ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಬಿಲ್ಲವ ಸಮಾಜದ ಪ್ರಶ್ನಾತೀತ ನಾಯಕ, ಸಮಾಜಕ್ಕೆ ಶಕ್ತಿ ಕೊಟ್ಟ ಅವರನ್ನು ಅವಹೇಳನ ಮಾಡಿದ್ದಾರೆಂಬ ಆರೋಪದ ವಿಚಾರದ ಕುರಿತು ಈಗಾಗಲೇ ಸ್ಪಷ್ಟನೆಯನ್ನು ಸಚಿವರು ನೀಡಿದ್ದಾರೆ ಹೀಗಾಗಿ ಬಿಲ್ಲವ ಸಮಾಜ ಯಾವುದೇ ಗೊಂದಲಕ್ಕೆ ಒಳಗಾಗಬಾರದು ಎಂದು ಬಂಟ್ವಾಳ ತಾಲೂಕು ಬಿಲ್ಲವ ಸಮಾಜದ ಮುಖಂಡರು ಮನವಿ ಮಾಡಿದ್ದಾರೆ.
ಮಂಗಳವಾರ ಸಂಜೆ ಮೆಲ್ಕಾರ್ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಲ್ಲವ ಮುಖಂಡರಾದ ಬೇಬಿ ಕುಂದರ್ ಮತ್ತು ಸಂಜೀವ ಪೂಜಾರಿ,
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಜೀಪದ ನಾರಾಯಣಗುರು ಮಂದಿರ ಉದ್ಘಾಟನೆಗೆ ಕರೆಸಲು ಸಚಿವ ರೈ ಕಾರಣಕರ್ತರು. ಅಲ್ಲದೆ ಜನಾರ್ದನ ಪೂಜಾರಿ ಮತ್ತು ರಮಾನಾಥ ರೈಗಳು ಒತ್ತಡ ಹೇರಿ ಸರಕಾರವೇ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ ಘೋಷಿಸಲು ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.
ಬಿಲ್ಲವ ಸಮುದಾಯಕ್ಕೆ ಸಚಿವ ರಮಾನಾಥ ರೈ ಕೊಡುಗೆ ಅಪಾರ, ಬಿ.ಸಿ.ರೋಡಿನ ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಎಂದು ನಾಮಕರಣಗೊಳಿಸುವಲ್ಲಿ ಸಚಿವ ರೈ ಯವರ ಶ್ರಮವಿದೆ. ಗೆಜ್ಜೆಗಿರಿ ಕ್ಷೇತ್ರಕ್ಕೆ ಅನುದಾನವನ್ನು ಘೋಷಿಸಿರುವ ಸಚಿವರು, ಮುಂದೆಯೂ ನೆರವು ನೀಡುವುದಾಗಿ ತಿಳಿಸಿದ್ದಾರೆ ಎಂದು ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಬೇಬಿ ಕುಂದರ್ ತಿಳಿಸಿದರು.
ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್, ತಾ.ಪಂ.ಸದಸ್ಯರಾದ ಸಂಜೀವ ಪೂಜಾರಿ, ಶಿವ ಪ್ರಸಾದ್, ಪುರಸಭಾ ಸದಸ್ಯರಾದ ವಾಸು ಪೂಜಾರಿ, ಗಂಗಾಧರ್, ಪ್ರಮುಖರಾಧ ಭುವನೇಶ್ ಪಚ್ಚಿನಡ್ಕ, ಸಂತೋಷ್ ಕೊಟ್ಟಿಂಜ, ರಾಜೇಶ್ ಸುವರ್ಣ, ವಿಶ್ವನಾಥ್ ಬಿ, ಗಣೇಶ್ ಪೂಜಾರಿ, ಶ್ರೀಧರ ಅಮೀನ್, ಕೇಶವ ಪೂಜಾರಿ, ಸುರೇಶ್ ಪೂಜಾರಿ, ಸತೀಶ್, ಗಿರೀಶ್, ಶಿವಪ್ಪ ಪೂಜಾರಿ, ಶಂಕರ ಪೂಜಾರಿ, ಪ್ರವೀಣ್ ಪೂಜಾರಿ, ಭೋಜ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…