ಬಂಟ್ವಾಳ

ಇಡೀ ದಿನ ಮಳೆ, ಬಂಟ್ವಾಳ ತಾಲೂಕಿನ ಹಲವೆಡೆ ಹಾನಿ

ವಿಧಾನಪರಿಷತ್ತು ಚುನಾವಣೆ ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆ ಇಡೀ ದಿನ ಮಳೆ ಸುರಿದು ವಾತಾವರಣವನ್ನು ಥಂಡಿಯಾಗಿಸಿತು. ಬೆಳಗ್ಗೆ ಕೆಲಹೊತ್ತು ಬಿಸಿಲು ಕಂಡುಬಂದದ್ದು ಬಿಟ್ಟರೆ ಇಡೀ ಬಂಟ್ವಾಳ ತಾಲೂಕಿನಲ್ಲಿ ಮಳೆಯದ್ದೇ ಕಾರುಬಾರು.

ತಾಲೂಕು ಆಡಳಿತ ಮುನ್ನೆಚ್ಚರಿಕೆ ವಹಿಸಿದ್ದು, ಎಲ್ಲಾ ಅಧಿಕಾರಿಗಳನ್ನು ಕರ್ತವ್ಯದ ಕೇಂದ್ರ ಸ್ಥಾನದಲ್ಲಿರುವಂತೆ ಸೂಚಿಸಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮಳೆ ನೀರು ಸುಗಮವಾಗಿ ಹರಿಯಲು ಸೂಕ್ತ ಚರಂಡಿ ವ್ಯವಸ್ಥೆ ಮಾಡುವಂತೆ ಸೂಚನೆಯನ್ನು ನೀಡಲಾಗಿದೆ. ನದಿ ತಟಗಳಲ್ಲಿ ತೀವ್ರ ಮುನ್ನೆಚ್ಚರಿಕೆ ವಹಿಸಲಾಗಿದ್ದು ರಬ್ಬರ ಬೋಟ್ ಗಳನ್ನು ಸಿದ್ದಪಡಿಸಲಾಗಿದೆ. ಈಜುಪಟುಗಳನ್ನು ಗುರುತಿಸಿ ಸಂಪರ್ಕದಲ್ಲಿರಿಸಿಕೊಳ್ಳಲಾಗಿದೆ. ಹಳೆಯ ಮರಗಳು ಹಾಗೂ ಕುಸಿಯುವ ಹಂತದ ಗುಡ್ಡೆಗಳ ಬಗ್ಗೆ ವಿಶೇಷ ಗಮನ ಇರಿಸಲಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ವೈ.ರವಿ ತಿಳಿಸಿದ್ದಾರೆ.

ಜಾಹೀರಾತು

ಸಜಿಪಪಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿಲ ಇಡಿಪಡ್ಪು ಎಂಬಲ್ಲಿ ಕಿರು ನೀರಾವರಿ ಯೋಜನೆ ಕೊಳವೆ ಬಾವಿಯ ಮತ್ತು ಪಂಪ್ ಹೌಸ್ ಮುಳುಗಿದೆ.

ಮಳೆಯಿಂದ ಏನೇನು ಅನಾಹುತಗಳಾದವು ಇಲ್ಲಿದೆ ವಿವರ.

  • ತುಂಬೆ ವೆಂಟೆಡ್ ಡ್ಯಾಂನಲ್ಲಿ 6 ಮೀ ನಷ್ಟು ಎತ್ತರದ ನೀರನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ಹೊರ ಬಿಡಲು ಡ್ಯಾಂನ ನಾಲ್ಕು ಬಾಗಿಲುಗಳನ್ನು ತೆರೆಯಲಾಗಿದೆ.
  • ಸಜಿಪಪಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿಲ ಇಡಿಪಡ್ಪು ಎಂಬಲ್ಲಿ ಸಾರ್ವಜನಿಕ ಕುಡಿಯುವ ಕಿರು ನೀರಾವರಿ ಯೋಜನೆ ಕೊಳವೆ ಬಾವಿಯ ಮತ್ತು ಪಂಪ್ ಹೌಸ್ ಮುಳುಗಿದ್ದು, ಗ್ರಾಮದ ಜನರಿಗೆ ಕುಡಿಯಲು ನೀರಿಲ್ಲ ಎನ್ನುವ ಸ್ಥಿತಿ ನಿರ್ಮಾಣಗೊಂಡಿದೆ.
  • ವಿಟ್ಲ ಕಸ್ಬಾ ಗ್ರಾಮದ ಪಳಿಕೆ ಅನ್ನಮೂಲೆ ಹರೀಶ್ ಪೂಜಾರಿಯವರ ಆವರಣ ಗೋಡೆಯು ನಿನ್ನೆ ರಾತ್ರಿ ಸುರಿದ ಮಳೆಗೆ ಜರಿದು ಹತ್ತಿರದ ಮನೆಗೆ ಬಿದ್ದು ಹಾನಿಯಾಗಿದೆ.
  • ಬಿ. ಸಿ. ರೋಡ್ ಮತ್ತು ಪೊಳಲಿ ಮಧ್ಯೆ ಕಲ್ಲಗುಡ್ಡೆಯ ಡೋಮಿನಿಕ್ ಶಾಲೆಯ ಎದುರು ರಸ್ತೆ ಬದಿಯಲ್ಲಿದ್ದ ಬೃಹತ್ ಪುನರ್‌ಪುಳಿ(ಅಂಡಿ ಪುನರ್) ಮರವೊಂದು ಜೂನ್ 7ರಂದು ರಾತ್ರಿ ಕುಸಿದು ಬಿದ್ದ ಪರಿಣಾಮ  ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು.
  • ಕೈಕಂಬದಲ್ಲಿ ಮರವೊಂದು ಗೂಡಂಗಡಿಯೊಂದರ ಮೇಲೆ ಬಿದ್ದು ಹಾನಿ ಸಂಭವಿಸಿದೆ. ಮಾಣಿಲ ಗ್ರಾಮದಲ್ಲಿ ಮೂರು ಮನೆಗಳಿಗೆ ಹಾನಿಯಾಗಿದೆ. ಇಲ್ಲಿನ ಭಾಗೀರಥಿ, ಐತಕೊರಗ, ಕೃಷ್ಣ ನಾಯ್ಕ ಎಂಬವರ ಮನೆಗಳಿಗೆ ಹಾನಿಯಾಗಿವೆ ಎಂದು ಕಂದಾಯ ಇಲಾಖೆ ಕಚೇರಿ ಮಾಹಿತಿ ನೀಡಿದೆ.

 

 

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.