ಬಂಟ್ವಾಳ

ಬಿ.ಸಿ.ರೋಡ್ ಥಂಡಾ, ಪೊಲೀಸರ ಹಗಲು ರಾತ್ರಿ ಕಾವಲು

ಒಂದು ತಿಂಗಳಿಂದ ಬೀಡುಬಿಟ್ಟಿರುವ ಹೊರಜಿಲ್ಲೆ ಪೊಲೀಸರು

ಜಾಹೀರಾತು

ಬಿ.ಸಿ.ರೋಡಿನಲ್ಲಿ ಹೇಗಿದೆ ಪರಿಸ್ಥಿತಿ, ಇವತ್ತು ಅಲ್ಲಿಗೆ ಬರಬಹುದೇ, ಏನು ತೊಂದರೆ ಇಲ್ಲವಷ್ಟೇ, ಬಸ್ಸು ಹೋಗುತ್ತದೆಯಾ?

ಶನಿವಾರ ಕಲ್ಲೆಸೆತ, ಲಾಠಿಚಾರ್ಜ್ ಸಹಿತ ಅಹಿತಕರ ಘಟನೆಗಳು ನಡೆದ ಬಿ.ಸಿ.ರೋಡಿನಲ್ಲಿ ಏನಾದರೂ ಆಗಬಹುದು ಎಂಬ ಊಹನೆ ಮತ್ತು ಆತಂಕದಿಂದ ಬಿ.ಸಿ.ರೋಡ್ ನಿವಾಸಿಗಳಲ್ಲಿ ಹೊರಭಾಗದವರು ಕೇಳುವ ಪ್ರಶ್ನೆ ಇದು.

ಯಾರು ಎಲ್ಲಿ, ಯಾವಾಗ ಕಲ್ಲೆಸೆಯುತ್ತಾರೋ, ಯಾವಾಗ ಹಲ್ಲೆ ನಡೆಸುತ್ತಾರೋ ಎಂಬ ಆತಂಕದೊಂದಿಗೆ ಬಿ.ಸಿ.ರೋಡಿನವರಲ್ಲದವರು ಕೇಳುವ ಈ ಪ್ರಶ್ನೆಗಳಿಗೆ ಶನಿವಾರದ ಘಟನೆ ಒಂದು ಕಾರಣವಾದರೆ, ಸಾಮಾಜಿಕ ಪ್ರಬಲ ಜಾಲತಾಣ ವಾಟ್ಸಾಪ್ ದುರುಪಯೋಗ ಇನ್ನೊಂದು ಕಾರಣ.

ಚಿತ್ರ: ಎಸ್.ಆರ್.ಬಿ.ಸಿ.ರೋಡ್

ಆದರೆ ಎಲ್ಲರ ನಿರೀಕ್ಷೆ ತಲೆಕೆಳಗಾಗುವಂತೆ ಬಿ.ಸಿ.ರೋಡ್ ಭಾನುವಾರ ಸಹಜ ಸ್ಥಿತಿಯಲ್ಲಿತ್ತು.  ಯಾವುದೇ ಅಹಿತಕರ ಘಟನೆಗಳೂ ನಡೆಯಲಿಲ್ಲ. ಸೋಮವಾರವ ಎಂದಿನಂತೆ ಪೇಟೆ ತೆರೆಯುತ್ತಿದೆ. ಫರಂಗಿಪೇಟೆ,

ಬೆಳಗ್ಗೆಯೇ ವಾಹನಗಳು ಹೆದ್ದಾರಿಯಲ್ಲಿ ನಿರಾತಂಕವಾಗಿ ಓಡಾಟ ನಡೆಸಿದವು. ಜನಸಾಮಾನ್ಯರೂ ರಸ್ತೆಗಿಳಿದರು.

ಬಿ.ಸಿ.ರೋಡ್, ಕೈಕಂಬ, ಬಂಟ್ವಾಳ, ಮೇಲ್ಕಾರ್, ಸಜೀಪ, ಮಾರ್ನಬೈಲು, ಕಲ್ಲಡ್ಕ, ಫರಂಗಿಪೇಟೆ ಸಹಿತ ಪ್ರಮುಖ ಪ್ರದೇಶಗಳಲ್ಲಿ ಪೊಲೀಸರು ನಾಕಾಬಂಧಿ ನಡೆಸಿ ಬಂದು ಹೋಗುವ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದಾರೆ.

