ಬಂಟ್ವಾಳ

ಬಂಟ್ವಾಳ ತಾಪಂ ಹಳೇ ಕಟ್ಟಡ ಇದ್ದ ಜಾಗದಲ್ಲಿ ಹೊಸ ಬಸ್ ನಿಲ್ದಾಣ ನಿರ್ಮಾಣ

ತಾಲೂಕು ಪಂಚಾಯತ್ ಸಭೆಯಲ್ಲಿ ಸದಸ್ಯರ ಸಹಕಾರ ಕೋರಿದ ಸಚಿವ ರೈ

ಅಭಿವೃದ್ಧಿ ಕಾರ್ಯಗಳಿಗೆ ತಕರಾರು ಮಾಡಿದಷ್ಟು ಕಾಮಗಾರಿ ವಿಳಂಬಗೊಳ್ಳುತ್ತದೆ. ನಾನು ಯಾವತ್ತೂ ಕಾನೂನು ಮೀರಿ ಹೋಗಿಲ್ಲ, ಹೋಗುವುದೂ ಇಲ್ಲ. ನಮ್ಮದು ಕೇವಲ ಭಾಷಣ ಮಾಡುವ ಮಂತ್ರವಲ್ಲ, ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಕ್ಕೆ ತರುವ ಮಂತ್ರ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಜಾಹೀರಾತು

ಬಂಟ್ವಾಳ ತಾಲೂಕು ಪಂಚಾಯತ್ ವಿಶೇಷ ಸಭೆ ಸೋಮವಾರ ನಡೆದಿದ್ದು, ಈ ಸಂದರ್ಭ ಸ್ಥಳೀಯ ಶಾಸಕರೂ ಆದ ಸಚಿವ ರೈ ಹಾಜರಿದ್ದು, ಸಭೆಯ ಕಲಾಪಗಳಲ್ಲಿ ಭಾಗವಹಿಸಿದರು.

ಈ ಸಂದರ್ಭ ತನ್ನ ಕ್ಷೇತ್ರದಲ್ಲಿ ನಡೆದ ಕಾಮಗಾರಿಗಳು, ಅಂತಿಮ ಹಂತದಲ್ಲಿರುವ ಯೋಜನೆ ಹಾಗೂ ಅಕ್ಟೋಬರ್ ಮೊದಲ ವಾರ ಉದ್ಘಾಟನೆಗೊಳ್ಳಲಿರುವ ಕಾರ್ಯಕ್ರಮಗಳ ಮಾಹಿತಿಯನ್ನು ಒದಗಿಸಿದರು. ಬಿ.ಸಿ.ರೋಡಿನಲ್ಲಿರುವ ಹಳೇ ತಾ.ಪಂ.ಕಟ್ಟಡವನ್ನು ತೆರವುಗೊಳಿಸಿ ಪಿಪಿ ಮಾದರಿಯಲ್ಲಿ (ಸಾರ್ವಜನಿಕ ಸಹಭಾಗಿತ್ವ) ಬಸ್ ನಿಲ್ದಾಣ ಸಹಿತ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದ್ದು, ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು ಎಂದು ರೈ ಹೇಳಿದರು. ಈ ಸಂದರ್ಭ ಹಳೇ ಕಟ್ಟಡದಲ್ಲಿ ಇದ್ದವರಿಗೆ ಪ್ರಥಮ ಆದ್ಯತೆ ನೀಡಲಾಗುವುದು ಎಂದರು.

