ಬಂಟ್ವಾಳ

ಸಮಾಜಕ್ಕೆ ಮಾದರಿಯಾದ ಲೆವಿನ್ ಸಮೂಹ ಸಂಸ್ಥೆ: ರಮಾನಾಥ ರೈ

ಜಾಹೀರಾತು

ಪ್ರತಿಯೊಂದು ವಿಷಯದಲ್ಲೂ ಜಾತಿ-ಧರ್ಮ ಎಂದು ವಿಭಜಿಸಿ ನೋಡುವ ಇಂದಿನ ಸಮಾಜದಲ್ಲಿ ಲೆವಿನ್ ಸಮೂಹ ಸಂಸ್ಥೆಯ ಮಾಲಕರು ಎಲ್ಲ ಜಾತಿ-ಧರ್ಮದ ಕಾರ್ಮಿಕರನ್ನು ಹಾಗೂ ಅವರ ಬಂಧು-ಬಳಗವನ್ನು ಒಂದೇ ಸೂರಿನಡಿ ಒಟ್ಟು ಸೇರಿಸಿ ವಿಶಿಷ್ಟ ಮಾದರಿಯಲ್ಲಿ ಆಯುಧ ಪೂಜೆ ಕಾರ್ಯಕ್ರಮ ನಡೆಸಿದ್ದಲ್ಲದೆ ತಮ್ಮ ಕಾರ್ಮಿಕರಿಗೆ ಕಾರ್ಮಿಕರಿಗೆ ಸಿಗುವ ಸವಲತ್ತುಗಳ ಬಗ್ಗೆ ಹಾಗೂ ಕಾರ್ಮಿಕರ ಸುರಕ್ಷಾ ಕ್ರಮಗಳ ಬಗ್ಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಂಡಿರುವುದು ಇಡೀ ಸಮಾಜಕ್ಕೆ ಮಾದರಿಯಾಗಿದೆ ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಶ್ಲಾಘಿಸಿದರು.

ಬಂಟ್ವಾಳ ಬೈಪಾಸಿನ ಲೆವಿನ್ ಸಮೂಹ ಸಂಸ್ಥೆಗಳ ವತಿಯಿಂದ ಶುಕ್ರವಾರ ನಡೆದ ಆಯುಧ ಪೂಜೆ, ಕಾರ್ಮಿಕರ ಸುರಕ್ಷತಾ ಕ್ರಮದ ಬಗ್ಗೆ ಮಾಹಿತಿ ಕಾರ್ಯಾಗಾರ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಗ್ರಾರ್ ಚರ್ಚ್ ಧರ್ಮಗುರು ಗ್ರೆಗರಿ ಡಿ’ಸೋಜ ಪೂಜಾ ಕಾರ್ಯಕ್ರಮ ನೆರವೇರಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಇದೇ ವೇಳೆ ಮಾತನಾಡಿದ ಲೆವಿನ್ ಸಮೂಹ  ಸಂಸ್ಥೆಗಳ ಮುಖ್ಯಸ್ಥ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಪಿಯೂಸ್ ಎಲ್. ರೋಡ್ರಿಗಸ್, ಕಾರ್ಮಿಕರು ಕೇವಲ ಸಂಸ್ಥೆಯ ಕೆಲಸಗಾರರಾಗಿರದೆ, ನಮ್ಮ ಕುಟುಂಬದ ಸದಸ್ಯರಿದ್ದಂತೆ. ಕಾರ್ಮಿಕರಿಂದಲೇ ಸಂಸ್ಥೆಯ ಸರ್ವತೋಮುಖ ಅಭಿವೃದ್ದಿ ಸಾಧ್ಯವಾಗಿದೆ. ಕಾರ್ಮಿಕರನ್ನು ಯಾವುದೇ ತೊಂದರೆ ಬಾರದಂತೆ ನೋಡಿಕೊಳ್ಳುವುದು ನನ್ನ ಆದ್ಯ ಕರ್ತವ್ಯ ಎಂದರು.