ಪೊಲೀಸ್ ಕಾವಲು:

ವಿಚ್ಛಿದ್ರಕಾರಿ ಶಕ್ತಿಗಳಿಗೆ ಆಟ, ಜನರಿಗಷ್ಟೇ ಅಲ್ಲ, ಪೊಲೀಸರಿಗೂ ಪ್ರಾಣಸಂಕಟ.

ಸೆ.144ರನ್ವಯ ನಿಷೇಧಾಜ್ಞೆ ಜಾರಿಯಲ್ಲಿರುವ ಬಿ.ಸಿ.ರೋಡ್ ಸಹಿತ ಬಂಟ್ವಾಳ ತಾಲೂಕಿನ ಪ್ರಮುಖ ಜಾಗಗಳಲ್ಲಿ ಪೊಲೀಸ್ ಸಿಬ್ಬಂದಿ ಬೀಡುಬಿಟ್ಟಿದ್ದಾರೆ.

ಮೇ.26ರಂದು ಕಲ್ಲಡ್ಕದಲ್ಲಿ ಹಲ್ಲೆ ಪ್ರಕರಣದ ಮರುದಿನದಿಂದ ಬಂಟ್ವಾಳ ತಾಲೂಕಿನಲ್ಲಿ ಪ್ರತಿಬಂಧಕಾಜ್ಞೆ ಆದೇಶ ಹೊರಬಿತ್ತು. ಅದರೊಂದಿಗೆ ಪ್ರತಿದಿನ ಎಂಬಂತೆ ಹೊರಜಿಲ್ಲೆಗಳಿಂದ ಪೊಲೀಸರು ಆಗಮಿಸಲು ಆರಂಭವಾಯಿತು. ಗಲಭೆ, ಪ್ರಕ್ಷುಬ್ಧ ಪರಿಸ್ಥಿತಿ ಇದ್ದರೆ ಪೊಲೀಸರು ಬರುವುದು ಮಾಮೂಲು ಸಂಗತಿ. ಅದು ಮಹತ್ವದ ವಿಚಾರವೇನೂ ಅಲ್ಲ ಎಂಬುದೂ ಹೌದು. ಆದರೆ ಬಂಟ್ವಾಳ ತಾಲೂಕಿನ ಮಟ್ಟಿಗೆ ಈ ಗಲಭೆ ಪ್ರಕರಣಗಳು ತಹಬಂದಿಗೆ ಬರಲೇ ಇಲ್ಲ. ಸಮಸ್ಯೆ ಹೆಚ್ಚಾದಂತೆ ಪೊಲೀಸರ ಸಂಖ್ಯೆಯೂ ಜಾಸ್ತಿಯಾಯಿತು.

ಮೇ.26ರ ಬಳಿಕ 27ರಂದು ಕಲ್ಲಡ್ಕದಲ್ಲಿ ಸಣ್ಣ ಚಕಮಕಿಯ ಬಳಿಕ ಸೆ.144ರನ್ವಯ ನಿಷೇಧಾಜ್ಞೆ ವಿಸಲಾಯಿತು. ಜೂನ್ 13 ರಂದು ಅದೇ ಕಲ್ಲಡ್ಕದಲ್ಲಿ ಅಹಿತಕರ ಘಟನೆ ನಡೆಯಿತು. ಅದರ ಬೆನ್ನಲ್ಲೇ ಮೇಲ್ಕಾರ್ ನಲ್ಲಿ ಯುವಕನಿಗೆ ಇರಿತ ಪ್ರಕರಣವೂ ನಡೆಯಿತು. ಕೆಲ ದಿನಗಳ ಬಳಿಕ ಮಾರಿಪಳ್ಳ ಸಮೀಪ ಯುವಕನ ಮೇಲೆ ಹಲ್ಲೆ ಪ್ರಕರಣ ನಡೆಯಿತು. ಜೂನ್ 21 ರಂದು ಬೆಂಜನಪದವು ಸಮೀಪ ಕಲಾಯಿ ಅಶ್ರಫ್ ಅವರ ಹತ್ಯೆ ನಡೆಯಿತು. ಪೊಲೀಸರ ಸಂಖ್ಯೆ ಜಾಸ್ತಿಯಾಯಿತು.

