ಬಂಟ್ವಾಳ

ವಿಶ್ವಕರ್ಮ ಸಮುದಾಯದವರು ಕ್ರಿಯಾಶೀಲರು: ರಮಾನಾಥ ರೈ

ವಿಶ್ವಕರ್ಮ ಸಮುದಾಯದವರ ಪ್ರತೀ ಚಿಂತನೆಗಳೂ ಕ್ರಿಯಾಶೀಲತೆ ಹಾಗೂ ಕಲಾತ್ಮಕತೆಯಿಂದ ಕೂಡಿರುತ್ತದೆ , ಇದು ಅವರಿಗೆ ರಕ್ತಗತವಾಗಿ ಬಂದ ಬಳುವಳಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಜಾಹೀರಾತು

ಬಂಟ್ವಾಳ ವಿಶ್ವಕರ್ಮ ಸಮಾಜಸೇವಾ ಸಂಘದ ವತಿಯಿಂದ  ಬಿ.ಸಿ.ರೋಡಿನ ಗೀತಾಂಜಲಿ ಸಭಾಂಗಣದಲ್ಲಿ ನಡೆದ ೨೫ ನೇ ವರ್ಷದ ವಿಶ್ವಕರ್ಮ ಪೂಜಾ ಮಹೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ಸಾಧಕರನ್ನು ಸನ್ಮಾನಿಸಿ ಮಾತನಾಡಿದರು.

ವಿಶ್ವಕರ್ಮ ಸಮುದಾಯ ಭವನ ನಿರ್ಮಾಣಕ್ಕೆ ಕಳೆದ ಸರ್ಕಾರದ ಅಧಿಕಾರವಧಿಯಲ್ಲಿ 75 ಲಕ್ಷ ಒದಗಿಸಿದ ಖುಷಿ ತನಗಿದೆ ಎಂದ ಅವರು, ಈ ಕಾರ್ಯ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ಶಕ್ತಿನಗರದ ಶಕ್ತಿ ಪಿ.ಯು.ಕಾಲೇಜಿನ ಆಡಳಿತಾಧಿಕಾರಿ ಬೈಕಾಡಿ ಜನಾರ್ಧನ ಆಚಾರ್ಯ ಮಾತನಾಡಿ, ವಿಶ್ವಕರ್ಮ ಸಮುದಾಯ ಆರ್ಥಿಕವಾಗಿ ಬಡವರಾದರೂ, ಕಲೆಯ ವಿಚಾರದಲ್ಲಿ ಎಲ್ಲರಿಗಿಂತಲೂ ಶ್ರೀಮಂತರು. ಕುಲಕಸುಬಿನ ಕಡೆಗಿನ ನಿರಾಸಕ್ತಿಯಿಂದಾಗಿ ಇಂದು ವಿಶ್ವಕರ್ಮ  ಸಮುದಾಯದ ಯುವ ಪೀಳಿಗೆಯ ಕಲಾತ್ಮಕತೆ ದೂರ ಸರಿಯುವ ಅಪಾಯವಿದೆ ಎಂದರು.

ಮೂಡಬಿದ್ರೆ ಎಸ್.ಕೆ.ಎಫ್. ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ರಾಮಕೃಷ್ಣ ಜಿ.ಆಚಾರ್ಯ ಮಾತನಾಡಿ, ವಿಶ್ವಕರ್ಮ ಸಮುದಾಯದಲ್ಲಿರುವ ಮಾನವ ಸಂಪನ್ಮೂಲದ ಸಮರ್ಪಕ ಬಳಕೆಯಾಗಬೇಕು. ಕೇವಲ ಬದುಕಿಗಾಗಿ ಕಾಯಕ ಎನ್ನುವ ಮನೋಭಾವ ಬಿಟ್ಟು ಬದುಕನ್ನು ಸುಂದರಗೊಳಿಸುವ ಗುರಿಯೂ ಇರಿಸಿಕೊಂಡಾಗ, ನಮ್ಮ ಕಾಯಕದಲ್ಲಿ ಉದ್ಯಮ ಶೀಲತೆಯ ಚುರುಕುತನ ಹೆಚ್ಚುತ್ತದೆ ಎಂದರು.

