ಕಲ್ಲಡ್ಕ

ಶ್ರೀರಾಮ ವಿದ್ಯಾಕೇಂದ್ರದಲ್ಲಿ ಕಿಷ್ಕಿಂಧಾ ಆಟಿಕಾವನ-ತೂಗುಸೇತುವೆ

ಮಕ್ಕಳ ಮಾನಸಿಕ, ಬೌದ್ಧಿಕ ವಿಕಸನಕ್ಕೆ ಪೂರಕವಾಗಿ ಶಾರೀರಿಕ ಚಟುವಟಿಕೆಗಳನ್ನು ಹಾಗೂ ಪರಿಸರದ ಬಗ್ಗೆ ಉತ್ತಮ ಭಾವನೆಗಳನ್ನು ಜಾಗೃತ ಮಾಡುವ ಹೊರಾಂಗಣ ಚಟುವಟಿಕೆಗಳು ಅವಶ್ಯಕವಾಗಿದ್ದು, ’ಕಿಷ್ಕಿಂಧಾಆಟಿಕಾವನ ಮಗುವಿನ ಸೃಜನಾತ್ಮಕ ಚಟುವಟಿಕೆಗಳಿಗೆ ಪೂರಕವಾಗಿ ನಿರ್ಮಿಸಲಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಪ್ರಾಥಮಿಕ ಶಾಲಾ ವಿಭಾಗದಲ್ಲಿ ನೂತನವಾಗಿ ನಿರ್ಮಿಸಲಾದ ಮಕ್ಕಳ ಆಟಿಕಾ ಉದ್ಯಾನವನದ ಉದ್ಘಾಟನಾ ಸಂದರ್ಭ ಹೇಳಿದರು.

ಆಟಿಕಾವನದಲ್ಲಿ ತೆರೆದಿಡಲಾದ ಕರಿಹಲಗೆ ಗೋಡೆಯಲ್ಲಿ ಮಗು ಯಾವಾಗ ಬೇಕಾದರೂ ಚಿತ್ರ ಮಾಡುವ        ಸೃಜನಶೀಲತೆಗೆ ಅವಕಾಶಕ್ಕಾಗಿ ವಿಕಸನದ ಭಿತ್ತಿ ಪತ್ರ ನಿರ್ಮಿಸಲಾಗಿದೆ. ವಿರಚನಕುಟೀರದಲ್ಲಿ ಮಣ್ಣಿನಲ್ಲಿ ಆಟವಾಡುವ ಆಸಕ್ತಿಗೆ ಪೂರಕವಾಗಿ, ಮೂರ್ತಿ ರಚನೆ, ಮಣ್ಣಿನ ಮಾದರಿಗಳನ್ನು ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಶಾರೀರಿಕ ವಿಕಸನಕ್ಕೆ ಬೇಕಾದ ಭಾವನಾತ್ಮಕ ಸಂಗತಿಗಳನ್ನು ಇಲ್ಲಿ ಅಳವಡಿಸಲಾಗಿದೆ. ನೇತ್ರಾವತಿ ಜಲಧಾರೆಯನ್ನು ನಿರ್ಮಿಸಿದ್ದು, ನೀರಿನ ಅವಶ್ಯಕತೆಯನ್ನು ತಿಳಿದುಕೊಳ್ಳುವ ಹಾಗೆ ಮಾಡಲಾಗಿದೆ. ತೂಗುಸೇತುವೆ ನಿರ್ಮಾಣ ವಿಶೇಷ ಆಕರ್ಷಣೆಯಾಗಿದ್ದು,     ಗಿರೀಶ್ ಭಾರದ್ವಾಜ್ ಮಾರ್ಗದರ್ಶನದಲ್ಲಿ ರೂಪಿಸಲಾಗಿದೆ ಎಂದು ವಿವರಿಸಿದರು.

