ಕವರ್ ಸ್ಟೋರಿ

ಬೈಕ್ ಮೆಕ್ಯಾನಿಕ್ ಕೃಷಿ ಪ್ರೀತಿ

ಮನೆ ಛಾವಣಿಯಲ್ಲಿ ಕೃಷಿ ಮಾಡುವ ಹಲವಾರು ಮಂದಿಯನ್ನು ನಾವು ನೋಡಿದ್ದೇವೆ. ಎಲ್ಲವೂ ಯಶೋಗಾಥೆಗಳೇ. ಸಣ್ಣಪುಟ್ಟ ಜಾಗದಲ್ಲೂ ಕೃಷಿ ಖುಷಿ ನೀಡಬಲ್ಲದು ಎಂಬ ಸ್ಫೂರ್ತಿದಾಯಕ ವಿಚಾರಗಳೇ ಮತ್ತೊಬ್ಬರನ್ನೂ ಇಂಥ ಕಾರ್ಯ ನಡೆಸಲು ಪ್ರೇರೇಪಿಸುತ್ತವೆ. ವಿಟ್ಲದ ಬೈಕ್ ಮೆಕ್ಯಾನಿಕ್ ಅವರದ್ದೂ ಅಂಥದ್ದೇ ಒಂದು ಖು(ಕೃ)ಷಿಯ ಕತೆ.

ಜಾಹೀರಾತು

ವಿಟ್ಲ ಮೇಗಿನಪೇಟೆ ನಿವಾಸಿ, ವಿಟ್ಲ ಭಗವತೀ ದೇವಸ್ಥಾನದ ಎದುರುಗಡೆ ಇರುವ ಶೇಖರ್ ಆಟೋ ವರ್ಕ್ಸ್‌ನ ಬಕ್ ಮೆಕ್ಯಾನಿಕ್ ಯೂಸುಫ್ ಗಮಿ ಅವರಿಗೆ ಕೃಷಿಯೂ ಹವ್ಯಾಸ. 14 ಸೆಂಟ್ಸ್ ಜಾಗ. ಅದರಲ್ಲಿ ಮನೆ ಇದೆ. ಮತ್ತು ಕೆಲ ಮನೆಗಳನ್ನು ಬಾಡಿಗೆಗೆ ನೀಡಿದ್ದಾರೆ. ಮನೆ ಮೇಲೆ ಒಟ್ಟು ೨೦೦೦ ಚದರ ಅಡಿಯಷ್ಟು ವಿಸ್ತೀರ್ಣವಿರುವ ವಿಶಾಲ ಜಾಗವಿದೆ. ಬಕ್ ದುರಸ್ತಿಗೆಂದು ಹೋದಾಗ ಮನೆಯವರೊಬ್ಬರು ನೀಡಿದ್ದ ಬೆಂಡೆಕಾಯಿ ಹಾಗೂ ಅದರ ಕೃಷಿ ಕುರಿತ ಮಾಹಿತಿ ಇದಕ್ಕೆ ಪ್ರೇರೇಪಣೆ ನೀಡಿತು.

ತೊಟ್ಟೆಯಲ್ಲಿ ಸ್ವಲ್ಪ ಭಾಗ ಕೆಂಪು ಮಣ್ಣು. ಮತ್ತೊಂದಷ್ಟು ಭಾಗ ಸುಡುಮಣ್ಣು. ಮನೆಯ ಕಸಗಳನ್ನು ಸುಡುಮಣ್ಣಾಗಿಸಿದ ಅವರು ಅದನ್ನು ಕೃಷಿಗೆ ಬಳಸಿದರು. ಬೆಂಡೆ ಬೀಜ ಬಿತ್ತಿದರು. ತಾರಸಿಯಲ್ಲಿ ಪಾಚಿ ಬರುತ್ತಿತ್ತು. ಅವನ್ನು ಮಳೆಗಾಲದಲ್ಲಿ ಒಂದು ಕಡೆ ಸಂಗ್ರಹಿಸಿ, ರಾಶಿ ಹಾಕಿದ್ದರು. ಪಕ್ಕದಲ್ಲೇ ಇದ್ದ ಮರದಿಂದ ಬಿದ್ದ ಬೀಜ ಈ ಪಾಚಿಯಲ್ಲಿ ಬೆಳೆಯಲಾರಂಭಿಸಿತು. ಅತ್ಯಂತ ಹುಲುಸಾಗಿ ಬೆಳೆದ ಗಿಡವನ್ನು ನೋಡಿ ಆಶ್ಚರ್ಯವಾಯಿತು. ಮತ್ತು ಅದನ್ನು ಬೆಂಡೆ ಮತ್ತು ಇತರ ಕೃಷಿಗಳಿಗೆ ಗೊಬ್ಬರವಾಗಿ ಬಳಸಿದರು. ಅದು ಯಶಸ್ವಿಯಾಯಿತು. ತಾರಸಿಯ ಪಾಚಿಯನ್ನೇ ಗೊಬ್ಬರವಾಗಿಸಿದ ಅವರ ಅನುಭವ ಮತ್ತು ಯೋಚನೆ ಶ್ಲಾಘನೀಯವಾದುದು.

