ಆರಾಧನೆ

ಧರ್ಮಸಂಸದ್ , ಪಟ್ಟಾಭಿಷೇಕ ದಶಮಾನೋತ್ಸವಕ್ಕೆ ಸಜ್ಜಾಗುತ್ತಿದೆ ಕನ್ಯಾಡಿ ಶ್ರೀರಾಮ ಕ್ಷೇತ್ರ

www.bantwalnews.comಸಂಪಾದಕ: ಹರೀಶ ಮಾಂಬಾಡಿ

 

ಜಾಹೀರಾತು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ ಸೇರಿದ, ಧರ್ಮಸ್ಥಳ ಗ್ರಾಮದ, ಕನ್ಯಾಡಿಯ ಶ್ರೀರಾಮ ಕ್ಷೇತ್ರ ಸೆ.3ರಂದು ಐತಿಹಾಸಿಕ ಕಾರ್ಯಕ್ರಮವೊಂದಕ್ಕೆ ಸಜ್ಜಾಗುತ್ತಿದೆ.

ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಸದ್ಗುರು ಪಟ್ಟಾಭಿಷೇಕ ದಶಮಾನೋತ್ಸವ ಮತ್ತು ಧರ್ಮಸಂಸದ್ 2018 ಕಾರ್ಯಕ್ರಮಕ್ಕೆ ರಾಷ್ಟ್ರದಾದ್ಯಂತ ನೆಲೆಸಿರುವ  2 ಸಾವಿರಕ್ಕೂ ಅಧಿಕ ಸಂತರು ಭಾಗವಹಿಸುವುದು ವಿಶೇಷ.

ಸೆ.2ರಂದು ಹಿಮಾಲಯದಿಂದ ಹಾಗೂ ಭಾರತದ ಬೇರೆ ಬೇರೆ ಭಾಗಗಳಿಂದ ಶ್ರೀರಾಮಕ್ಷೇತ್ರಕ್ಕೆ ಸಾಧು ಸಂತರು ಆಗಮಿಸಲಿದ್ದಾರೆ. 3ರಂದು ಬೆಳಗ್ಗೆ 7 ಗಂಟೆಯಿಂದ ಶ್ರೀರಾಮ ತಾರಕ ಮಂತ್ರ ಯಜ್ಞ ನಡೆಯಲಿದೆ. ಬೆಳಗ್ಗೆ 9 ಗಂಟೆಯಿಂದ ಹಿಮಾಲಯದ ಸಾಧು-ಸಂತರ ಶೋಭಾಯಾತ್ರೆ, ಬೆಳಗ್ಗೆ 11 ಗಂಟೆಯಿಂದ ಸ್ವಾಮೀಜಿಯವರ ಪಟ್ಟಾಭಿಷೇಕ ಪೀಠಾರೋಹಣ 10ನೇ ವರ್ಷಾಚರಣೆ. ಧರ್ಮಸಂಸದ್ ಉದ್ಘಾಟನೆ ಹಾಗೂ ಲೋಕಕಲ್ಯಾಣದ ಬಗ್ಗೆ ಸಾಧು ಸಂತರಿಂದ ದಿವ್ಯ ಸಂದೇಶ ಒದಗಲಿದೆ.

ಲೋಕಕಲ್ಯಾಣಕ್ಕಾಗಿ ಇಡೀ ಭಾರತದ 2 ಸಾವಿರದಷ್ಟು ತಪಸ್ವಿ ಸಂತರನ್ನು ತರಿಸಿ, ಶ್ರೀರಾಮ ತಾರಕ ಮಂತ್ರ ಯಜ್ಞ ನಡೆಸಿ, ಅದರ ಮುಖೇನ ಇಡೀ ವಿಶ್ವಕ್ಕೆ ಕಲ್ಯಾಣವಾಗುವ ಧರ್ಮಸಂಸದ್ ಇದು. ಸನಾತನ ಧರ್ಮ ಜಾಗರಣ ಉದ್ದೇಶ.