ಸಭೆ ಆರಂಭವಾಗುತ್ತಿದ್ದಂತೆ ವಿಪಕ್ಷ ಸದಸ್ಯ ರಮೇಶ್ ಕುಡ್ಮೇರ್, ಯಶವಂತ ಪೂಜಾರಿ ಪೊಳಲಿ ಮಾತನಾಡಿ, ಬಸ್ ತಂಗುದಾಣ  ನಿರ್ಮಿಸುವ ಬಗ್ಗೆ ನಮ್ಮದೇನು ಅಭ್ಯಂತರವಿಲ್ಲ. ಸಚಿವರ ಮುತುವರ್ಜಿಯಲ್ಲಿಯೇ ಆ ಕೆಲಸ ಅಗಲೀ ನಾವು ಸಂಪೂರ್ಣ ಸಹಕಾರ ನೀಡುತ್ತೆವೆ, ನಾವು ಕೂಡ ಜನಪ್ರತಿನಿಗಳು ಬಸ್ ತಂಗುದಾಣದ ಬಗ್ಗೆ  ನೀಲನಕಾಶೆ, ಅದನ್ನು ಯಾರು ನಿರ್ಮಿಸುತ್ತಾರೆ ಎಂಬುದರ ಕುರಿತು ಸದಸ್ಯರಿಗೂ ಮಾಹಿತಿ ನೀಡಬೇಕು ಎಂಬುದಷ್ಟೇ ಎಲ್ಲಾ ಸದಸ್ಯರ ಪರವಾಗಿ ಕೇಳಿದ್ದೆವು, ಇದನ್ನು ಸ್ಥಾಯಿ ಸಮಿತಿ ಸಹಿತ ಸಾಮಾನ್ಯ ಸಭೆಯಲ್ಲೂ ಒತ್ತಾಯಿಸಿದ್ದೆವು ಆದರೆ ಈ ಕುರಿತು ನಮಗೆ ಸ್ಪಷ್ಟ ಮಾಹಿತಿ ಈ ವರೆಗೂ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು. ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸದಸ್ಯ ಉಸ್ಮಾನ್ ಕರೋಪಾಡಿ ಮನವಿಯೊಂದನ್ನು ಸಭೆಗೆ ತೋರಿಸಿ ಇದರಿಂದಾಗಿ ಸದಸ್ಯರಿಗೆ ಅನುಮಾನ ಉಂಟಾಗಿದೆ. ಇದಕ್ಕೆ ಸೂಕ್ತ ಉತ್ತರ ನೀಡಿದರೆ ಎಲ್ಲವೂ ಪರಿಹಾರವಾದಂತೆ ಎಂದರು.

ಯಾವುದೇ ಕಾಮಗಾರಿಯಲ್ಲಿ ಶೇ.೨೫ರಷ್ಟನ್ನು ಪ.ಜಾ.ಪ.ಪಂ.ಕ್ಕೆ ಸೇರಿದ ಗುತ್ತಿಗೆದಾರರಿಗೆ ನೀಡಬೇಕೆಂದು ಸರಕಾರ ಆದೇಶಿಸಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ನರೇಂದ್ರಬಾಬು ಸಭೆಗೆ ಮಾಹಿತಿ ನೀಡಿದರು.ಕೆಲ ಷರತ್ತುಗಳನ್ನು ಹಾಕಲಾಗಿದ್ದು, ಅದರಂತೆ ಅವರಿಗೆ ಗುತ್ತಿಗೆ ನೀಡಲಾಗುತ್ತಿದೆ ಎಂದು ಸದಸ್ಯರಾದ ಪ್ರಭಾಕರ ಪ್ರಭು ಪ್ರಶ್ನೆಗೆ ಇಂಜಿನಿಯರ್ ಉತ್ತರಿಸಿದರು.

ತಾಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾ ಸಭಾಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಬ್ಬಾಸ್ ಆಲಿ,ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮಿ ಬಂಗೇರ, ಮಂಗಳೂರು ಸಹಾಯಕ ಕಮೀಷನರ್ ರೇಣುಕಾಪ್ರಸಾದ್, ತಹಶೀಲ್ದಾರ್ ಪುರಂದರ ಹೆಗ್ಡೆ ವೇದಿಕೆಯಲ್ಲಿದ್ದರು. ಕಾರ್ಯನಿರ್ವಹಣಾಕಾರಿ ಸಿಪ್ರೀಯನ್ ಮಿರಾಂದ ಸ್ವಾಗತಿಸಿ, ವಂದಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.