ಬಂಟ್ವಾಳ

ಬಹುಮತವಿಲ್ಲದಿದ್ದರೆ ವಿರೋಧ ಪಕ್ಷದಲ್ಲಿ ಕೂರಲು ಕಾಂಗ್ರೆಸ್, ಬಿಜೆಪಿ ರೆಡಿ

ಬಂಟ್ವಾಳ ಪುರಸಭೆ ಚುನಾವಣೆಯಲ್ಲಿ ಆಡಳಿತ ನಡೆಸಲು ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಹೀಗೆಂದು ಕಾಂಗ್ರೆಸ್ ಮತ್ತು ಬಿಜೆಪಿ ಸ್ಪಷ್ಟಪಡಿಸಿದರೆ, ಸಮಾನ ಮನಸ್ಕ ಜನಪ್ರತಿನಿಧಿಗಳೊಂದಿಗೆ ಆಡಳಿತ ನಡೆಸುವುದಾಗಿ ಎಸ್.ಡಿ.ಪಿ.ಐ. ಹೇಳಿದೆ.

ಜಾಹೀರಾತು

ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಮಾಧ್ಯಮ ಸಂವಾದದಲ್ಲಿ ಹಲವು ವಿಚಾರಗಳು ಚರ್ಚೆಗೆ ಬಂದವು.
ಕಾಂಗ್ರೆಸ್ ನಿಂದ ನಿಕಟಪೂರ್ವ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಬಿಜೆಪಿಯಿಂದ ಕ್ಷೇತ್ರ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಎಸ್.ಡಿ.ಪಿ.ಐ.ನಿಂದ ಬಂಟ್ವಾಳ ಪುರಸಭೆ ಘಟಕ ಅಧ್ಯಕ್ಷ ಮೊನೀಶ್ ಆಲಿ ಮತ್ತು ಜೆಡಿಎಸ್ ನಿಂದ ಹಾರೂನ್ ರಶೀದ್ ಸಂವಾದದಲ್ಲಿ ಪಾಲ್ಗೊಂಡಿದ್ದರು.

ಕಳೆದ ಅವಧಿಯಲ್ಲಿ ಗರಿಷ್ಠ ಮೊತ್ತದ ಅನುದಾನವನ್ನು ಮಾಜಿ ಸಚಿವ ರಮಾನಾಥ ರೈ ಅವರ ಮುತುವರ್ಜಿಯಿಂದ ಪುರಸಭೆಗೆ ಒದಗಿಸಲಾಗಿದ್ದು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ ಕಾಂಗ್ರೆಸ್ ನ ರಾಮಕೃಷ್ಣ ಆಳ್ವ, ಮುಂದೆಯೂ ಮಂಜೂರುಗೊಂಡ ಯೋಜನೆಗಳನ್ನು ಕಾರ್ಯಗತಗೊಳಿಸುವುದು ಹಾಗೂ ಬಂಟ್ವಾಳದ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಈ ಸಂದರ್ಭ ಮಾತನಾಡಿದ ಬಿಜೆಪಿಯ ದೇವದಾಸ ಶೆಟ್ಟಿ, ಕಾಂಗ್ರೆಸ್ ಆಡಳಿತದ ಅವಯಲ್ಲಿ ಆಯವ್ಯಯದಲ್ಲಿ ಲೋಪದೋಷಗಳಾಗಿವೆ, ಹಲವು ಹಗರಣಗಳು ನಡೆದಿವೆ ಎಂದು ಆರೋಪಿಸಿ, ಬಂಟ್ವಾಳವನ್ನು ಭ್ರಷ್ಟಾಚಾರಮುಕ್ತ ಹಾಗೂ ಪಾರದರ್ಶಕ ಆಡಳಿತ ನಡೆಸುವುದು ಬಿಜೆಪಿಯ ಸಂಕಲ್ಪ ಎಂದರು.

ಪುರಸಭೆ ವ್ಯಾಪ್ತಿಯ ಬೀದಿ ಬದಿ ವ್ಯಾಪಾರಸ್ಥರಿಗೆ ವ್ಯವಸ್ಥಿತ ಮಾರುಕಟ್ಟೆ, ಕುರಿತು ಪ್ರಶ್ನೆಗೆ ಉತ್ತರಿಸಿದ ದೇವದಾಸ ಶೆಟ್ಟಿ ವಾರದ ಸಂತೆ ನಡೆಸುವುದು, ಬೀದಿಬದಿ ವ್ಯಾಪಾರಸ್ಥರಿಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಲಾಗುವುದು ಎಂದರು. ಈಗಾಗಲೇ ಅದಕ್ಕೆ ತನ್ನ ಆಡಳಿತ ಅವಯಲ್ಲಿ ಜಾಗ ಗುರುತಿಸಲಾಗಿದ್ದು, ಚುನಾವಣಾ ಘೋಷಣೆ ಹಿನ್ನೆಲೆಯಲ್ಲಿ ಕಾರ್ಯಗತಗೊಳ್ಳಲಿಲ್ಲ ಎಂದು ಆಳ್ವ ಹೇಳಿದರು.

