ಸೋಮವಾರ ತಡರಾತ್ರಿ ಬಂಟ್ವಾಳ ತಾಲೂಕು ಶಂಭೂರು ಸಮೀಪ ಬಾಳ್ತಿಲ ಗ್ರಾಮದ ಕೊಡಂಗೆಕೋಡಿ ಎಂಬಲ್ಲಿ ಯುವಕನೋರ್ವನನ್ನು ಕೋಳಿ ಅಂಕಕ್ಕೆ ಬಳಸುವ ಚೂರಿಯಿಂದ ಇರಿದು ಹತ್ಯೆ ಮಾಡಲಾಗಿದೆ.
ಸ್ಥಳೀಯ ನಿವಾಸಿ ಗಣೇಶ್ ಎಂಬವರ ಪುತ್ರ ರಂಜಿತ್ (26) ಕೊಲೆಯಾದ ಯುವಕ. ರಂಜಿತ್ ನ ದೊಡ್ಡಪ್ಪನ ಮಗ ನವೀನ್ ಅಲಿಯಾಸ್ ರಾಜೇಶ್ (24) ಕೊಲೆ ನಡೆಸಿರುವ ಆರೋಪಿಯಾಗಿದ್ದು, ಘಟನೆ ಬಳಿಕ ಈತ ಪರಾರಿಯಾಗಿದ್ದಾನೆ. ಕಳೆದ ವರ್ಷ ಮದುವೆಯಾಗಿರುವ ರಂಜಿತ್ ಗೆ ಮೂರು ತಿಂಗಳ ಮಗುವೊಂದಿದೆ.
ಘಟನೆ ವಿವರ:
ಮಾತಿನ ಚಕಮಕಿ ಹಾಗೂ ಹೊಡೆದಾಟದ ಮುಂದುವರಿದ ಭಾಗವೇ ಕೊಲೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ಸಂಜೆ ರಂಜಿತ್ ಮತ್ತು ರಾಜೇಶ್ ನಡುವೆ ಬಾರ್ ಒಂದರಲ್ಲಿ ಯಾವುದೋ ವಿಷಯಕ್ಕೆ ಸಂಬಂಧಿಸಿ ಮಾತಿನ ಚಕಮಕಿ ಮತ್ತು ಹೊಡೆದಾಟ ನಡೆದಿತ್ತು. ಅದಾದ ಬಳಿಕ ಮನೆಗೆ ಬಂದಿದ್ದರು. ಸೋಮವಾರ ರಾತ್ರಿ ಸುಮಾರು 11.30ರ ಬಳಿಕ ಕರೆಂಟ್ ಹೋಗಿತ್ತು. ಈ ಸಂದರ್ಭ ರಂಜಿತ್ ಮನೆಗೆ ನುಗ್ಗಿದ ರಾಜೇಶ್, ಮಲಗಿದ್ದ ರಂಜಿತ್ ಗೆ ಚೂರಿಯಿಂದ ಇರಿದು ಪರಾರಿಯಾಗಿದ್ದಾನೆ. ರಂಜಿತ್ ಮತ್ತು ರಾಜೇಶ್ ಮನೆ ಹತ್ತಿರ ಹತ್ತಿರವಿದ್ದು ರಾಜೇಶ್ ಮನೆಯೊಳಗೆ ನುಗ್ಗಿದ ವೇಳೆ ರಂಜಿತ್ ನ ತಂದೆ ಮತ್ತು ತಾಯಿ ತಡೆದಾಗ ಅವರ ಮೇಲೂ ಹಲ್ಲೆ ನಡೆಸಿದ್ದಾನೆ. ಕೂಡಲೇ ಗಾಯಗೊಂಡ ರಂಜಿತ್ ನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಷ್ಟರಾಗೇ ಆತ ಮೃತಪಟ್ಟಿದ್ದ. ರಂಜಿತ್ ತಂದೆ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೇದಮೂರ್ತಿ, ಬಂಟ್ವಾಳ ಡಿವೈಎಸ್ಪಿ ಡಾ. ರವೀಶ್ ಸಿ.ಆರ್., ಸಿಐ ಮಂಜಯ್ಯ, ನಗರ ಠಾಣೆ ಎಸ್ಸೈ ರಕ್ಷಿತ್ ಹಾಗೂ ಅವರ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…