ಬಂಟ್ವಾಳ

ಯುವಜನತೆಗೆ ಶಾಂತಿ, ಸೌಹಾರ್ದತೆಯ ಅರಿವು ಇಂದಿನ ಅಗತ್ಯ: ರಮಾನಾಥ ರೈ


ಧಾರ್ಮಿಕ ಕ್ಷೇತ್ರಗಳು ಪ್ರತಿ ಧರ್ಮಗಳ ಯುವ ಸಮುದಾಯಕ್ಕೆ ಶಾಂತಿ-ಸೌಹಾರ್ದತೆಯ ಪ್ರಾಮುಖ್ಯತೆಯ ಪಾಠವನ್ನು ಒತ್ತಿ ಹೇಳುವ ಮೂಲಕ ಸಮಾಜದಲ್ಲಿ ಸೌಹಾರ್ದತೆಯ ತಂಗಾಳಿ ಪಸರಿಸಲಿ ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು.

ಪಾಣೆಮಂಗಳೂರು ಸಮೀಪದ ಗುಡ್ಡೆಅಂಗಡಿ ನೂರುದ್ದೀನ್ ಜುಮಾ ಮಸೀದಿ ವತಿಯಿಂದ ಹಝ್ರತ್ ಶೈಖ್ ಮೌಲವಿ ಅವರ ೩೮ನೇ ವರ್ಷದ ಉರೂಸ್ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಂದು ಮಾನವ ಜೀವನದಲ್ಲಿ ಎಲ್ಲ ಸವಲತ್ತುಗಳನ್ನು ಪಡೆದುಕೊಂಡಿದ್ದರೂ ನೆಮ್ಮದಿಯ ಬದುಕನ್ನು ಕಂಡುಕೊಳ್ಳಲು ಹೆಣಗಾಡ ನಡೆಸಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಮನುಷ್ಯ ಮನಸ್ಸುಗಳು ಜಾತಿ-ಧರ್ಮಗಳ ಅಡ್ಡ ಗೋಡೆಗಳ ನಡುವೆ ಬಂಧಿಸಲ್ಪಟ್ಟಿದೆ. ಈ ಜಾತಿಯ ಗೋಡೆ ಕೆಡವಿ ಸೌಹಾರ್ದದ ಸರಪಣಿಯನ್ನು ಪೋಣಿಸಬೇಕಾದ ಅಗತ್ಯ ಹೆಚ್ಚಿದೆ ಎಂದರು.
ಇದೇ ವೇಳೆ ಇಲ್ಲಿ ಸುಮಾರು ೪೦ ಲಕ್ಷ ರೂಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಮದ್ರಸ ಕಟ್ಟಡಕ್ಕೆ ಸರಕಾರದ ವತಿಯಿಂದ ಅನುದಾನ ಒದಗಿಸಿಕೊಡುವುದರ ಜೊತೆಗೆ ತನ್ನ ವತಿಯಿಂದ ಖಾಸಗಿಯಾಗಿಯೂ ಗರಿಷ್ಠ ಪ್ರಮಾಣದಲ್ಲಿ ಸಹಾಯಧನ ಒದಗಿಸಿಕೊಡುವುದಾಗಿ ಭರವಸೆ ನೀಡಿದರು.

ಜಾಹೀರಾತು

ದುವಾಶಿರ್ವಚನಗೈದು ಮಾತನಾಡಿದ ಕೇರಳ-ತಾನೂರಿನ ಸಯ್ಯಿದ್ ಫಕ್ರುದ್ದೀನ್ ಹಸನಿ ಅಲ್-ಖಾದಿರಿ ದಾರಿಮಿ ತಂಙಳ್ ಮುಸ್ಲಿಂ ಧಾರ್ಮಿಕ ಕೇಂದ್ರಗಳಾಗಿರುವ ಮದ್ರಸಗಳು ಮನುಷ್ಯನನ್ನು ಮಾನವನನ್ನಾಗಿ ಮಾಡುವ ಕೇಂದ್ರಗಳಾಗಿವೆ. ಮಾನವ ತೊಟ್ಟಿಲಿನಿಂದ ಶವಮಂಚದವರೆಗೆ ಇಂಗಿಸಿಕೊಳ್ಳಲಾಗದ ಜ್ಞಾನ ದಾಹವನ್ನು ನೀಡುವ ಕೇಂದ್ರಗಳಾಗಿವೆ ಮದ್ರಸಗಳು. ಆರಾಧನಾ ಕೇಂದ್ರಗಳಾಗಿರುವ ಮಸೀದಿಗಳ ಉಪಯೋಗವನ್ನೂ ಕಲಿಸುವ ಕೊಡುವ ಕೇಂದ್ರಗಳಾಯೂ ಮದ್ರಸಗಳು ಕಾರ್ಯನಿರ್ವಹಿಸುತ್ತಿದೆ ಎಂದರು.