ತ್ಯಾಜ್ಯ ವಿಲೇವಾರಿ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಎಸ್.ಡಿ.ಪಿ.ಐ.ನ ಮೊನೀಶ್ ಆಲಿ, ಮನೆ, ಮಳಿಗೆಗಳಿಂದಲೇ ತ್ಯಾಜ್ಯವನ್ನು ಸಮರ್ಪಕವಾಗಿ ತೆಗೆದುಕೊಂಡು ಹೋಗುವ ವ್ಯವಸ್ಥೆ ನಿರ್ಮಾಣ ಆಗಿಲ್ಲ. ತಮ್ಮ ಆಡಳಿತ ಅವಯಲ್ಲಿ ಕಸ ವಿಲೇವಾರಿಯನ್ನು ಸುಸಜ್ಜಿತಗೊಳಿಸುವುದು ಆದ್ಯತೆ ಎಂದರೆ, ಬಿಜೆಪಿಯ ದೇವದಾಸ ಶೆಟ್ಟಿ ಅವರು, ಕಂಚಿನಡ್ಕಪದವಿನಲ್ಲಿ ನಮ್ಮ ಸರಕಾರ ಇದ್ದಾಗ ತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಜಾಗ ಗುರುತಿಸಿತ್ತು. ಆದರೆ ಆಡಳಿತ ಬದಲಾದ ಬಳಿಕ ಅದನ್ನು ಮುಂದುವರಿಸಲು ಆಗಿರಲಿಲ್ಲ ಎಂದು ದನಿಗೂಡಿಸಿದರು. ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ನ ರಾಮಕೃಷ್ಣ ಆಳ್ವ, ಪೈರೋಲಿಸಿಸ್ ಯಂತ್ರ ಅಳವಡಿಸಿ ಸಮಗ್ರ ತ್ಯಾಜ್ಯ ವಿಲೇವಾರಿ ನಡೆಸುವುದಾಗಿ ಹೇಳಿದರು.

ಪ್ಲಾಸ್ಟಿಕ್ ಮುಕ್ತ ಪುರಸಭೆಯಾಗಲು ಸರಕಾರ ಮುತುವರ್ಜಿ ವಹಿಸಬೇಕು ಎಂದು ಆಳ್ವ ಹೇಳಿದರೆ, ಜನಜಾಗೃತಿ ಆಗಬೇಕು ಎಂದು ಶೆಟ್ಟಿ ಹೇಳಿದರು.
ಮೂಲಭೂತ ಸೌಕರ್ಯಗಳನ್ನು ಜನರಿಗೆ ತಲುಪಿಸುವ ಮಧ್ಯವರ್ತಿಯಾಗಿ ಸ್ವಚ್ಛ ಆಡಳಿತ ನಡೆಸುವುದಾಗಿ ಮೊನೀಶ್ ಆಲಿ ಹೇಳಿದರೆ, ಸಿಎಂ ಕುಮಾರಸ್ವಾಮಿ ಅವರ ಮುತುವರ್ಜಿಯಿಂದ ಗರಿಷ್ಠ ಅನುದಾನವನ್ನ ತರಿಸುವುದಾಗಿ ಹಾರೂನ್ ರಶೀದ್ ಹೇಳಿದರು.

ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ ಮಾಂಬಾಡಿ ಸಮನ್ವಯಕಾರರಾಗಿ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಮೊಹಮ್ಮದ್ ಆಲಿ ವಂದಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಪತ್ರಕರ್ತರಾದ ವೆಂಕಟೇಶ ಬಂಟ್ವಾಳ, ರಾಜಾ ಬಂಟ್ವಾಳ, ಯಾದವ ಅಗ್ರಬೈಲು, ಅಬ್ದುಲ್ ರಹಿಮಾನ್ ತಲಪಾಡಿ, ಎ. ಗೋಪಾಲ ಅಂಚನ್, ಸಂದೀಪ್ ಸಾಲ್ಯಾನ್, ವಾಮನ ಪೂಜಾರಿ, ಲತೀಫ್ ನೇರಳಕಟ್ಟೆ, ರತ್ನದೇವ ಪುಂಜಾಲಕಟ್ಟೆ, ಚಂದ್ರಶೇಖರ ಕಲ್ಮಲೆ, ಮೋಹನ್ ಕೆ. ಶ್ರೀಯಾನ್, ಜಯಾನಂದ ಪೆರಾಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.