ಬಂಟ್ವಾಳ

ವಿ.ಗ.ನಾಯಕ ಅವರಿಗೆ ನೀರ್ಪಾಜೆ ಪ್ರಶಸ್ತಿ ಪ್ರದಾನ

ಹಿರಿಯ ಕವಿ, ಸಾಹಿತಿ ವಿಮರ್ಶಕ ವಿ.ಗ.ನಾಯಕ ಅವರಿಗೆ ಕನ್ನಡದ ಕಲ್ಹಣ ದಿ.ನೀರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗ, ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಶನಿವಾರ ಬಂಟ್ವಾಳದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡದ ಕಲ್ಹಣ ದಿ.ನೀರ್ಪಾಜೆ ಭೀಮ ಭಟ್ಟ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ಜಾಹೀರಾತು

ಪ್ರಶಸ್ತಿ ಪ್ರದಾನ ಮಾಡಿ, ಸನ್ಮಾನ ನೆರವೇರಿಸಿ ಮಾತನಾಡಿದ ಮಾಜಿ ಸಚಿವ ಬಿ.ರಮಾನಾಥ ರೈ, ದಿ.ನೀರ್ಪಾಜೆ ಭೀಮ ಭಟ್ಟರೊಂದಿಗಿನ ಸಾಮಾಜಿಕ ಚಟುವಟಿಕೆಗಳ ಒಡನಾಟವನ್ನು ಸ್ಮರಿಸಿದರು. ಬಂಟ್ವಾಳದಲ್ಲಿ ಪಂಜೆ ಮಂಗೇಶರಾಯರ ಭವನಕ್ಕೆ ತನ್ನ ಅವಧಿಯಲ್ಲಿ ೫ ಕೋಟಿ ರೂ ಮಂಜೂರಾಗಿದ್ದು, ಹೆಚ್ಚುವರಿಯಾಗಿ 3 ಕೋಟಿ ರೂಗಳನ್ನು ಒದಗಿಸುವಂತೆ ತಾನು ಈಗಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಲ್ಲಿ ಕೇಳಿಕೊಂಡಿದ್ದೇನೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಸಾಪ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಮಾತನಾಡಿ, ಸಾಹಿತ್ಯ ಕ್ಷೇತ್ರದ ಸಾಧಕರ ಸ್ಮರಣೆ ನಿರಂತರವಾಗಿರಬೇಕು. ಕಾಲೇಜು ವಿದ್ಯಾರ್ಥಿಗಳಿಗೆ ಇಂಥ ಕಾರ್ಯಕ್ರಮಗಳು ತಲುಪಬೇಕು. ಅದಕ್ಕಾಗಿ ಇಂಥ ಕಾರ್ಯಕ್ರಮಗಳಿಗೆ ಕಾಲೇಜುಗಳು ವೇದಿಕೆಯೊದಗಿಸಬೇಕಾಗಿದ್ದು, ಯುವ ಪೀಳಿಗೆ ಹಿರಿಯರ ಬಗ್ಗೆ ತಿಳಿಯುವ ಕೆಲಸವಾಗಬೇಕು ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ವಿ.ಗ.ನಾಯಕ, ತಾನು ಹೊರಜಿಲ್ಲೆಯವನಾದರೂ ದ.ಕ.ಜಿಲ್ಲೆಯವನೇ ಆಗಿ ಬೆಳೆಯಲು ಅಡ್ಯನಡ್ಕದ ಡಾ. ವಾರಣಾಶಿ ಸುಬ್ರಾಯ ಭಟ್ಟರು, ಸಾಯ ಕೃಷ್ಣ ಭಟ್ಟರು ಮತ್ತು ದಿ.ನೀರ್ಪಾಜೆ ಭೀಮ ಭಟ್ಟರ ಒಡನಾಟ, ಪ್ರೋತ್ಸಾಹ ಕಾರಣವಾಗಿದೆ. ತನ್ನ ಜೀವನದುದ್ದಕ್ಕೂ ಸಾಹಿತ್ಯಾಭಿಮಾನಿಗಳು ಪ್ರೋತ್ಸಾಹ ನೀಡಿದ್ದು ಸಂತೃಪ್ತಿ ತಂದಿದೆ ಎಂದರು.

ಸನ್ಮಾನಿತರ ಪರಿಚಯವನ್ನು ಮಾಡಿದ ಬೇ.ಸಿ.ಗೋಪಾಲಕೃಷ್ಣ, ವಿ.ಗ.ನಾಯಕರು ವಿದ್ಯಾರ್ಥಿಗಳಿಗೆ ಮತ್ತು ಸಾಹಿತ್ಯಪ್ರಿಯರನ್ನು ಬೆಳೆಸುವ ಕಾರ್ಯ ಮಾಡಿದರು. ಸೂಕ್ಷ್ಮ ಅವಲೋಕನದೃಷ್ಟಿ ಹೊಂದಿರುವ ನಾಯಕರು, ಕಿರಿಯರನ್ನು ಪ್ರೋತ್ಸಾಹಿಸುವವರು ಎಂದರು.
19ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಪ್ರೊ.ತುಕಾರಾಮ ಪೂಜಾರಿ ಮಾತನಾಡಿ ನೀರ್ಪಾಜೆ ಅವರ ಕುರಿತು ಕಡೇಶಿವಾಲಯ ಶಾಲೆಯಲ್ಲಿ ಪ್ರಬಂಧ ಸ್ಪರ್ಧೆ ಆಯೋಜನೆಗೆ ತನ್ನ ಕೊಡುಗೆಯನ್ನು ಪ್ರಕಟಿಸಿ, ಪ್ರತಿ ವರ್ಷವೂ ಇಂಥ ಕಾರ್ಯಕ್ರಮಗಳು ನಡೆಯಬೇಕು ಎಂದರು. ಕೈಯೂರು ನಾರಾಯಣ ಭಟ್ ಸನ್ಮಾನಪತ್ರ ವಾಚಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ರಕಾಶ್, ಕನ್ನಡದ ಕಲ್ಹಣ ದಿ.ನೀರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗದ ಕೋಶಾಧಿಕಾರಿ ಕೊಳಕೆ ಗಂಗಾಧರ ಭಟ್ ಮತ್ತು ದಿ.ನೀರ್ಪಾಜೆ ಅವರ ಪತ್ನಿ ಶಂಕರಿ ಉಪಸ್ಥಿತರಿದ್ದರು. ಕನ್ನಡದ ಕಲ್ಹಣ ದಿ.ನೀರ್ಪಾಜೆ ಭೀಮ ಭಟ್ಟ ಅಭಿಮಾನಿ ಬಳಗದ ಅಧ್ಯಕ್ಷ ಬಿ.ತಮ್ಮಯ್ಯ ಸ್ವಾಗತಿಸಿದರು. ಕಸಾಪ ತಾಲೂಕು ಅಧ್ಯಕ್ಷ ಕೆ.ಮೋಹನ ರಾವ್ ವಂದಿಸಿದರು. ಉಪನ್ಯಾಸಕರಾದ ಡಿ.ಬಿ.ಅಬ್ದುಲ್ ರಹಮಾನ್ ಮತ್ತು ವಿ.ಸು.ಭಟ್ ಕಾರ್ಯಕ್ರಮ ನಿರೂಪಿಸಿದರು. ಇದಕ್ಕೂ ಮೊದಲು ಡಾ.ಪ್ರಮೀಳಾ ಕೊಳಕೆ ಮತ್ತು ಪಂಚಮಿ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

8 hours ago