ಬಂಟ್ವಾಳ

ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಸಾಮರಸ್ಯ ಅಗತ್ಯ: ಪುರಂದರ ಹೆಗ್ಡೆ

ಜಾಹೀರಾತು

ಇಂದು ಅಲ್ಲಲ್ಲಿ ಸಾಮರಸ್ಯಕ್ಕೆ ಕುಂದು ತರುವ ಕೆಲಸವಾಗುತ್ತಿದ್ದು, ಅದನ್ನು ಹೊಡೆದೋಡಿಸಿ, ಎಲ್ಲರೂ ಒಂದೇ ಎಂಬ ತತ್ವದಡಿ ನಾವು ಬಾಳಬೇಕಾಗಿದೆ. ಸಾಮಾಜಿಕ ಸ್ವಾಸ್ಥ್ಯ ಕಾಪಾಡಲು ಸಾಮರಸ್ಯದ ಬದುಕು ಅತೀ ಅಗತ್ಯ ಎಂದು ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಹೇಳಿದರು.

ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಶುಕ್ರವಾರ ಬಿ.ಸಿ.ರೋಡಿನಲ್ಲಿ ನಡೆದ ತಾಲೂಕು ಮಟ್ಟದ ಗಣರಾಜ್ಯೋತ್ಸವ ಆಚರಣಾ ಕಾರ್ಯಕ್ರಮದಲ್ಲಿ ಧ್ವಜಾರೋಹಣಗೈದು ಮಾತನಾಡಿದ ಅವರು ಸಂವಿಧಾನ ದುರುಪಯೋಗವಾಗುವುದನ್ನು ತಡೆಯುವುದರ ಜೊತೆಗೆ ಸಂವಿಧಾನದ ಪಾವಿತ್ರ್ಯತೆಯನ್ನು ಕಾಪಾಡುವ ಕೆಲಸ ಪ್ರತಿಯೊಬ್ಬನಿಂದಲೂ ಆಗಬೇಕಿದೆ ಎಂದರು.

ನಮಗೆ ಬೇಕಿರುವುದು ಸಾಮರಸ್ಯ. ಪ್ರತಿಯೊಬ್ಬ ಸಹೋದರ ಭಾವನೆಯಿಂದ ಬಾಳಬೇಕು. ಅಹಿತಕರ ಘಟನೆಗಳು ನಡೆಯುವ ಬದಲು ಸಮಾಜಕ್ಕೆ ಮಾದರಿಯಾಗಿ ಕೆಲಸ ಮಾಡೋಣ. ಮಕ್ಕಳಿಗೆ ಕೆಟ್ಟ ಭಾವನೆ ಪ್ರಚೋದಿಸುವ  ಕಾರ್ಯ ಮಾಡಬಾರದು. ಸಾಮಾಜಿಕ ಸಾಮರಸ್ಯ ಬೆಳೆಸೋಣ ಎಂದು ಪುರಂದರ ಹೆಗ್ಡೆ ಹೇಳಿದರು.

ಮುಖ್ಯ ಭಾಷಣ ಮಾಡಿದ ನಿವೃತ್ತ ಪ್ರಾಂಶುಪಾಲ ಯು.ಎಸ್.ವಿಶ್ವೇಶ್ವರ ಭಟ್, ಇಂದು ನಾವು ಸಣ್ಣ ಪುಟ್ಟ ಕೆಲಸಗಳನ್ನು ಮಾಡುವ ಮೂಲಕವೇ ದೇಶದ ಗೌರವ ಕಾಪಾಡಲು ಸಾಧ್ಯ. ಕಸವನ್ನು ಸರಿಯಾದ ಜಾಗದಲ್ಲಿ ಎಸೆಯುವುದು, ನಿಲ್ದಾಣದಲ್ಲೇ ಬಸ್ ನಿಲ್ಲಿಸುವಂಥ ಸಣ್ಣ ಪುಟ್ಟ ನಿಮಯಗಳನ್ನು ಪಾಲಿಸುವ ಮೂಲಕ ಭಾರತದ ತ್ರಿವರ್ಣ ಧ್ವಜವನ್ನು ಜಗತ್ತೇ ಗೌರವಿಸುವಂತೆ ಮಾಡಬಹುದು ಎಂದ ಅವರು, ವಂದೇ ಮಾತರಂ ಮತ್ತು ಝಂಡಾ ಊಂಛಾ ರಹೇ ಹಮಾರ ಪದ್ಯಗಳ ಸಾಲಿನ ಮಹತ್ವವನ್ನು ತಿಳಿಹೇಳಿದರು.

ಪುರಸಭಾಧ್ಯಕ್ಷ ಪಿ. ರಾಮಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಬುಡಾ ಅಧ್ಯಕ್ಷ ಸದಾಶಿವ ಬಂಗೇರ,  ತಾ.ಪಂ. ಅಧ್ಯಕ್ಷ ಚಂದ್ರಹಾಸ ಕರ್ಕೇರಾ, ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ,  ಪುರಸಭಾ ಸದಸ್ಯ ಜಗದೀಶ್ ಕುಂದರ್,  ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ತಾ.ಪಂ. ಇಒ ರಾಜಣ್ಣ,  ತೋಟಗಾರಿಕಾ ಅಧಿಕಾರಿ ದಿನೇಶ್, ತಾಲೂಕು ವೈದ್ಯಾಧಿಕಾರಿ ಡಾ. ದೀಪಾ ಪ್ರಭು, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ, ಆರಾಧನಾ ಸಮಿತಿ ಅಧ್ಯಕ್ಷ  ಚಂದ್ರಶೇಖರ ಬಾಳ್ತಿಲ,  ಸದಸ್ಯ ಯೂಸುಫ್ ಕರಂದಾಡಿ ಉಪತಹಶೀಲ್ದಾರ್ ಸೀತಾರಾಮ. ಗ್ರೆಟ್ಟಾ ಮಸ್ಕರೇಂಞಸ್. ವಾಸು ಶೆಟ್ಟಿ, ಕಂದಾಯ ನಿರೀಕ್ಷಕ ರಾಮ ಕಾಟಿಪಳ್ಳ, ದಿವಾಕರ ಮುಗುಳಿಯ, ನವೀನ್ ಬೆಂಜನಪದವು ಮೊದಲಾದವರು ಭಾಗವಹಿಸಿದ್ದರು. ಮಂಜು ವಿಟ್ಲ ಕಾರ್ಯಕ್ರಮ ನಿರ್ವಹಿಸಿದರು.

ಧ್ವಜಾರೋಹಣಕ್ಕೂ ಮುಂಚೆ ಪೊಲೀಸ್ ಇಲಾಖೆ, ಗೃಹರಕ್ಷಕ ದಳ, ವಿವಿಧ ಶಾಲಾ ವಿದ್ಯಾರ್ಥಿಗಳು, ಸ್ಕೌಟ್ಸ್, ಗೈಡ್ಸ್ ಮೊದಲಾದ ತುಕಡಿಗಳಿಂದ ಆಕರ್ಷಕ ಪಥ ಸಂಚಲನ ನಡೆಯಿತು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.