ಆಗಸ್ಟ್ ತಿಂಗಳಲ್ಲಿ ಬಿತ್ತಿದ ಬೀಜದಲ್ಲಿ ಒಂದು ತಿಂಗಳ ಬಳಿಕ ಬೆಳೆ ಪಡೆಯುವ ಅವರ ಗುರಿಯೂ ಈಡೇರಿದೆ. ಮತ್ತು ಮಾರ್ಚ್, ಎಪ್ರಿಲ್ ತಿಂಗಳಲ್ಲಿ ನೀರಿನ ಬರ ಬರದೇ ಇದ್ದರೆ ಅಲ್ಲಿತನಕವೂ ಬೆಳೆಯನ್ನು ಪಡೆಯಬೇಕೆಂದು ಆಶಯ ವ್ಯಕ್ತಪಡಿಸುತ್ತಾರೆ ಯೂಸುಫ್ ಗಮಿ.

ರಾಸಾಯನಿಕ ಇಲ್ಲ:

ತಾರಸಿಯಿಂದ ತೊಂಡೆ ಚಪ್ಪರವವನ್ನೂ ಇಳಿಸಲಾಗಿದೆ. ಮನೆ ಮುಂದಿನ ಭಾಗದಲ್ಲಿ ತೊಂಡೆ ಬುಡವೆದ್ದು ತಾರಸಿಗೇರುತ್ತದೆ. ಆ ಚಪ್ಪರದಲ್ಲಿ ತೊಂಡೆಕಾಯಿಯನ್ನೂ ಪಡೆಯುತ್ತಿರುವ ಅವರು ಈ ಕೃಷಿಗಾಗಿ ಆಡಿನ ಹಿಕ್ಕೆಯನ್ನು ಬಳಸುತ್ತಾರೆ. ಅದಕ್ಕಾಗಿ ಆಡು ಮತ್ತು ಕೋಳಿಯನ್ನೂ ಸಾಕುತ್ತಾರೆ. ಯಾವುದೇ ರಾಸಾಯನಿಕ ಗೊಬ್ಬರವನ್ನು ಬಳಸದೇ ಹಿತ ಮಿತವಾಗಿ ಬೆಳೆಸುವ ಇವರ ಕೃಷಿ ಮಾದರಿಯಾಗಿದೆ. ಅನುಕರಣೀಯವಾಗಿದೆ.

ಬೇಡಿಕೆಯೂ ಇದೆ:
ದ್ರಾಕ್ಷೆ, ನಿಂಬೆ, ಕಹಿಬೇವು, ತೆಂಗು ಎಲ್ಲವೂ ಇಲ್ಲಿದೆ. ಇರುವ ಸ್ವಲ್ಪ ಜಾಗದಲ್ಲಿ ಮೆಕ್ಯಾನಿಕ್ ಯೂಸುಫ್ ಅವರ ಕೃಷ್ಯುತ್ಪನ್ನಗಳಿಗೆ ಬೇಡಿಕೆಯೂ ಇದೆ. ಸಾವಯವ ಬೆಂಡೆ, ತೊಂಡೆಕಾಯಿಗಳನ್ನು ಮೆಕ್ಯಾನಿಕ್ ಶಾಪ್‌ನಲ್ಲಿ ತಂದಿಟ್ಟರೆ ತತ್‌ಕ್ಷಣ ಮಾರಾಟವೂ ಆಗುತ್ತಿದೆ. ಇವರಿಗೆ ಮಾಲಕರಾದ ಚಂದ್ರಶೇಖರ ಭಟ್ ಪಡಾರು ಅವರ ಬೆಂಬಲವೂ ಇದೆ. ತನ್ನ ಬೈಕ್ ಮೆಕ್ಯಾನಿಕ್ ವೃತ್ತಿಯ ನಡುವೆಯೂ ತರಕಾರಿ ಕೃಷಿಯತ್ತ ವಿಶೇಷ ಗಮನ ಹರಿಸಿರುವ ಯೂಸುಫ್ ಅವರ ಕಾರ್ಯ ಶ್ಲಾಘನೀಯ.

For VIDEO REPORT click:

 

 

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts