ಕಲ್ಲಡ್ಕ

ಕಲ್ಲಡ್ಕದಲ್ಲಿ ಮನೆಗಳಿಗೆ ನುಗ್ಗಿದ ಕಳ್ಳರು, ಚಿನ್ನಾಭರಣ ಕಳವು


ಕಲ್ಲಡ್ಕದಲ್ಲಿ ಎರಡು ಮನೆಗಳಿಗೆ ಮಂಗಳವಾರ ರಾತ್ರಿ ಕಳ್ಳರ ತಂಡ ನುಗ್ಗಿದೆ.
ಕಲ್ಲಡ್ಕ ನಿವಾಸಿ ಕೆ.ಸಿ.ನಿಝಾರ್ ಎಂಬವರ ಮನೆಯ ಕಿಟಕಿ ಸರಳು ಮುರಿದು ಪ್ರವೇಶಿಸಿ, ಕಪಾಟಿನಲ್ಲಿಟ್ಟಿದ್ದ ಲಕ್ಷಾಂತರ ರೂ. ಚಿನ್ನಾಭರಣ ಕಳವು ಮಾಡಲಾಗಿದೆ.
ಕಲ್ಲಡ್ಕ ಪೇಟೆಯಲ್ಲಿ ನಿಝಾರ್ ಅವರ ಮನೆ ಇದೆ. ಪತ್ನಿ, ಮಗುವಿನೊಂದಿಗೆ ವಾಸವಿರುವ ನಿಝಾರ್, ಮಂಗಳವಾರ ಮೆಲ್ಕಾರ್‌ನಲ್ಲಿರುವ ಮಾವನ ಮನೆಗೆ ತೆರಳಿದ್ದರು. ಬುಧವಾರ ಬೆಳಗ್ಗೆ ಮನೆಗೆ ವಾಪಾಸ್ ಆದಾಗ ಈ ಕಳವು ಕೃತ್ಯ ಬೆಳಕಿಗೆ ಬಂದಿದೆ.
ಕಳವಾದ ಚಿನ್ನಾಭರಣದ ಮೌಲ್ಯ ಸುಮಾರು ೨.೨೫ ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಮನೆಯೊಳಗೆ ನುಗ್ಗಿದ ಕಳ್ಳರು ಬೆಡ್‌ರೂಂನಲ್ಲಿದ್ದ ಕಪಾಟಿನ ಬಾಗಿಲನ್ನು ಒಡೆದು ಜಾಲಾಡಿದ್ದು ಈ ಸಂದರ್ಭ ಕಪಾಟಿನಲ್ಲಿರಿಸಲಾಗಿದ್ದ ೧೨ ಪವನ್ ಚಿನ್ನಾಭರಣವನ್ನು ದೋಚಿದ್ದು ಕಂಡುಬಂತು. ನಿಝಾರ್ ಚಲನವಲನಗಳ ಬಗ್ಗೆ ಮಾಹಿತಿ ಇದ್ದವರೇ ಈ ಕೃತ್ಯ ನಡೆಸಿರುವ ಸಂಶಯ ವ್ಯಕ್ತವಾಗಿದೆ.


ಇನ್ನೊಂದು ಪ್ರಕರಣ:
ಮಂಗಳವಾರ ರಾತ್ರಿ ಕಲ್ಲಡ್ಕ ಮಸೀದಿ ಹಿಂಬದಿಯ ಇನ್ನೊಂದು ಮನೆಗೂ ಕಳ್ಳರು ನುಗ್ಗಿರುವ ಘಟನೆ ನಡೆದಿದೆ. ಮನೆಯ ಹಿಂಭಾಗಿಲನ್ನು ಒಡೆದು ಒಳ ನುಗ್ಗಿರುವ ಕಳ್ಳರು ಚಿನ್ನಾಭರಣಕ್ಕಾಗಿ ಕಪಾಟನ್ನು ಜಾಲಾಡಿದ್ದಾರೆ. ಆದರೆ ಸಿಗದಿರುವುದರಿಂದ ಕಳ್ಳರು ಬರೀ ಕೈಯಲ್ಲಿ ಹಿಂತಿರುಗಿದ್ದಾರೆ. ಮನೆಯೊಳಗೆ ರಕ್ತದ ಕಲೆಗಳು ಪತ್ತೆಯಾಗಿದ್ದು ಬಾಗಿಲು ಒಡೆಯುವ ಸಂದರ್ಭದಲ್ಲಿ ಕಳ್ಳರ ಕೈಗೆ ಗಾಯವಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ಈ ಎರಡೂ ಕೃತ್ಯಗಳನ್ನು ಒಂದೇ ತಂಡ ನಡೆಸಿರುವ ಅನುಮಾನವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ಡಾ. ರವೀಶ್ ಸಿ.ಆರ್., ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಎಸ್ಸೈ ಗಂಗಾಧರಪ್ಪ ಹಾಗೂ ಸಿಬ್ಬಂದಿ, ಶ್ವಾನ ದಳ, ಬೆರಳಚ್ಚು ತಜ್ಞರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದಲ್ಲಿ ದೂರು ದಾಖಲಾಗಿದೆ.

ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.