ವಿಟ್ಲ

ಪಟಾಕಿ ತಯಾರಿಸುತ್ತಲೇ ಅಸು ನೀಗಿದ ಕಾರ್ಮಿಕರು

www.bantwalnews.com

ಬಂಟ್ವಾಳ ತಾಲೂಕಿನ ವಿಟ್ಲ ಮುಡ್ನೂರು ಗ್ರಾಮ ಕಂಬಳಬೆಟ್ಟು ನಿವಾಸಿಗಳಾದ ಸುಂದರ ಪೂಜಾರಿ ಮತ್ತು ಅಬ್ದುಲ್ ಅಜೀಮ್ ಅವರಿಗೆ ಪಟಾಕಿ ತಯಾರಿಯೇ ಸಾವಿಗೆ ಕಾರಣವಾಗುತ್ತದೆ ಎಂದು ಗೊತ್ತೇ ಆಗಲಿಲ್ಲ. ಕಂಬಳಬೆಟ್ಟು ಗರ್ನಲ್ ಸಾಹೀಬರ ಮನೆಯಲ್ಲಿ ಪಟಾಕಿ ತಯಾರಿ ಕಾರ್ಮಿಕರು ಇವರು.

ಜಾಹೀರಾತು

ಅಬ್ದುಲ್ ಅಜೀಮ್ ಅವರಿಗೆ 24 ವರ್ಷ. ಅವರು ಕಂಬಳಬೆಟ್ಟು ಶಾಂತಿನಗರದ ಉಮ್ಮರ್ ಕಾಂಞ ಎಂಬವರ ಮಗ. ಸುಂದರ  ಪೂಜಾರಿ ಅವರಿಗೆ 39 ವರ್ಷ. ಅವರು ಕುಳ ಗ್ರಾಮದ ಕಾರ್ಯಾಡಿ ಮನೆಯ ಚೋಮ ಪೂಜಾರಿ ಎಂಬವರ ಮಗ. ಸ್ಫೋಟದ ತೀವ್ರತೆಗೆ ಸಮೀಪದ ಮನೆಯ ಇಬ್ಬರು ಗಾಯಗೊಂಡಿದ್ದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಮವಾರ ಸುಮಾರು 6.15ರಿಂದ 6.30ರ ವೇಳೆ ಘಟನೆ ನಡೆದಿದೆ.

ಏನಾಯಿತು?

ಸಮೀಪದ ಸುಮಾರು ಒಂದು ಕಿ.ಮೀ. ವ್ಯಾಪ್ತಿಯ ಮನೆಗಳ ಜನರಿಗೆ ಭಾರೀ ಸ್ಫೋಟದ ಸದ್ದು ಕೇಳಿದೆ. ಫಕ್ಕನೆ ಭೂಕಂಪವೇನಾದರೂ ಆಯಿತೇನೋ ಎಂಬಂತೆ ಜನರು ಭೀತರಾಗಿದ್ದಾರೆ. ಕೆಲವರಂತೂ ಮನೆಯಿಂದ ಓಡೋಡಿ ಬಂದಿದ್ದಾರೆ.

ಗರ್ನಲ್ ಸಾಹೇಬರ ಮನೆಯಲ್ಲಿ  ಸಿಡಿಮದ್ದು ತಯಾರಿ ಹಲವು ದಶಕಗಳಿಂದ ನಡೆಯುತ್ತಿದ್ದು, ಸಾಹೀಬ್ ಅವರ ಮರಣದ ಬಳಿಕ ಈ ಘಟಕವನ್ನು ಅವರ ಮಕ್ಕಳಾದ ಗಫೂರ್ ಮತ್ತು ರಫೀಕ್ ಎಂಬವರು ನಡೆಸುತ್ತಿದ್ದರು. ಸಿಡಿಮದ್ದು ತಯಾರಿಕೆಗೆ ಪರಿಕರಗಳನ್ನು ಆಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ . ಸಾಮಾನ್ಯವಾಗಿ ಇಲ್ಲಿ ಐದಾರು ಮಂದಿ ಕೆಲಸಗಾರರು ಸಿಡಿಮದ್ದು ತಯಾರಿಯಲ್ಲಿ ಇರುತ್ತಾರೆ. ಈ ಘಟಕದಲ್ಲಿ ಒಟ್ಟು ಆರು ಮಂದಿ ಕೆಲಸ ನಿರ್ವಹಿಸುತ್ತಿದ್ದು ಸ್ಫೋಟಕ್ಕೆ ಕೆಲವೇ ನಿಮಿಷಕ್ಕೆ ಮೊದಲು ನಾಲ್ವರು ಕೆಲಸ ಮುಗಿಸಿ ಘಟಕದಿಂದ ತೆರಳಿದ್ದರು.  ಉಳಿದಿದ್ದ ಸುಂದರ, ಮತ್ತು ಹಾಶೀಂ ಕೆಲಸದಲ್ಲಿ ನಿರತರಾಗಿದ್ದರು.

ಘಟನೆ ತೀವ್ರತೆಗೆ ಸುಂದರ ಮತ್ತು ಹಾಶೀಂ ಅವರ ಮೃತದೇಹ ಛಿದ್ರಛಿದ್ರವಾಗಿ ಹೋಗಿದೆ. ಒಬ್ಬರ ದೇಹದ ಭಾಗಗಳು ಮಾಡಿನ ಮೇಲೆ ಕಾಣಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗಫೂರ್ ಅವರ ಮನೆಯ ಹಂಚು ಹಾರಿಹೋಗಿದ್ದು, ಸಮೀಪದ ಮನೆಗಳಲ್ಲೂ ಕಂಪನದ ಅನುಭವ ಉಂಟಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನೆಯಿಂದಾಗಿ ಸಮೀಪದ ಮನೆಗಳಿಗೂ ಹಾನಿಯಾಗಿದೆ. ಸುದ್ದಿ ಹರಡುತ್ತಿದ್ದಂತೆ ಸಾವಿರಾರು ಮಂದಿ ಕುತೂಹಲಿಗರು ಸ್ಥಳದಲ್ಲಿ ಜಮಾಯಿಸಿದರು.

ಘಟನಾ ಸ್ಥಳಕ್ಕೆ ಎಸ್ಪಿ ಭೂಷಣ್ ಜಿ. ಬೊರಸೆ, ಡಿವೈಎಸ್ಪಿ ರವೀಶ್ ಸಿ.ಆರ್., ಸಿಐ ಬಿ.ಕೆ.ಮಂಜಯ್ಯ, ವಿಟ್ಲ ಎಸ್. ಐ. ನಾಗರಾಜ್, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್.ಮಹಮ್ಮದ್, ತಹಶೀಲ್ದಾರ್ ಪುರಂದರ ಹೆಗ್ಡೆ, ಕಂದಾಯ ಇಲಾಖೆ ಸಿಬ್ಬಂದಿಗಳಾದ ದಿವಾಕರ, ಕರಿಬಸಪ್ಪ, ಪರೀಕ್ಷಿತ್, ಸದಾಶಿವ ಕೈಕಂಬ, ಶೀತಲ್, ಲಿಂಗಪ್ಪ ಮೊದಲಾದವರು ಭೇಟಿ ನೀಡಿದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.