ಹಲವು ಭಾವನಾತ್ಮಕ ಸಂಗತಿಗಳನ್ನು ಜೋಡಿಸಿ ಆಟಿಕವನವನ್ನು ನಿರ್ಮಾಣ ಮಾಡಲಾಗಿದೆ. ಮಗು ಎಲ್ಲಾ ಹಂತದಲ್ಲೂ ಬೆಳೆಯಬೇಕು. ಸಂತೋಷದಿಂದ ನಲಿನಲಿದು ಕಲಿಯಬೇಕು. ಆನಂದದ ಕಲಿಕೆಗೆ ಪೂರಕವಾಗುವಂತೆ ಎಳೆಯ ವಯಸ್ಸಿನ ಮಕ್ಕಳ ಮೆದುಳಿನ ಬೆಳವಣಿಗೆಗೆ ಪೂರಕವಾಗಿ ವಿವಿಧ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಮಗುವಿನ ಮನಸ್ಸನ್ನು ಅರಳಿಸುವ ಶಿಕ್ಷಣ ನೀಡುವುದು ಅವಶ್ಯವಾಗಿದೆ ಎಂದು ತಿಳಿಸಿದರು.

ಜಾಹೀರಾತು

ಶ್ರೀರಾಮ ವಿದ್ಯಾಕೇಂದ್ರದ ಆಟಿಕಾವನದಲ್ಲಿ ವಿಶೇಷವಾಗಿ ನಿರ್ಮಿಸಲಾದ ತೂಗುಸೇತುವೆಯನ್ನು ಪದ್ಮಶ್ರೀ ಪುರಸ್ಕೃತ ತೂಗುಸೇತುವೆಯ ಸರದಾರ ಗಿರೀಶ್ ಭಾರದ್ವಾಜ್ ಉದ್ಘಾಟಿಸಿದರು. ಮಕ್ಕಳ ಸೃಜನಶೀಲ ಚಟುವಟಿಕೆಗಳಿಗೆ ಅವಕಾಶ ನೀಡುವ ವಿಕಸನದ ಭಿತಿಯನ್ನು ಉದ್ಯಮಿ ರಾಜೇಂದ್ರ ಮೈಸೂರು ಚಿತ್ರ ಬಿಡಿಸುವ ಮೂಲಕ ಅನಾವರಣಗೊಳಿಸಿದರು. ಮಣ್ಣಿನ ಮಡಿಕೆ-ಮಾದರಿಗಳನ್ನು ತಯಾರಿಸುವ ವಿರಚನಕುಟೀರಕ್ಕೆ ಉದ್ಯಮಿ ವಸಂತ ಶೆಟ್ಟಿ ಚಾಲನೆ ನೀಡಿದರು. ನಾಮಫಲಕವನ್ನು ಲಯನ್ ಅರುಣ್ ಶೆಟ್ಟಿ ಅನಾವರಣಗೊಳಿಸಿದರು. ಬಟನ್ ಅದುಮುವ ಮೂಲಕ ಉದ್ಯಮಿ ಪ್ರಕಾಶ್ ಶೆಟ್ಟಿ ಬೆಂಗಳೂರು ನೇತ್ರಾವತಿ ಜಲಧಾರೆಯನ್ನು ಹರಿಸಿದರು. ಮಕ್ಕಳ ಆಟಕ್ಕಾಗಿ ನಿರ್ಮಿಸಲಾದ ವೈವಿಧ್ಯಮಯ ಉಯ್ಯಾಲೆಗಳಿಗೆ ವೀಣಾ ಶಶಿಧರ ಮಾರ್ಲ ಚಲಾವಣೆ ಮಾಡಿದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ಸುಧಾಕರ ಶೆಟ್ಟಿ, ವಿಜಯಕುಮಾರ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ರಮಾನಂದ ಶೆಟ್ಟಿ, ಡಾ| ಕಮಲಾ ಪ್ರಭಾಕರ ಭಟ್, ಚೆನ್ನಪ್ಪ ಕೋಟ್ಯಾನ್, ಆಡಳಿತ ಮಂಡಳಿ ಅಧ್ಯಕ್ಷ ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಮುಖ್ಯೋಪಾಧ್ಯಾಯ ರವಿರಾಜ್, ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಶಶಿಧರ ಮಾರ್ಲ, ಪ್ರಾಥಮಿಕ ಶಾಲಾಭಿವೃದ್ಧಿ ಸಮಿತಿ ಕಾರ್ಯದರ್ಶಿ ಜಯರಾಮ ರೈ, ಪ್ರೌಢಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಶ್ವನಾಥ ಪ್ರಭು ಮೊದಲಾದವರು ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.