ವಿಶೇಷ ವರದಿ

ಇಲ್ನೋಡಿ….ರಸ್ತೆ ಪಕ್ಕವೇ ಕಸ ಎಸೀತಾರೆ!

  • ಹರೀಶ ಮಾಂಬಾಡಿ
  • ಬಂಟ್ವಾಳನ್ಯೂಸ್ ವರದಿ

ಬಿ.ಸಿ.ರೋಡ್, ಬಂಟ್ವಾಳ ಸುತ್ತಮುತ್ತಲೆಲ್ಲ ಕಸದ ರಾಶಿ ಕಂಡರೆ ಯಾಕೆ ಹೀಗೆ ಎಂದು ಕೇಳಬೇಡಿ. ಎಲ್ಲಿ ಗಲೀಜು ಕಾಣುತ್ತಿದೆಯೋ ಅದು ಕಸ ಹಾಕುವ ಜಾಗ ಎಂದು ಕೆಲವರು ತೀರ್ಮಾನಿಸಿದಂತಿದೆ. ರಸ್ತೆ ಪಕ್ಕವೇ ಕಸ ಎಸೀತಾರೆ. ಕೇಳಿದರೆ ನೀವ್ಯಾರು ಎನ್ನುತ್ತಾರೆ. ಹೀಗಾಗಿ ಬಂಟ್ವಾಳ ಪುರಸಭೆಯ ಅಲ್ಲಲ್ಲಿ ಡಂಪಿಂಗ್ ಯಾರ್ಡ್ ಇದೆ. ಕಂಚಿನಡ್ಕಪದವು ಡಂಪಿಂಗ್ ಯಾರ್ಡ್ ಗೆ ರಾಜಕೀಯ ಬಿಸಿಗಾಳಿಯೂ ತಟ್ಟಿದೆ. ಕಾಂಗ್ರೆಸ್ ನ ಒಂದು ತಂಡ ಗ್ರಾಪಂ ಎದುರು ಪ್ರತಿಭಟನೆ ನಡೆಸಿದರೆ, ಗ್ರಾಪಂ ಹಿಡಿತ ಹೊಂದಿರುವ ಎಸ್ ಡಿಪಿಐ ನಾವು ಮೊದಲೇ ವಿರೋಧಿಸಿದ್ದೆವು. ಈಗಲೂ ವಿರೋಧಿಸುತ್ತೇವೆ ಎನ್ನುತ್ತಿದೆ. ಹೀಗಾಗಿ ಬಂಟ್ವಾಳಕ್ಕಿನ್ನು ಕಸ ವಿಲೇವಾರಿ ಸದ್ಯಕ್ಕಂತೂ ಕಗ್ಗಂಟು.

ಜಾಹೀರಾತು

 

ಬಂಟ್ವಾಳ ಪುರಸಭೆಯ ಹೃದಯಭಾಗ ಎಂದೇ ಹೇಳಲಾಗುವ ಬಿ.ಸಿ.ರೋಡ್ ಬಸ್ ನಿಲ್ದಾಣ ಹಿಂಭಾಗದಲ್ಲೇ ಕಸದ ದೊಡ್ಡ ರಾಶಿ, ಕೊಳೆತು ನಾರುವ ತ್ಯಾಜ್ಯ. ಅದೂ ಸ್ವಚ್ಛತೆಯ ಪ್ರತಿಪಾದಕ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಬ್ಯಾನರ್ ಅಡಿಯಲ್ಲಿ ಕಾಣಸಿಗುತ್ತದೆ.

ವಾರ್ಡಿನ ಜನರಿಗೆ ಬಕೆಟ್ ವಿತರಿಸಲಾಗಿದೆ. ನಮ್ಮ ವಾರ್ಡಿನಲ್ಲಿ ಕಸ ವಿಲೇವಾರಿ ವಾಹನಗಳು ಸಕಾಲಕ್ಕೆ ಬರುತ್ತಿವೆ. ಇದು ಹೊರಗಿನವರ ಕೃತ್ಯ ಎಂಬ ಅಭಿಪ್ರಾಯ ಸ್ಥಳೀಯ ಸದಸ್ಯ ಬಿ.ಮೋಹನ್ ಅವರದ್ದು.

ಪುರಸಭೆ ವತಿಯಂದ ಏನು ಸಾಧ್ಯವೋ ಅದೆಲ್ಲವನ್ನೂ ಮಾಡಿದ್ದೇವೆ. ಕಸ ವಿಲೇವಾರಿಗೆ ಪೂರ್ಣ ಸಹಕಾರವನ್ನು ನೀಡುತ್ತೇವೆ. ಸಾರ್ವಜನಿಕರ ಸಹಭಾಗಿತ್ವವೂ ಅಷ್ಟೇ ಮುಖ್ಯ ಎನ್ನುತ್ತಾರೆ ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ.

ಇಲ್ಲಿ ಕಸ ಎಸೆಯುವವರು ಯಾರೋ, ತೆಗೆಯುವವರು ಇನ್ಯಾರೋ, ಆದರೆ ಸಮಸ್ಯೆ ಅನುಭವಿಸುವವರು ಮಾತ್ರ ಪ್ರಯಾಣಿಕರು, ಸಾರ್ವಜನಿಕರು ಮತ್ತು ಸಮೀಪದ ಅಂಗಡಿ ಮಾಲೀಕರು. ಮಹಾತ್ಮಾ ಗಾಂಧೀಜಿಯವರ ಚಿತ್ರವುಳ್ಳ ಬ್ಯಾನರ್, ಇಲ್ಲಿ ಸಿಸಿ ಕ್ಯಾಮರಾ ಅಳವಡಿಸಲಗಿದೆ ಎಂಬ ಬ್ಯಾನರ್ ಅಡಿಯಲ್ಲೇ ಕಸ ಇಟ್ಟು ಹೋಗುವವರಿದ್ದಾರೆ!

ಕಸದ ರಾಶಿ ಕಂಡೊಡನೆ ಬೀದಿ ನಾಯಿಗಳು ಅಲ್ಲಿ ಠಳಾಯಿಸುತ್ತವೆ. ಹಿಂಡುಹಿಂಡಾಗಿ ಆಗಮಿಸಿ ನಡೆದಾಡುವವರನ್ನೂ ಹೆದರಿಸುತ್ತವೆ. ಬೆಂಗಳೂರಿನಲ್ಲಿ ಬೀದಿ ನಾಯಿಗಳು ಸಾರ್ವಜನಿಕರಿಗೆ ಉಪಟಳ ನೀಡಿದ ಘಟನೆಯಂತೆ ಇಲ್ಲೂ ನಡೆಯುತ್ತಿದೆ. ನಾಯಿ ಹಿಡಿಯಲು ಬಂದಾಗ ಬೀದಿ ನಾಯಿಗಳೂ ತಪ್ಪಿಸಿಕೊಂಡು ಜಾಣ್ಮೆ ಮೆರೆದಿವೆ. ಕಸ ಎಳೆದೆಳೆದು ತಿನ್ನುವ ಬೀದಿ ನಾಯಿಗಳ ಜೊತೆಗೆ ದನಗಳನ್ನು ಬೆಳಗ್ಗಿನ ಹೊತ್ತು ನಿತ್ಯ ನೋಡಬಹುದು!!

VIDEO REPORT:

 

also read:

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts