ಬಂಟ್ವಾಳ

ಕುಡುಕರ ಭಯವಿಲ್ಲ, ಡ್ರಗ್ಸ್ ಸೇವಿಸುವವರದ್ದೇ ಭೀತಿ

ನಮಗೆ ಕುಡುಕರ ಭಯವಿಲ್ಲ ಸ್ವಾಮೀ, ಹಗಲು ರಾತ್ರಿ ಗಾಂಜಾ ಸೇವಿಸಿಕೊಂಡು ಇರ್ತಾರೆ. ಎಲ್ಲ ಕಡೆಯೂ ಗಾಂಜಾ ಸಹಿತ ಅಮಲು ಸೇವಿಸುವ ಹುಡುಗರು ಇರ್ತಾರೆ, ಇದಕ್ಕೆಲ್ಲ ಯಾವಾಗ ಕಡಿವಾಣ ಹಾಕ್ತೀರಿ…?

ಹೀಗೆಂದು ಪ್ರಶ್ನಿಸಿದವರು ದಲಿತ ಮುಖಂಡ ಜನಾರ್ದನ ಚಂಡ್ತಿಮಾರ್.

ಜಾಹೀರಾತು

ಬಂಟ್ವಾಳ ನಗರ ಠಾಣೆಯಲ್ಲಿ ಭಾನುವಾರ ನಡೆದ ಪರಿಶಿಷ್ಟ ಜಾತಿ, ಪಂಗಡಕ್ಕೆ ಸಂಬಂಧಿಸಿ ನಡೆದ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆಯೊಂದು ನಡೆಯಿತು. ಜಿಲ್ಲಾ ಮಟ್ಟದ ಸಭೆ ಎಂದು ಹೇಳಲಾದರೂ ಅಲ್ಲಿದ್ದುದು ಬೆರಳೆಣಿಕೆಯಷ್ಟೇ ಸಭಾಸದರು. ಆಯ್ದ ಕೆಲವರಿಗಷ್ಟೇ ಯಾಕೆ ಹೇಳಿದ್ದೀರಿ ಎಂದು ವಿಶ್ವನಾಥ ಚಂಡ್ತಿಮಾರ್ ಪ್ರಶ್ನಿಸಿದರು. ಈ ಸಂದರ್ಭ ಉತ್ತರಿಸಿದ ಎಸ್ಪಿ, ಮುಂದಿನ ಬಾರಿ ಹೀಗಾಗದು, ಎಲ್ಲರಿಗೂ ಎಸ್ಸೆಮ್ಮೆಸ್ ಮೂಲಕ ಮಾಹಿತಿ ನೀಡುತ್ತೇವೆ ಎಂದರು.

ಈ ಸಂದರ್ಭ ಬೀಟ್ ವ್ಯವಸ್ಥೆ, ಅದರಿಂದಾಗುವ ಪ್ರಯೋಜನಗಳ ಕುರಿತು ಎಸ್ಪಿ ಮಾಹಿತಿ ನೀಡಿದರು. ಆಗ ಮಾತನಾಡಿದ ಜನಾರ್ದನ ಚಂಡ್ತಿಮಾರ್, ಬಂಟ್ವಾಳದಲ್ಲಿ ಗಾಂಜಾ ಸೇದಿ ಅಪರಾಧ ಕೃತ್ಯ ನಡೆಸುವವರ ಸಂಖ್ಯೆ ಜಾಸ್ತಿಯಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಉಳಿದ ದಲಿತ ಮುಖಂಡರೂ ಇದಕ್ಕೆ ದನಿಗೂಡಿಸಿದರು.

ಗಾಂಜಾ ಕುರಿತು ಸಭೆಯಲ್ಲಿ ಪ್ರಸ್ತಾವಿತ ಅಂಶಗಳು ಇವು.

ಬಂಟ್ವಾಳ ಕೈಕುಂಜ ರೈಲ್ವೆ ಸ್ಟೇಶನ್, ರೈಲ್ವೆ ಹಳಿಯ ಬಳಿ , ಬಂಟ್ವಾಳ ನೆರೆ ವಿಮೋಚನಾ ರಸ್ತೆ ಬಳಿ ಸಂಜೆ ಬಳಿಕ ಅನುಮಾನಾಸ್ಪದವಾಗಿ ಮಾದಕ ದ್ರವ್ಯ ಸೇವಿಸುವವರು ಇರುವ ಸಂಶಯವಿದೆ. ಬೆಂಜನಪದವಿನಲ್ಲೂ ಇದೇ ಆರೋಪಗಳಿವೆ. ಜಿಲ್ಲೆಯ ಹಲವೆಡೆ ಗಾಂಜಾ ಸಹಿತ ಮಾದಕ ದ್ರವ್ಯ ಸೇವನೆಯ ಚಟುವಟಿಕೆಗಳು ನಡೆಯುತ್ತಿವೆ. ನೀವು ಪೊಲೀಸರು ಇವರನ್ನೆಲ್ಲ ಹಿಡಿಯುತ್ತಿದ್ದೇವೆ ಎನ್ನುತ್ತೀರಿ ಆದರೆ ಸಪ್ಲೈ ಮಾಡುವವರು ಯಾರು ಎಂಬುದು ಗೊತ್ತಾಗುವುದಿಲ್ಲವೇ, ಹೀಗಾಗಿ ಗಾಂಜಾ ಸಹಿತ ಅಕ್ರಮ ಚಟುವಟಿಕೆ ನಡೆಸುವವರ ಮೇಲೆ ಕ್ರಮ ಕೈಗೊಳ್ಳಬೇಕು.ಜಿಲ್ಲಾ ಮಟ್ಟದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು.

