ಇಂದಿನ ವಿಶೇಷ

ಬೆಳಗ್ಗಿನಿಂದಲೇ ಸಾಲು, ಬಂಟ್ವಾಳದಲ್ಲಿ ಮತದಾನ ಚುರುಕು

www.bantwalnews.comಸಂಪಾದಕ: ಹರೀಶ ಮಾಂಬಾಡಿ, ಚಿತ್ರಗಳು: ಕಿಶೋರ್ ಪೆರಾಜೆ

ಮಾಣಿ ಪೆರಾಜೆ ಮತಗಟ್ಟೆಯಲ್ಲಿ ಬಡಕೋಡಿ ನಿವಾಸಿ ಶತಾಯುಷಿ ಲಕ್ಷ್ಮೀ (103) ಗಾಲಿಕುರ್ಚಿಯಲ್ಲಿ ಬಂದು ಮತ ಚಲಾಯಿಸಿ ಮೇಲ್ಪಂಕ್ತಿ ಹಾಕಿದರು.

ವಿಧಾನಸಭೆಯ ಚುನಾವಣೆಗೆ ಬಂಟ್ವಾಳ ಕ್ಷೇತ್ರದಲ್ಲಿ ಮತದಾನ ಶನಿವಾರ ಬಿರುಸಿನಿಂದ ನಡೆಯುತ್ತಿದ್ದು, ಬೆಳಗ್ಗಿನಿಂದಲೇ ಸಾಲುಗಟ್ಟಿ ನಿಂತ ಮತದಾರರು ತಮ್ಮ ಹಕ್ಕು ಚಲಾಯಿಸಿದರು.

ಜಾಹೀರಾತು

ವಿಧಾನಸಭೆಯ ಬಂಟ್ವಾಳ ಕ್ಷೇತ್ರದ 59 ಗ್ರಾಮಗಳಲ್ಲಿರುವ 249 ಮತಗಟ್ಟೆಗಳಲ್ಲಿ ಮತದಾನ ಚುರುಕುಗತಿಯಲ್ಲಿದೆ. ಶತಾಯುಷಿ ಸಹಿತ ವಯಸ್ಸಾದವರೂ ಮತಗಟ್ಟೆಗೆ ಉತ್ಸಾಹದಿಂದಲೇ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ಬಂಟ್ವಾಳ ಕ್ಷೇತ್ರಕ್ಕೆ ಒಟ್ಟು 249 ಮತಗಟ್ಟೆಗಳಿವೆ. ಇವುಗಳಲ್ಲಿ 3 ಎಕ್ಸಿಲರಿ ಮತಗಟ್ಟೆಗಳು ಸೇರಿವೆ. ಸಾಮಾನ್ಯ ಮತಗಟ್ಟೆಗಳು 153, ಸೂಕ್ಷ್ಮ 62, ಅತಿಸೂಕ್ಷ್ಮ 34 ಮತಗಟ್ಟೆಗಳಿವೆ. ಈ ಎಲ್ಲ ಮತಗಟ್ಟೆಗಳಲ್ಲೂ ಬೆಳಗ್ಗಿನ ಹೊತ್ತಿಗೆ ಶಾಂತಿಯುತವಾಗಿ ಮತದಾನ ನಡೆದಿದೆ.

1,09,537 ಪುರುಷ ಮತದಾರರು ಹಾಗೂ 1,12,198 ಮಹಿಳಾ ಮತದಾರರು ಸೇರಿದಂತೆ ಒಟ್ಟು 2,21,735 ಮಂದಿ ಮತದಾನದ ಹಕ್ಕು ಹೊಂದಿದ್ದು, ಮತಗಟ್ಟೆಗಳಿಗೆ ಮೊಡಂಕಾಪು ಮಸ್ಟರಿಂಗ್ ಕೇಂದ್ರದಿಂದ ಮೇ 11ರಂದು ಪ್ರತೀ ಬೂತ್‌ಗೆ 6 ಮಂದಿ ಸಿಬ್ಬಂದಿಯಂತೆ ಒಟ್ಟು 1494 ಮಂದಿ ಸಿಬಂದಿಯನ್ನು ನಿಯೋಜಿಸಲಾಗಿದೆ.

98 ಮಟ್ಟಗಟ್ಟೆ ಅಧಿಕಾರಿಗಳು, 21 ಸೆಕ್ಟರ್ ಅಧಿಕಾರಿಗಳು, 9 ಫ್ಲೈಯಿಂಗ್ ಸ್ಕಾಡ್ ಅಧಿಕಾರಿಗಳು, 3 ವೀಡಿಯೋ ಸರ್ವೆಲೈನ್ ಟೀಮ್ ಹಾಗೂ ಇತರ 10 ಅಧಿಕಾರಿಗಳು ಕೇಂದ್ರಗಳ ಮೇಲೆ ನಿಗಾ ಇರಿಸುತ್ತಿದ್ದಾರೆ.