ಜೂನ್ ೨೨ರಿಂದ ಬಿ.ಸಿ.ರೋಡ್‌ನಲ್ಲಿ ಪೊಲೀಸರ ಇರುವಿಕೆ ಮಾಮೂಲಾಗತೊಡಗಿತು. ನಾಲ್ಕೈದು ದಿನದಲ್ಲಿ ಕರ್ನಾಟಕ ರಾಜ್ಯ ಕ್ಷಿಪ್ರ ಕಾರ್ಯಪಡೆಯೂ ಬಂತು. ಸುಮಾರು ಒಂದು ಸಾವಿರದಷ್ಟು ಕೆಎಸ್ಸಾರ್ಪಿ, ಡಿಆರ್ ಪೊಲೀಸರು ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆ ಸಹಿತ ಹೊರಜಿಲ್ಲೆಗಳಿಂದ ಆಗಮಿಸಿದರು. ಕಳೆದ ಮಂಗಳವಾರ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಮೇಲೆ ಮಾರಣಾಂತಿಕ ದಾಳಿ ನಡೆದು ಅವರು ಮೂರು ದಿನಗಳ ಬಳಿಕ ಕೊನೆಯುಸಿರೆಳೆದರು. ಈತನ್ಮಧ್ಯೆ ಸಂಘಪರಿವಾರದ ಪ್ರತಿಭಟನೆಯೂ ನಡೆಯಿತು. ಬಿ.ಸಿ.ರೋಡಿನಲ್ಲಿ ಮತ್ತೆ ಪೊಲೀಸ್ ಬೂಟಿನ ಸದ್ದು. ಸಂಖ್ಯೆ ಸಹಸ್ರ ದಾಟಿತ್ತು.

ಸುಮಾರು 1600 ಪೊಲೀಸರು ಬಂಟ್ವಾಳ ತಾಲೂಕಿನ ಹಲವೆಡೆ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬಸ್ ನಿಲ್ದಾಣ, ಗಲ್ಲಿಗಳು, ಆಯಕಟ್ಟಿನ ಜಾಗಗಳು, ಅಂಗಡಿ ಜಗಲಿ, ಫ್ಲೈಓವರ್ ಅಡಿ, ಬ್ಯಾರಿಕೇಡ್ ಹಾಕಿ ತಪಾಸಣೆ ಮಾಡುವ ಜಾಗ ಹೀಗೆ ಸಿಕ್ಕಸಿಕ್ಕಲ್ಲಿ ಪೊಲೀಸರಿಗೆ ಕರ್ತವ್ಯವಿದೆ. ಚಿಕ್ಕಮಗಳೂರು, ಶಿವಮೊಗ್ಗ, ಹಾವೇರಿ, ವಿಜಯಪುರ, ಮೈಸೂರು ಸಹಿತ ಸುಮಾರು ಹತ್ತು ಜಿಲ್ಲೆಗಳಿಂದ ಪೊಲೀಸರು ಆಗಮಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಧಾರಾಕಾರ ಮಳೆ, ಚಳಿಯನ್ನು ಲೆಕ್ಕಿಸದೆ ಕರ್ತವ್ಯದಲ್ಲಿ ಪೊಲೀಸರು ನಿರತರಾಗಿದ್ದಾರೆ. ಒಂದು ಬದಿಯಿಂದ ಇನ್ನೊಂದು ಬದಿಗೆ ಅವರನ್ನು ತೆರೆದ ವಾಹನಗಳ ಮೂಲಕ ಕರೆದೊಯ್ಯಲಾಗುತ್ತದೆ.

ಬಂಟ್ವಾಳದಲ್ಲಿರುವ ಸಹಸ್ರ ಸಂಖ್ಯೆ ಪೊಲೀಸರಿಗೆ ಇಲಾಖೆಯೇ ಊಟದ ವ್ಯವಸ್ಥೆ ಮಾಡಿದೆ. ಅದರ ಜವಾಬ್ದಾರಿಯನ್ನು ಬಂಟ್ವಾಳದ ಸ್ಥಳೀಯ ಪೊಲೀಸರು ವಹಿಸಿಕೊಂಡಿದ್ದಾರೆ. ಮೂರು ಹೊತ್ತು ಪೊಲೀಸರು ಇದ್ದ ಜಾಗಕ್ಕೆ ಅನ್ನ, ಸಾಂಬಾರ್, ರೈಸ್‌ಬಾತ್, ಉಪ್ಪಿನಕಾಯಿ ಸಹಿತ ಇರುವ ಊಟವನ್ನು ಕ್ಯಾಟರಿಂಗ್ ವ್ಯವಸ್ಥೆ ಮೂಲಕ ಒದಗಿಸಲಾಗುತ್ತದೆ. ಬೇರೆ ರಾಜ್ಯಗಳಲ್ಲಿದ್ದಂತೆ ನೀರಿನ ಸಮಸ್ಯೆ ಇಲ್ಲಿಲ್ಲ. ಹಾಲ್, ವಿವಿಧ ಗೆಸ್ಟ್ ಹೌಸ್‌ಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.