಾರ, ಸಿ.ಟಿ.ರವಿ, ಐಒಸಿಎಲ್ ಮುಖ್ಯ ಜನರಲ್ ಮ್ಯಾನೇಜರ್ ಕೆ.ಶೈಲೇಂದ್ರ, ಬಿಡಿಎಂ ಬಿಪಿಸಿಎಲ್್ ಪ್ರೇಮನಾಥ್ ಟಿ, ಬಿಪಿಸಿಎಲ್ ಕರ್ನಾಟಕದ ಮುಖ್ಯಸ್ಥ ಪ್ರದೀಪ್ ನಾಯರ್ ಸಹಿತ ವಿವಿಧ ತೈಲ ಕಂಪನಿಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು.

ಬಿಪಿಸಿಎಲ್ ಪ್ರಾದೇಶಿಕ ಎಲ್ಪಿಜಿ ಮ್ಯಾನೇಜರ್ ತಂಗವೇಲು ಸ್ವಾಗತಿಸಿದರು. ಎಚ್.ಎ.ೆಲ್. ನ ಜೋನಲ್ ಹೆಡ್ ಅಂಬಾ ಭವಾನಿ ವಂದಿಸಿದರು. ಪತ್ರಕರ್ತ ಮನೋಹರ ಪ್ರಸಾದ್ ಮತ್ತು ಬಿಜೆಪಿ ಬಂಟ್ವಾಳ ಕ್ಷೇತ್ರಾಧ್ಯಕ್ಷ ದೇವದಾಸ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿದ್ದವರಿಗೆ ಬೃಹತ್ ಎಲ್.ಇಡಿ ಪರದೆ ಮೂಲಕ ಕೇಂದ್ರದ ವಿವಿಧ ಯೋಜನೆಗಳ ಮತ್ತು ಸವಲತ್ತುಗಳ ಮಾಹಿತಿ ನೀಡಲಾಯಿತು.

for Video Pls Click:

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.