ದಕ್ಷಿಣದ ಅಯೋಧ್ಯೆ ಎಂಬ ಖ್ಯಾತಿ ಹೊಂದಿರುವ ಶ್ರೀರಾಮ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಉಜಿರೆ ಎಂಬ ಪಟ್ಟಣದ ಮೂಲಕ ಧರ್ಮಸ್ಥಳಕ್ಕೆ ಹೋಗುವ ದಾರಿಯಲ್ಲಿ, ಧರ್ಮಸ್ಥಳಕ್ಕೆ ಮುನ್ನವೇ ಅದರ ಉಪ ಗ್ರಾಮವಾದ ನಿತ್ಯಾನಂದ ನಗರದ ರಾಮಕ್ಷೇತ್ರವು ಎದುರಾಗುತ್ತದೆ. ಮುಖ್ಯರಸ್ತೆಯ ಮಗ್ಗುಲಿನಲ್ಲಿಯೇ ತನ್ನ ಭವ್ಯತೆಯಿಂದಲೂ, ಕಲಾತ್ಮಕ ಸೌಂದರ್ಯದಿಂದಲೂ ಕಣ್ಸೆಳೆಯುವ ಶ್ರೀರಾಮ ದೇವಾಲಯವು ಗೋಚರಿಸುತ್ತದೆ.

1927ರಲ್ಲಿ ಮುಂಬೈನ ವಜ್ರೇಶ್ವರಿಯ ಭಗವಾನ್ ನಿತ್ಯಾನಂದರು ಈ ಪ್ರದೇಶಕ್ಕೆ ಆಗಮಿಸಿ ಇಲ್ಲಿ ಒಂದು ದಿವಸ ತಂಗಿದ್ದು ಈ ಭೂಮಿಯನ್ನು ಪಾವನಗೊಳಿಸಿದರು. ಇಡೀ ದೇಶದಲ್ಲಿ ಕಣ್ಮನ ಸೆಳೆಯುವ ಶ್ರೀ ಕ್ಷೇತ್ರದ ಹಿಂದಿನ ನಿರ್ಮಾತೃ ಶಕ್ತಿ ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿ. ಅವರ ಸಮಾಧಿ ಬಳಿಕ ಶ್ರೀ ರಾಮಕ್ಷೇತ್ರದ ಗುರುಪೀಠದ ಉತ್ತರಾಧಿಕಾರಿಯಾಗಿ ಪೀಠಾರೋಹಣ ಮಾಡಿದವರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ. ಗುರುಪೀಠದ ವತಿಯಿಂದ ಭಾರತದಾದ್ಯಂತ 9 ಕಡೆ ಶಾಖಾ ಮಠಗಳನ್ನು ಮಾಡಬೇಕು ಎಂಬ ಸಂಕಲ್ಪ ಹೊಂದಿರುವ ಅವರು, ವಸುದೈವ ಕುಟುಂಬಕಂ ಎಂಬ ತತ್ವದಡಿ ಎಲ್ಲ ಜಾತಿ, ಜನಾಂಗಗಳಲ್ಲಿ ಸಂಸ್ಕಾರಯುತ ಪ್ರಜೆಗಳನ್ನು ನಿರ್ಮಿಸುವ ಕೆಲಸವನ್ನು ಅಹೋರಾತ್ರಿ ಮಾಡುತ್ತಿದ್ದಾರೆ.

ಇವರಿಗೆ ಪೂರಕವಾಗಿ ಭಕ್ತರ ಸಮಿತಿಯು ರಚನೆಯಾಗಿದ್ದು, ಸ್ವಾಮೀಜಿಯವರ ನೇತೃತ್ವದಲ್ಲಿ ನಾಡಿನಾದ್ಯಂತ ಸಂಚರಿಸುತ್ತಾ ಧರ್ಮಜಾಗೃತಿಯನ್ನು ಮಾಡುತ್ತಿದೆ. ಅಲ್ಲಲ್ಲಿ ಸಭೆಗಳನ್ನು ನಡೆಸಿ ಧರ್ಮಸಂಸದ್ ಉದ್ದೇಶವನ್ನು ಸಾರುತ್ತಿದ್ದಾರೆ. ಶಾಸಕರು, ಮಂತ್ರಿಗಳು, ಸಂಸದರಾದಿಯಾಗಿ ಹೋದಲ್ಲೆಡೆ ಸ್ವಾಮೀಜಿಯವರ ಕನಸು ನನಸು ಮಾಡುವ ನಿಟ್ಟಿನಲ್ಲಿ ಬೆಂಬಲ ದೊರಕುತ್ತಿದೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.