ಬಂಟ್ವಾಳ

ಬಂಟ್ವಾಳ ಪೊಲೀಸರಿಂದ ದರೋಡೆಕೋರರ ಹಿಡಿಯಲು ಫೈರಿಂಗ್, ಮೂವರ ಬಂಧನ

www.bantwalnews.com – ಸಂಪಾದಕ: ಹರೀಶ ಮಾಂಬಾಡಿ

ಜಾಹೀರಾತು

ವಾಹನ ತಡೆದು ದರೋಡೆ ಮಾಡುವುದು, ದನ ಕಳ್ಳತನ ಮಾಡುವ ಉದ್ದೇಶದಿಂದ ಕಾರಿನಲ್ಲಿ ಮಾರಕಾಯುಧಗಳನ್ನು ಹಿಡಿದುಕೊಂಡು ತೆರಳುತ್ತಿದ್ದ ತಂಡ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಂಡ ಸಂದರ್ಭ ಅವರ ಮೇಲೆ ಫೈರಿಂಗ್ ಮಾಡಿ, ಬೆನ್ನಟ್ಟಿ ಸಿನಿಮೀಯ ರೀತಿಯಲ್ಲಿ ಹಿಡಿದ ಬಂಟ್ವಾಳ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಆರೋಪಿಗಳಲ್ಲಿ ಓರ್ವನಾದ ಸುರತ್ಕಲ್ ನ ಮೊಹಮ್ಮದ್ ಮುಕ್ಸಿನ್ (23) ಮೇಲೆ ವಿವಿಧ ಠಾಣೆಗಳಲ್ಲಿ 14 ಕ್ಕೂ ಹೆಚ್ಚು ಪ್ರಕರಣಗಳಿವೆ. ಮತ್ತೋರ್ವ ಮೊಹಮ್ಮದ್ ಇರ್ಷಾದ್ (29) ಮಂಗಳೂರಿನ ಕುಪ್ಪೆಪದವು ನಿವಾಸಿ. ಇನ್ನೋರ್ವ ಸದ್ದಾಂ ಮಾರಿಪಳ್ಳ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಕೊಲೆ ಯತ್ನದ ಪ್ರಕರಣವಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ ಸಂಖ್ಯೆ 94/18 ಕಲಂ 307,353,399,402 IPC ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಅಮ್ಮೆಮಾರ್ ನಿವಾಸಿ ಮನ್ಸೂರ್ ಮತ್ತು ಅಮ್ಮಿ ಪರಾರಿಯಾಗಿದ್ದು, ಇವರ ಬಂಧನಕ್ಕೆ ಪೋಲೀಸರು ಬಲೆ ಬೀಸಿದ್ದಾರೆ.

ಗುರುವಾರ ತಡರಾತ್ರಿ ಘಟನೆ ನಡೆದಿದ್ದು, ಪೊಲೀಸರ ಕಾರ್ಯಾಚರಣೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ಶ್ಲಾಘಿಸಿದ್ದು, ಈ ರೀತಿ ಕಾನೂನುಬಾಹಿರ ಕೃತ್ಯ ಎಸಗುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಬಂಟ್ವಾಳ ನಗರ ಪಿಎಸ್ ಐ ಚಂದ್ರಶೇಖರ್ ಮತ್ತು ಗ್ರಾಮಾಂತರ ಪಿಎಸ್.ಐ ಪ್ರಸನ್ನ ಗುಂಡು ಹಾರಿಸಿ ಕಾರ್ಯಾಚರಣೆ ನಡೆಸಿದವರು. ಅವರೊಂದಿಗೆ ಪ್ರೊಬೆಷನರಿ ಐಪಿಎಸ್ ಅಕ್ಷಯ್ ಎಮ್ ಹಾಕೆ , ಸಿಬ್ಬಂದಿಗಳಾದ ನಜೀರ್, ಸಂಪತ್, ಆದರ್ಶ, ಭಾಸ್ಕರ್ ಪಾಲ್ಗೊಂಡಿದ್ದರು.

ಬಂಟ್ವಾಳ ಪೊಲೀಸರು ಗುಂಡು ಹಾರಿಸಿ, ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಕಾರ್ಯಾಚರಣೆ ನಡೆಸಿ ದರೋಡೆ ಮತ್ತು ಗೋಕಳವು ಮಾಡಲು ಯತ್ನಿಸಿದ ಆರೋಪಿಗಳನ್ನು ಬಂಧಿಸಿದ ಪ್ರಕರಣ ಸಾರ್ವತ್ರಿಕ ಶ್ಲಾಘನೆಗೆ ಪಾತ್ರವಾಗಿದೆ. ಪದೇ ಪದೇ ಅಶಾಂತಿ ತಲೆದೋರುತ್ತಿದ್ದ ಬಂಟ್ವಾಳ ಠಾಣೆಯಲ್ಲಿ ಯುವ ಪೊಲೀಸ್ ತಂಡ ಕಾರ್ಯಾಚರಿಸುತ್ತಿದ್ದು, ಇವರಿಗೆ ಯಾವುದೇ ಒತ್ತಡಗಳು ಇಲ್ಲದೇ ಇದ್ದರೆ ಇಲ್ಲಿನ ಹಲವು ಕ್ರಿಮಿನಲ್ ಕೃತ್ಯಗಳಿಗೆ ಕಡಿವಾಣ ಬೀಳಬಹುದು ಎಂದು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ. 

