ಬಂಟ್ವಾಳ

ತೆಂಗಿನ ಮೌಲ್ಯ ವರ್ಧನೆ ಮಾಡುವ ಮೂಲಕ ಉತ್ಪಾದನೆ ಹೆಚ್ಚಿಸಿ: ಸಂಜೀವ ನಾಯ್ಕ

ತೆಂಗು ಬೆಳೆಗೆ ಕೇಂದ್ರ ಸರಕಾರದಿಂದ ಅಪಾರ ಪ್ರಮಾಣದ ಯೋಜನೆಗಳಿದ್ದು ಅದನ್ನು ಕೃಷಿಕರು ಬಳಸಿಕೊಳ್ಳಬೇಕು. ತೆಂಗಿನಲ್ಲಿ ಯಾವುದೇ ವಸ್ತುವು ನಿರುಪಯೋಗಿ ಅಲ್ಲ. ತೆಂಗಿನ ಮರ, ಫಲ, ಗರಿಗಳು ಮಾನವ ಉಪಯೋಗಕ್ಕೆ ಬರುವುದು. ಅದಕ್ಕಾಗಿ ತೆಂಗನ್ನು ಕಲ್ಪವೃಕ್ಷ ಎಂದು ನಮ್ಮ ಹಿರಿಯರಿಂದ ಕರೆಯಲ್ಪಟ್ಟಿದೆ ಎಂದು ಉಡುಪಿ ತೋಟಗಾರಿಕಾ ಸಹಾಯಕ ನಿರ್ದೇಶಕ ಪಿ. ಸಂಜೀವ ನಾಯ್ಕ ತಿಳಿಸಿದರು.

ಜಾಹೀರಾತು

ಅವರು ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ಧ ಸಹಕಾರಿ ಬಂಟ್ವಾಳ ಆಶ್ರಯದಲ್ಲಿ ನರಿಕೊಂಬು ಗ್ರಾಮ ಶ್ರೀ ಏರಮಲೆ ಕಾಡೆದಿ ಭದ್ರಕಾಳಿ ದೇವಸ್ಥಾನ ವಠಾರದಲ್ಲಿ ರವಿವಾರ ನಡೆದ ತೆಂಗು ಬೆಳೆಗಾರರ ಸಮಾವೇಶ ಮತ್ತು ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಮಾತನಾಡಿದರು.

ತೆಂಗು ಕೃಷಿಕರು ತೆಂಗಿನ ಮೌಲ್ಯ ವರ್ಧನೆ ಮಾಡುವ ಮೂಲಕ ತಮ್ಮ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬೇಕು. ಮೊದಲಿಗೆ ೨೦ ಮಂದಿಯ ಒಂದು ಸಂಘವನ್ನು ಸ್ಥಾಪಿಸಿಕೊಂಡು ಹಂತ ಹಂತವಾಗಿ ಸದಸ್ಯತ್ವ ನೋಂದಾಯಿಸಿಕೊಂಡು ವಿಸ್ತರಣೆ ಮಾಡಿ ಸಂಘವನ್ನು ಮಂಡಳಿಯಾಗಿ ಭಡ್ತಿಗೊಳಿಸುವ ಮೂಲಕ ರಾಜ್ಯ ಸರಕಾರದಿಂದ ಸೌಲಭ್ಯವನ್ನು ಸಾಲವನ್ನು ಪಡೆಯುವ ಅವಕಾಶವಿದೆ. ಜಿಲ್ಲೆಯಲ್ಲಿ ಈಗಾಗಲೇ ಮಂಡಳಿಯ ಮಟ್ಟಕ್ಕೆ ಕೆಲವೊಂದು ಸಂಘಗಳು ಪದಾರ್ಪಣೆ ಮಾಡಿದೆ. ಇದೇ ಅವಕಾಶವನ್ನು ಬಂಟ್ವಾಳದ ಸದಸ್ಯರು ಕೂಡ ಪಡೆಯಬೇಕು ಎಂದರು.

ನೋಂದಾಯಿತ ತೆಂಗು ಕೃಷಿಕರಿಗೆ ಮಂಡಳಿಯ ಮೂಲಕ ರಾಸಾಯನಿಕ ಗೊಬ್ಬರ, ಕೀಟನಾಶಕ ಸಹಿತ ಇತರ ಸೌಲಭ್ಯಗಳು ದೊರೆಯಲಿದೆ ಎಂದರು.
ಸಂಘದ ಅಧ್ಯಕ್ಷ ರಾಜಾ ಬಂಟ್ವಾಳ ಸಭಾಧ್ಯಕ್ಷ ಸ್ಥಾನದಿಂದ ಮಾತನಾಡಿ ನಾವು ೨೦೧೨ರಲ್ಲಿ ತೆಂಗು ಬೆಳೆಗಾರರ ಉತ್ಪಾದಕರ ಸಂಘವನ್ನು ಸುಮಾರು ೨೦ ಜನ ಸೇರಿ ಸ್ಥಾಪಿಸಿದ್ದೇವು. ಆಗ ತೋಟಗಾರಿಕಾ ಸಹಾಯ ನಿರ್ದೇಶಕರಾಗಿದ್ದ ಸಂಜೀವ ನಾಯ್ಕರು ಮಾರ್ಗದರ್ಶನ ಮಾಡಿದ್ದರು. ಇಂದು ನಾವು ಸ್ಥಾಪಿಸಿ ಸಹಕಾರಿ ಸಂಘಕ್ಕೆ ಅವರೇ ಮುಂದಾಳಾಗಿ ಪ್ರಥಮ ಸಭೆಯನ್ನು ನಡೆಸುವಂತಾಗಿದೆ ಎಂದರು.
ಈಗಾಗಲೇ ಸದಸ್ಯತ್ವ ನೋಂದಾವನೆ ಆರಂಭ ಮಾಡಿದ್ದು ತಾಲೂಕಿನ ಎಲ್ಲ ಗ್ರಾಮಗಳಿಂದ ತೆಂಗು ಬೆಳೆಗಾರರು ಸದಸ್ಯರಾಗುವ ಮೂಲಕ ಸಂಘವನ್ನು ಬಲಪಡಿಸಬೇಕು. ಗರಿಷ್ಠ ಸಂಖ್ಯೆಯಲ್ಲಿ ಸದಸ್ಯತ್ವ ಪಡೆಯಬೇಕು. ನೀವು ಹಾಕಿದ ಷೇರಿಗೆ ಹೆಚ್ಚಿನ ಲಾಭ ಬರಬೇಕಾದರೆ ಗರಿಷ್ಠ ಮೊತ್ತದಿಂದ ಸದಸ್ಯತನವನ್ನು ಪಡೆಯಬೇಕು. ಒಬ್ಬ ವ್ಯಕ್ತಿ ಗರಿಷ್ಠ ಒಂದು ಲಕ್ಷದ ಷೇರು ಬಂಡವಾಳ ತೊಡಗಿಸಲು ಅವಕಾಶವಿದೆ ಎಂದು ವಿವರಿಸಿದರು.

ನಮ್ಮ ಸಹಕಾರಿ ಸಂಸ್ಥೆಯು ಇತರ ಸಹಕಾರಿ ಸಂಸ್ಥೆಗಳಂತೆ ಸಾಲ ನೀಡುವ ಅಥವಾ ಹಣಕಾಸು ವ್ಯವಹಾರದ ಕೆಲಸ ಮಾಡುವುದಿಲ್ಲ. ತೆಂಗು ಖರೀದಿ ಮತ್ತು ಮಾರಾಟದ ಮೂಲಕ ತೆಂಗು ಬೆಳೆಗಾರರಿಗೆ ಗರಿಷ್ಠ ಲಾಭ ಸಿಗುವ ರೀತಿಯಲ್ಲಿ ವ್ಯವಸ್ಥೆಗಳನ್ನು ಮಾಡಲಿದೆ. ಭವಿಷ್ಯದ ದಿನಗಳಲ್ಲಿ ತೆಂಗು ಇಳಿಸುವ ಮಾರಾಟ ಮಾಡುವ ಸಂಗ್ರಹ ಮಾಡುವ ಹಾಗೂ ಮೌಲ್ಯವರ್ಧನೆ ಉದ್ದೇಶಗಳನ್ನು ಹೊಂದಿದೆ ಎಂದರು.

ಪ್ರತಿ ಗ್ರಾಮ ಮಟ್ಟದಲ್ಲಿ ಸ್ಥಳೀಯ ತೆಂಗು ಕೃಷಿಕರು ನೋಂದಾಯಿಸಲು ಅವಕಾಶವಾಗುವಂತೆ ಸಭೆಯನ್ನು ನಡೆಸಲಾಗುವುದು. ಮುಂದಿನ ಸಭೆಯು ಶಂಭೂರು ಗ್ರಾಮದ ವ್ಯಾಯಾಮ ಶಾಲೆಯಲ್ಲಿ ಹಮ್ಮಿಕೊಳ್ಳಲು ಆಡಳಿತ ಮಂಡಳಿಯು ನಿರ್ಣಯಿಸಿದ್ದಾಗಿ ವಿವರಿಸಿದರು.

ಸಂಘದ ನಿರ್ದೇಶಕರಾದ ನಾರಾಯಣ ಪೂಜಾರಿ, ನವೀನ್ ಭಂಡಾರಿ, ಸದಾಶಿವ ಸಪಲ್ಯ, ನಾಗೇಶ್ ಕಲ್ಯಾರು, ವಿಠಲ ಸಪಲ್ಯ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪವಿತ್ರ ಗಣೇಶ್ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಜಯಾನಂದ ಪೆರಾಜೆ ಪ್ರಸ್ತಾವನೆ ನೀಡಿದರು, ಮೋಕ್ಷಿತ ಸ್ವಾಗತಿಸಿ, ರೋಹಿಣಿ ಪ್ರಮೋದ್ ಪ್ರಾರ್ಥಿಸಿದರು. ನಿರ್ದೇಶಕಿ ಅಂಬಿಕಾ ಹರೀಶ್ ವಂದಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.