ಈ ಕುರಿತು ಎಸ್ಪಿ ವಿವಿಧ ಮುಖಂಡರಿಂದ ಮಾಹಿತಿ ಆಲಿಸಿದ ಬಳಿಕ ಸ್ಥಳದಲ್ಲೇ ಇದ್ದ ಪ್ರೊಬೆಷನರಿ ಐಎಎಸ್ ಅಧಿಕಾರಿ ನಾಗೇಶ್ ಅವರಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸೂಚಿಸಿದರು.

ರೌಡಿಶೀಟರ್ ಹಾಕಲು ಹಿಂಜರಿಯುವುದಿಲ್ಲ:

ಅಕ್ರಮ ಮರಳು ದಂಧೆ ಕುರಿತು ಸಭೆಯಲ್ಲಿ ಆಕ್ಷೇಪ ಕೇಳಿಬಂತು. ಮಾತನಾಡಿದ ಮುಖಂಡ ಜನಾರ್ದನ ಚಂಡ್ತಿಮಾರ್, ಮರಳು ನೀತಿಯಿಂದಾಗಿ ಬಡವರು ಕಂಗಾಲಾಗಿದ್ದಾರೆ. ಬೆಂಗಳೂರಿಗೆ ಅಕ್ರಮವಾಗಿ ರವಾನೆಯಾಗುತ್ತಿರುವ ಮರಳುಲಾರಿಗಳನ್ನು ಹಿಡಿಯದೆ, ಸಾಮಾನ್ಯನೊಬ್ಬನನ್ನು ಹಿಡಿದು ಆತನಿಗೆ ದಂಡ ವಿಧಿಸಲಾಗುತ್ತದೆ. ಎತ್ತಿನಹೊಳೆ ಯೋಜನೆಗೆ ಜಿಲ್ಲೆಯಿಂದಲೇ ಮರಳು ರವಾನೆಯಾಗುತ್ತದೆ. ಆದರೆ ಅದ್ಯಾವುದರ ವಿರುದ್ಧವೂ ಗಣಿ ಇಲಾಖೆ, ಕಂದಾಯ ಹಾಗೂ ಪೊಲೀಸರು ಕ್ರಮ ಕೈಗೊಂಡಿಲ್ಲ. ಅಕ್ರಮ ಮರಳು ದಂಧೆಕೋರರ ವಿರುದ್ಧ ಕಟ್ಟುನಿಟ್ಟಿನ ಕಡಿವಾಣ ಹಾಕಲು ಪೊಲೀಸ್ ಇಲಾಖೆಯೂ ಸಹಕರಿಸುತ್ತಿದ್ದು, ರೌಡಿಶೀಟರ್ ಹಾಕಲು ಹಾಗೂ ಗರಿಷ್ಠಮಟ್ಟದ ದಂಡ ವಿಧಿಸಲಾಗುವುದು ಎಂದು ಬೊರಸೆ ಹೇಳಿದರು.

ಗಂಗಾಧರ, ಅಶೋಕ, ರಘುವೀರ್ ಸೂಟರ್ ಪೇಟೆ, ಶೇಖರ ಎಲ್, ರಾಜ ಪಲ್ಲಮಜಲು, ನಾರಾಯಣ ಪುಂಚಮೆ, ವಿಶ್ವನಾಥ ಚಂಡ್ತಿಮಾರ್ ಮೊದಲಾದವರು ಮಾತನಾಡಿದರು. ಅಡಿಷನಲ್ ಎಸ್ಪಿ ವೇದಮೂರ್ತಿ, ಡಿವೈಎಸ್ಪಿಗಳಾದ ರವೀಶ್ ಸಿ.ಆರ್, ಭಾಸ್ಕರ್, ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಕೆ. ಮಂಜಯ್ಯ, ಪ್ರೊಬೆಷನರಿ ಐಪಿಎಸ್ ಅಧಿಕಾರಿ ನಾಗೇಶ್ ಡಿ.ಎಲ್, ಬಂಟ್ವಾಳ ನಗರ ಠಾಣಾಧಿಕಾರಿ ರಕ್ಷಿತ್ ಗೌಡ ಮೊದಲಾದವರು ಉಪಸ್ಥಿತರಿದ್ದರು.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.