ಸ್ಥಳೀಯ ಖತೀಬ್ ಉಸ್ಮಾನ್ ರಾಝಿ ಬಾಖವಿ ಅಲ್-ಹೈತಮಿ ಮುಖ್ಯ ಭಾಷಣಗೈದರು. ಮಸೀದಿ ಅಧ್ಯಕ್ಷ ಉಮ್ಮರ್ ಫಾರೂಕ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್, ಪುರಸಭಾ ನಾಮನಿರ್ದೇಶಿತ ಸದಸ್ಯ ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಉದ್ಯಮಿ ಸುಲೈಮಾನ್ ಹಾಜಿ ಮಾಸ್ಟರ್, ಪಿ.ಬಿ. ಹಾಮದ್ ಹಾಜಿ ಮೊದಲಾದವರು ಭಾಗವಹಿಸಿದ್ದರು.

ಮಸೀದಿ ಉಪಾಧ್ಯಕ್ಷ ಯಾಕೂಬ್, ಮದ್ರಸ ನಿರ್ಮಾಣ ಸಮಿತಿ ಅಧ್ಯಕ್ಷ ಹಾಜಿ ಎಸ್. ಮುಹಮ್ಮದ್, ಮದ್ರಸ ಅಧ್ಯಾಪಕರುಗಳಾದ ಮುಹಮ್ಮದ್ ಶರೀಫ್ ಮೌಲವಿ ಪರಪ್ಪು, ಸೈದಾಲಿ ಮುಸ್ಲಿಯಾರ್ ಮಾಣಿ, ಎಸ್.ಎಂ. ಅಬ್ಬಾಸ್ ಮುಸ್ಲಿಯಾರ್ ಸಾಲೆತ್ತೂರು, ಪ್ರಮುಖರಾದ ಮುಹಮ್ಮದ್ ಎಸ್.ಎಂ., ಇರ್ಶಾದ್ ಗುಡ್ಡೆಅಂಗಡಿ ಮೊದಲಾದವರು ಉಪಸ್ಥಿತರಿದ್ದರು.

ಇದೇ ವೇಳೆ ಸಚಿವ ರಮಾನಾಥ ರೈ ಅವರನ್ನು ಮಸೀದಿ ಆಡಳಿತ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಮದ್ರಸ ನಿರ್ಮಾಣ ಸಮಿತಿ ಚೆಯರ್‌ಮೆನ್ ಹಾಜಿ ಬಿ.ಎ. ಮುಹಮ್ಮದ್ ನೀಮಾ ಸ್ವಾಗತಿಸಿ, ಮಸೀದಿ ಕಾರ್ಯದರ್ಶಿ ಬಶೀರ್ ಮೆಲ್ಕಾರ್ ವಂದಿಸಿದರು. ಶಹೀದ್ ಗುಡ್ಡೆಅಂಗಡಿ ಕಾರ್ಯಕ್ರಮ ನಿರೂಪಿಸಿದರು.
ಫೆ ೧೧ ರಂದು ಭಾನುವಾರ ಎ.ಎ. ಇಬ್ರಾಹಿಂ ಮುಸ್ಲಿಯಾರ್ ನೇತೃತ್ವದಲ್ಲಿ ಹಝ್ರತ್ ಶೈಖ್ ಮೌಲವಿ ಹೆಸರಿನಲ್ಲಿ ಖತ್‌ಮುಲ್ ಕುರ್‌ಆನ್, ಸಯ್ಯಿದ್ ಹುಸೈನ್ ಬಾ-ಅಲವಿ ತಂಙಳ್ ನೇತೃತ್ವದಲ್ಲಿ ಮೌಲಿದ್ ಪಾರಾಯಣ ಹಾಗೂ ಸಾರ್ವಜನಿಕ ಅನ್ನದಾನ ಕಾರ್ಯಕ್ರಮ ನಡೆಯಿತು.

ಉರೂಸ್ ಪ್ರಯುಕ್ತ ನಾಲ್ಕು ದಿನಗಳ ಧಾರ್ಮಿಕ ಪ್ರವಚನ ಕಾರ್ಯಕ್ರಮವನ್ನು ಅತ್ರಾಡಿ ಖಾಝಿ ಹಾಜಿ ವಿ.ಕೆ. ಅಬೂಬಕ್ಕರ್ ಮುಸ್ಲಿಯಾರ್ ಅಡ್ಯಾರ್-ಕಣ್ಣೂರು ಉದ್ಘಾಟಿಸಿದರು. ಹಾಜಿ ಕೆ.ಎಂ. ಅಬೂಬಕ್ಕರ್ ಮದನಿ ಸಾಲೆತ್ತೂರು, ಮಂಜೇರಿ ದಾರುಸ್ಸುನ್ನ ಪ್ರೊಫೆಸರ್ ಅಬ್ದುಲ್ಲ ವಹಬಿ ಎಂ.ಡಿ. ಆರೂರು, ಇಬ್ರಾಹಿಂ ಖಲೀಲ್ ಹುದವಿ ಅಲ್-ಮಾಲಿಕಿ ಕಾಸರಗೋಡು, ಸಿಎಂ. ಅನ್ಸಾರ್ ಫೈಝಿ ಬುರ್‌ಹಾನಿ ಅಡ್ಯಾರ್-ಕಣ್ಣೂರು ಅವರು ಉಪಸನ್ಯಾಸಗೈದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.