ಘಟನೆಯ ವಿವರ:

ಗುರುವಾರ ರಾತ್ರಿ ಮಾಹಿತಿ ಆಧಾರದಲ್ಲಿ ಕಾರ್ಯ ಪ್ರವ್ರತ್ತರಾದ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಗಳಾದ ಚಂದ್ರಶೇಖರ್ ಮತ್ತು ಪ್ರಸನ್ನ, ಮಣಿಹಳ್ಳದ ಬಳಿ ಚೆಕ್ ಪೋಸ್ಟ್ ನಿರ್ಮಿಸಿ ಕೊಂಡು ವಾಹನ ತಪಾಸಣೆ ನಡೆಸಲು ಆರಂಭಿಸಿದರು. ಇದೇ ವೇಳೆ ಆರೋಪಿಗಳು ಪುಂಜಾಲಕಟ್ಟೆ ಪೊಲೀಸ್ ಚೆಕ್ ಪೋಸ್ಟ್ನಲ್ಲಿ ಯೂ ನಿಲ್ಲಿಸದೆ ಮುಂದೆ ಬರುತ್ತಿದ್ದಾರೆ ಎಂಬ ವೈರ್ ಲೆಸ್ ಮಾಹಿತಿ ಲಭಿಸಿತು. ಈ ಸಂದರ್ಭ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಮದ್ವ ಚೆಕ್ ಪಾಯಿಂಟ್ ನಲ್ಲಿ ಪೊಲೀಸ್ ಸಿಬ್ಬಂದಿಯಾದ ಪಿಸಿ ಆದರ್ಶ ಮತ್ತು ಹೊಮ್ ಗಾರ್ಡ್ ಭಾಸ್ಕರ್  ಕಾರನ್ನುನಿಲ್ಲಿಸಿ ಎಂದು ಹೇಳಿದಾಗ ಕಾರನ್ನು ನಿಲ್ಲಿಸದೆ ಚಲಾಯಿಸಿಕೊಂಡು ಬಿ.ಸಿ ರೊಡ್ ಕಡೆಗೆ ವೇಗವಾಗಿ ಚಲಾಯಿಸಿದರು. ಆದರೆ ಮಣಿಹಳ್ಳ ಜಂಕ್ಷನ್ ನಲ್ಲಿ ದರೋಡೆಕೋರರ ಓಟಕ್ಕೆ ಬ್ರೇಕ್ ಬಿತ್ತು. ಮಣಿಹಳ್ಳ ಜಂಕ್ಷನ್ ನಲ್ಲಿ ಇಲಾಖಾ ವಾಹನವನ್ನು ರಸ್ತೆಗೆ ಅಡ್ಡ ಇಟ್ಟು ಬೆಳ್ತಂಗಡಿ ಕಡೆಯಿಂದ ಬರುತ್ತಿದ್ದ ಕೆಂಪು ಬಣ್ಣದ ಸ್ವಿಫ್ಟ್ ಕಾರನ್ನು ದೂರದಲ್ಲಿರುವಾಗಲೆ ನಿಲ್ಲಿಸಲು ಪೊಲೀಸರು ಸೂಚನೆ ನೀಡಿದರು. ಆದರೆ ವಾಹನವನ್ನು ಅತಿವೇಗದಿಂದ ಚಲಾಯಿಸಿ ಸಿಬ್ಬಂದಿ ಮೆಲೆ ರಾಡ್ ಮತ್ತು ತಲವಾರಿನಿಂದ ಹಲ್ಲೆ ಮಾಡಲು ಆರೋಪಿಗಳು ಪ್ರಯತ್ನಿಸಿದಾಗ ತಮ್ಮ ಮತ್ತು ಸಿಬ್ಬಂದಿ ರಕ್ಷಣೆಗಾಗಿ ಬಂಟ್ವಾಳ ನಗರ ಠಾಣೆ ಪಿ.ಎಸ್.ಐ ಚಂದ್ರಶೇಖರ  ಕಾರಿನಮೇಲೆ ಮತ್ತು ಬಂಟ್ವಾಳ ಗ್ರಾಮಾಂತರ ಸಬ್ ಇನ್ಸ್ಪೆಕ್ಟರ್ ಪ್ರಸನ್ನ ತಮ್ಮ ಪಿಸ್ತೂಲ್ ನಿಂದ ಕಾರಿನ ಮೇಲೆ  ಗುಂಡು ಹಾರಿಸಿದರು.

ಈ ಸಂದರ್ಭ ಕಾರನ್ನು ನಾವುರು ಕಡೆಗೆ ಹೋಗಲು ತಿರುಗಿಸಿದಾಗ ಕಾರು  ಚರಂಡಿ ಯಲ್ಲಿ ಸಿಕ್ಕಿಹಾಕಿ ಕೊಂಡಿತು. ತಕ್ಷಣ ಹಿಂಬದಿಯಲ್ಲಿ ಕುಳಿತಿದ್ದ ಇಬ್ಬರು ಓಡಿ ಹೋದರು. ಬಳಿಕ ಸಿಬ್ಬಂದಿ ಕಾರನ್ನು ಸುತ್ತುವರೆದು ಕಾರಿನಲ್ಲಿದ್ದ ಮೂವರನ್ನು ಹಿಡಿದು ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿ ಎರಡು ತಲವಾರು, ಒಂದು ರಾಡ್, ಮೆಣಸಿನಪುಡಿ, ಮಂಕಿ ಕ್ಯಾಪ್ ಹಗ್ಗಗಳು ಕಂಡುಬಂದವು. ಈ ಕುರಿತು ವಿಚಾರಣೆ ನಡೆಸಿದಾಗ, ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ತಡೆದು ಡಾಕಾಯತಿ ಮಾಡಲು ಮತ್ತು ದಾರಿಯಲ್ಲಿ ಯಾವುದಾದರು ಮನೆಯಲ್ಲಿ ದನ ಕಳ್ಳತನ ಮಾಡಲು ಹೋಗಿರುವುದಾಗಿ ಆರೋಪಿಗಳು ತಿಳಿಸಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.