ಸೂಕ್ಷ್ಮ ಮತಗಟ್ಟೆಗಳಿಗೆ ಒಬ್ಬರು ಗೃಹರಕ್ಷಕ ಸಿಬಂದಿ, ಒಬ್ಬ ಪೊಲೀಸ್ ಸಿಬಂದಿ, ಅತಿ ಸೂಕ್ಷ್ಮ ಮತಗಟ್ಟೆಗೆ ಒಬ್ಬರು ಎಎಸ್‌ಐ ಮತ್ತು ಒಬ್ಬರು ಪೊಲೀಸ್ ಸಿಬಂದಿ ಕರ್ತವ್ಯದಲ್ಲಿದ್ದಾರೆ.

pic: mohan shreeyan

ಸಂಗಬೆಟ್ಟು ಗ್ರಾಮದ ಕೆರೆಬಳಿ ಹಿರಿಯ ಪ್ರಾಥಮಿಕ ಶಾಲೆಯನ್ನು ಪಿಂಕ್ ಮತಗಟ್ಟೆಯಾಗಿ ಗುರುತಿಸಲಾಗಿದೆ. ಇಲ್ಲಿ 585 ಪುರುಷ ಮತದಾರರರು ಮತ್ತು 608 ಮಹಿಳಾ ಮತದಾರರು ಸೇರಿ ಒಟ್ಟು 1193 ಮತದಾರರಿದ್ದು, ಹಕ್ಕು ಚಲಾಯಿಸಲು ಆಗಮಿಸಿದ್ದಾರೆ.

ಅಭ್ಯರ್ಥಿಗಳ ಮತದಾನ:

ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈ ತಾಲೂಕಿನ ತೊಡಂಬಿಲ ಸೇಕ್ರೆಡ್ ಹಾರ್ಟ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕಳ್ಳಿಗೆಯಲ್ಲಿ ಮತ ಚಲಾಯಿಸಿದರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಇದು ತನ್ನ 8 ನೇ ಸ್ಪರ್ಧೆಯಾಗಿದೆ.ಇಲ್ಲಿನ ಕ್ಷೇತ್ರದ ಮತದಾರರೇ ತನ್ನನ್ನು ಇಷ್ಟು ಎತ್ತರಕ್ಕೆ ಬೆಳೆಸಿದ್ದಾರೆ. ಈ ಬಾರಿ ಮತ್ತೆ ನನ್ನನ್ನು ಗೆಲ್ಲಿಸಿದರೆ ದುಪ್ಪಟ್ಟು ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.

ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜೇಶ್ ನಾಯಕ್ ಅವರು ಮಂಗಳೂರು ಉತ್ತರದ ತೆಂಕಎಡಪದವು ಮತಗಟ್ಟೆಯಲ್ಲಿ ಮತ ಚಲಾಯಿಸಿದರು.

ಹಿರಿಯರು ಮಾದರಿ:

ಮತದಾನ ಕೇಂದ್ರಕ್ಕೆ ತೆರಳಲು ಉದಾಸೀನ ಮಾಡುತ್ತಿರುವ ಯುವಜನತೆಗೆ ಈ ಹಿರಿಯರು ಮಾದರಿಯಾದರು. ಬೆಳಗ್ಗೆಯೇ ಬೋಳಂಗಡಿ ಕೋಡಿ ನಿವಾಸಿ ಸಿಸಿಲಿಯಾ ಡಿಸೋಜ (87) ಪಾಣೆಮಂಗಳೂರು ಬೂತ್ ಗೆ ತಮ್ಮ ಸಂಬಂಧಿಗಳೊಂದಿಗೆ ತೆರಳಿ ಓಟು ಹಾಕಿದರೆ, ಸಜೀಪ ಆಲಾಡಿ ಮತಗಟ್ಟೆಯಲ್ಲಿ ಚೆನ್ನಮ್ಮ (87) ಮತ ಚಲಾಯಿಸಿದರು. ಮಾಣಿ ಪೆರಾಜೆ ಮತಗಟ್ಟೆಯಲ್ಲಿ ಬಡಕೋಡಿ ನಿವಾಸಿ ಶತಾಯುಷಿ ಲಕ್ಷ್ಮೀ (103) ಗಾಲಿಕುರ್ಚಿಯಲ್ಲಿ ಬಂದು ಮತ ಚಲಾಯಿಸಿ ಮೇಲ್ಪಂಕ್ತಿ ಹಾಕಿದರು.

ವಾಹನ ವ್ಯವಸ್ಥೆ:

ಸಂಜೆ ಮತದಾನದ ಬಳಿಕ 24 ಕೆಎಸ್‌ಆರ್‌ಟಿಸಿ ಬಸ್, 23 ಮಿನಿ ಬಸ್, 27 ಮ್ಯಾಕ್ಸಿ ಕ್ಯಾಬ್, 18 ಜೀಪ್‌ಗಳ ಸಹಿತ ಹೆಚ್ಚುವರಿ 6 ವಾಹನಗಳಲ್ಲಿ ಮತದಾನದ ಬಳಿಕ ಮತಯಂತ್ರಗಳನ್ನು ಮರಳಿ ತರಲಾಗುತ್ತದೆ.

ತಂಪೆರೆದ ಮಳೆ:

ಶುಕ್ರವಾರ ರಾತ್ರಿ ಸುರಿದ ಮಳೆ, ಕೈಕೊಟ್ಟ ವಿದ್ಯುತ್ ನಿಂದಾಗಿ ಮತದಾನ ಕೇಂದ್ರಗಳಲ್ಲಿ ಆತಂಕದ ವಾತಾವರಣ ನಿರ್ಮಿಸಿದರೂ ಬಿಸಿಲ ಬೇಗೆಗೆ ಮಳೆ ತಂಪೆರೆದು, ಶನಿವಾರದ ಬೆಳಗ್ಗಿನ ಮತದಾನಕ್ಕೆ ಸಹಾಯ ಮಾಡಿತು.

 

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.