ವಿದ್ಯುತ್ ಕಂಬವೇರಿ ದೀಪ ಸರಿಪಡಿಸುವ ವೇಳೆ ಆಕಸ್ಮಾತ್ ಮೃತಪಟ್ಟ ಸಂಸ್ಥೆಯ ಕಾರ್ಮಿಕ ವಸಂತ ಪೂಜಾರಿ ಅವರ ಕುಟುಂಬಕ್ಕೆ ಸರಕಾರದ ವತಿಯಿಂದ ವಿಶೇಷ ಪರಿಹಾರ ಮಂಜೂರು ಮಾಡುವಂತೆ ಇದೇ ವೇಳೆ ಅವರು ಸಚಿವರಿಗೆ ಮನವಿ ಮಾಡಿಕೊಂಡರು.

ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಮುಖ್ಯಸ್ಥರ ಮಾತೃಶ್ರೀ ಮೋನಿಕಾ ರೋಡ್ರಿಗಸ್, ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್. ಖಾದರ್, ಬಂಟ್ವಾಳ ಪುರಸಭಾಧ್ಯಕ್ಷ ಪಿ. ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ತಾ.ಪಂ. ಉಪಾಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ, ಜಿ.ಪಂ. ಸದಸ್ಯರಾದ ಕೆ.ಕೆ. ಶಾಹುಲ್ ಹಮೀದ್, ಬಿ. ಪದ್ಮಶೇಖರ್ ಜೈನ್, ಅಕ್ರಮ- ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ಪುರಸಭಾ ಸದಸ್ಯರಾದ ಬಿ. ವಾಸು ಪೂಜಾರಿ, ಗಂಗಾಧರ್, ಮಾಜಿ ಸದಸ್ಯ ಎಪ್ರಿಯಮ್ ಸಿಕ್ವೇರಾ, ಮೆಸ್ಕಾಂ ಅಧೀಕ್ಷಕ ಮಂಜಪ್ಪ, ಕೆಥೋಲಿಕ್ ಸಭಾ ಸಮಿತಿಯ ಅಧ್ಯಕ್ಷ ಸ್ಟ್ಯಾನಿ ಲೋಬೊ, ಕಾಂಗ್ರೆಸ್ ಎಸ್ಸಿ-ಎಸ್ಟಿ ಘಟಕದ ಅಧ್ಯಕ್ಷ ಜನಾರ್ದನ ಚೆಂಡ್ತಿಮಾರ್, ಮೆಸ್ಕಾಂ ಸಲಹಾ ಸಮಿತಿ ಸದಸ್ಯ ವೆಂಕಪ್ಪ ಪೂಜಾರಿ, ವಿಠಲ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. ಮೆಸ್ಕಾಂ ಜ್ಯೂನಿಯರ್ ಇಂಜಿನಿಯರ್ ನಿತಿನ್ ಕುಮಾರ್ ವಿದ್ಯುತ್ ಕಾರ್ಮಿಕರು ನಿರ್ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.

ಇತ್ತೀಚೆಗೆ ಆಕಸ್ಮಾತ್ ಆಗಿ ಮೃತಪಟ್ಟ ಸಂಸ್ಥೆಯ ಕಾರ್ಮಿಕ ವಸಂತ ಪೂಜಾರಿ ಕುಟುಂಬಕ್ಕೆ ಪರಿಹಾರ ಧನ ಹಸ್ತಾಂತರಿಸಲಾಯಿತು. ಸಂಸ್ಥೆ ವತಿಯಿಂದ ಕಾರ್ಮಿಕರಿಗೆ ನಡೆಸಲಾದ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಾದವರಿಗೆ ಹಾಗೂ ಭಾಗವಹಿಸಿದವರಿಗೆ ಬಹುಮಾನ ವಿತರಿಸಲಾಯಿತು. ಆಯುಧಪೂಜೆ ಪ್ರಯುಕ್ತ ಸಂಸ್ಥೆಯ ಕಾರ್ಮಿಕರಿಗೆ ವಿಶೇಷ ಉಡುಗೊರೆ ನೀಡಿ ಗೌರವಿಸಲಾಯಿತು.  ಸಂಸ್ಥೆಯ ಪಾಲುದಾರ ರಾಜೇಶ್ ರೋಡ್ರಿಗಸ್ ವಂದಿಸಿ, ರಾಜೀವ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.