ಬಂಟ್ವಾಳ ವಿಶ್ವಕರ್ಮ ಸಮಾಜ ಸೇವಾ ಸಂಘದ ಅಧ್ಯಕ್ಷ ಸುಧಾಕರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ, ಕೆಂಪುಗಡ್ಡೆಯಲ್ಲಿ ನಿರ್ಮಾಣಗೊಳ್ಳುತ್ತಿರುವ  ವಿಶ್ವಕರ್ಮ ಸಮುದಾಯ ಭವನದಲ್ಲಿ ಸುಮಾರು ೪೦ ಲಕ್ಷ ರೂ ಗಳ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ವರ್ಷ ನಮ್ಮ ಸಂಘದ ಸ್ವಂತ ಸಮುದಾಯ ಭವನದಲ್ಲೇ ವಿಶ್ವಕರ್ಮ ಪೂಜಾ ಕಾರ್ಯಕ್ರಮ ನಡೆಯಬೇಕಾಗಿದ್ದು, ಕಾಮಗಾರಿ ಮತ್ತಷ್ಟು ವೇಗವಾಗಿ ನಡೆಯಲಿ ಸರ್ವರ ಸಹಕಾರ ಬೇಕಾಗಿದೆ ಎಂದರು.

ಈ ಸಂದರ್ಭ ರಂಗಕಲಾವಿದ ಸಂದೀಪ್ ಸೊರ್ನಾಡು ಹಾಗೂ ವಿಶೇಷ ಪ್ರತಿಭೆ ಕೌಶಿಕ್ ರವರನ್ನು ಸನ್ಮಾನಿಸಲಾಯಿತು.

ವಿಶ್ವಜ್ಯೋತಿ ಮಹಿಳಾ ಮಂಡಳಿ ಅಧ್ಯಕ್ಷೆ ಪುಷ್ಪಾ ಡಿ.ಆಚಾರ್ಯ, ಕಟ್ಟಡ ಸಮಿತಿ ಗೌರವಾಧ್ಯಕ್ಷ ಲೋಕೇಶ್ ಆಚಾರ್ಯ ಪೂಂಜಾಲಕಟ್ಟೆ, ಧಾರ್ಮಿಕ ಕಾರ್ಯದರ್ಶಿ ನಾರಾಯಣ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿಶ್ವಕರ್ಮ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಮನೋಜ್ ಆಚಾರ್ಯ ನಾಣ್ಯ ಸ್ವಾಗತಿಸಿದರು,  ಕಾರ್ಯದರ್ಶಿ ಸಂದೀಪ್ ಬಿ.ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಂಸ್ಕೃತಿಕ ಕಾರ್ಯದರ್ಶಿ ಸುನಿಲ್ ವಿಜ್ಞಾಪನಾ ಪತ್ರ ವಾಚಿಸಿದರು. ಜೊತೆ ಕಾರ್ಯದರ್ಶಿ ಅಶೋಕ್ ಆಚಾರ್ಯ, ಜಯಪ್ರಕಾಶ್ ಭಂಡಾರಿಬೆಟ್ಟು, ಉಮೇಶ್ ಆಚಾರ್ಯ ಸಹಕರಿಸಿದರು. ಕೋಶಾಧಿಕಾರಿ ಜಯಚಂದ್ರ ಆಚಾರ್ಯ ವಂದಿಸಿದರು.

ಮೌನೇಶ ವಿಶ್ವಕರ್ಮ ಹಾಗೂ ಪ್ರಕಾಶ್ ಆಚಾರ್ಯ ತುಂಬೆ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭ ರಮೇಶ್ ಪುರೋಹಿತ್ ನೇತೃತ್ವದಲ್ಲಿ ಧಾರ್ಮಿಕ ವಿಧಾನಗಳೊಂದಿಗೆ ವಿಶ್ವಕರ್ಮ ಪೂಜೆ ನಡೆಯಿತು.

ಇದೇ ಸಂದರ್ಭದಲ್ಲಿ ಬಂಟ್ವಾಳ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದಮಾಜಿ ಸಚಿವ ಬಿ.ರಮಾನಾಥ ರೈ ಯವರನ್ನು ಸನ್ಮಾನಿಸಲಾಯಿತು. ಅಪರಾಹ್ನದ ಬಳಿಕ ರಮೇಶ್ ಕಲ್ಲಡ್ಕ ಹಾಗೂ ನಿತಿನ್ ಕಲ್ಲಡ್ಕ ನಿರ್ದೇಶನದಲ್ಲಿ ವಿಶ್ವಜ್ಯೋತಿ ಮಹಿಳಾಮಂಡಳಿಯ ಸದಸ್ಯೆಯರಿಂದ ಹಾಗೂ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.