ಬಂಟ್ವಾಳ

ದೇವರಾಜ ಅರಸು ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ

ಇಬ್ಬರು ಹಿರಿಯ ರಾಜಕೀಯ ಮುಖಂಡರು, ಮತ್ತೊಬ್ಬ ಪತ್ರಿಕೋದ್ಯಮ ಸಾಧಕ. ಮೂವರೂ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತರು. ವಿಶೇಷವೆಂದರೆ ದೇವರಾಜ ಅರಸು ನಿಕಟವರ್ತಿಯಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಸುಧಾರಣೆಗೆ ನಾಂದಿ ಹಾಡಿದವರಲ್ಲಿ ಅಗ್ರಗಣ್ಯರು ಈ ಮೂವರಲ್ಲಿ ಒಬ್ಬರು.

ಹೀಗೆ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ನೆನಪಿನಲ್ಲಿ ಕೊಡುವ ಪ್ರಶಸ್ತಿ ಪುರಸ್ಕೃತ ಮೂವರು ದಕ್ಷಿಣ ಕನ್ನಡ ಜಿಲ್ಲೆಯ ಮಹನೀಯರನ್ನು ಸನ್ಮಾನಿಸುವ ಕಾರ್ಯಕ್ರಮ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಂಗಳವಾರ ನಡೆಯಿತು.

ಜಾಹೀರಾತು

ಮಾಜಿ ಸಚಿವರಾದ ಬಿ.ಸುಬ್ಬಯ್ಯ ಶೆಟ್ಟಿ ಹಾಗೂ ಬಿ.ಎ.ಮೊಯ್ದೀನ್, ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರನ್ನು ಬಂಟ್ವಾಳ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಹಾಲ್ ನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಇದೇ ಸಂದರ್ಭ ಸಂತ ಪದವಿ ಪಡೆದ ಮದರ್ ಥೆರೇಸಾ ಗುಣಗಾನ ಹಾಗೂ ಸ್ಮರಣೆಯೂ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೇಂದ್ರ ಮಾಜಿ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡೀಸ್, ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ 20 ಅಂಶಗಳ ಕಾರ್ಯಕ್ರಮ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಮ್ಮ ರಾಜ್ಯದಲ್ಲಿ ಮಾತ್ರ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಕ್ಕೆ ಬಂತು ಎಂದರು.

ಹಿರಿಯರಾದ ಸುಬ್ಬಯ್ಯ ಶೆಟ್ಟಿ ಹಾಗೂ ಬಿ.ಎ.ಮೊಯ್ದಿನ್ ಅವರ ಮಾರ್ಗದರ್ಶನದಲ್ಲಿ ತಾತ್ವಿಕ ನೆಲೆಗಟ್ಟಿನ ಮೂಲಕ ಹೋರಾಟ ನಡೆಸಿ ಭೂಸುಧಾರಣೆಯನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಆಸ್ಕರ್ ಹೇಳಿದರು.

ಸನ್ಮಾನಿತರ ಬಗ್ಗೆ ಅಭಿನಂದನಾ ಭಾಷಣ ಮಾಡಿದ ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕ ಡಾ. ಸದಾನಂದ ಪೆರ್ಲ, ರಾಜಕೀಯದಲ್ಲಿ ಮಾನವೀಯ ಧರ್ಮವನ್ನು ಪ್ರತಿಪಾದಿಸಿದ ಏಕೈಕ ರಾಜಕಾರಣಿ ಬಿ.ಸುಬ್ಬಯ್ಯ ಶೆಟ್ಟಿ ಯುವ ಪೀಳಿಗೆಗೆ ಆದರ್ಶ, ಇಂದಿಗೂ ಸರಳ ಜೀವನವನ್ನು ನಡೆಸುತ್ತಿರುವ ಶೆಟ್ಟರ ಬದುಕು ಪ್ರೇರಣೆಯಾಗಲಿ ಎಂದು ಆಶಿಸಿದರು.

ಮುಸ್ಲಿಮ್ ಲೇಖಕರ ಸಂಘದ ಉಪಾಧ್ಯಕ್ಷ ಮುಹಮ್ಮದ್ ಅಲಿ ಮಾತನಾಡಿ, ಮಾಜಿ ಸಚಿವ ಬಿ.ಎ.ಮೊಯ್ದಿನ್‌ ಅವರ ದೂರದೃಷ್ಟಿ ಹಾಗೂ ನಾಯಕತ್ವ ಗುಣವನ್ನು ಶ್ಲಾಘಿಸಿ, ಶಿಕ್ಷಣದಲ್ಲಿ ಮುಸ್ಲಿಂ ಸಮುದಾಯದವರು ಮುನ್ನಡೆಯಬೇಕು ಎಂಬ ಹಂಬಲ ಹೊಂದಿದ್ದ ರಾಜಕಾರಣಿ ಮೊಯ್ದೀನ್ ಎಂದರು.

ಸಾಹಿತಿ ಮತ್ತು ಸಂಶೋಧಕ ಮುದ್ದು ಮೂಡುಬೆಳ್ಳೆ ಮಾತನಾಡಿ, ಮೌಲ್ಯ ಮತ್ತು ನ್ಯಾಯಪರ ವಿಷಯಗಳ ಪ್ರತಿಪಾದಕ ದಿನೇಶ್ ಅಮೀನ್ ಮಟ್ಟು ಯುವ ಪತ್ರಕರ್ತರಿಗೆ ಮಾದರಿ ಎಂದು ಹೇಳಿದರು.

ವಿಧಾನ ಪರಿಷತ್‌ನ ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತನಾಡಿ, ಒಂದು ವಿಚಾರದ ಬಗ್ಗೆ ದೃಡವಾದ ನಿಲುವನ್ನು ತೆಗೆದುಕೊಳ್ಳುವವನೇ ನಿಜವಾದ ನಾಯಕ. ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಘಟನೆಗಳನ್ನು ನೆನೆಸುವ ನಿಟ್ಟಿನಲ್ಲಿ ರಾಜ್ಯದ ಪ್ರತೀ ಬ್ಲಾಕ್ ಮಟ್ಟದಲ್ಲೂ ಕಾಂಗ್ರೆಸ್ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಆ ಮೂಲಕ ದೇಶಕ್ಕಾಗಿ ಬಲಿದಾನಗೈದ ಹಿರಿಯ ಜೀವಿಗಳನ್ನು ಸ್ಮರಿಸಬೇಕು ಎಂದರು.

ಪುತ್ತೂರು ಸಂತ ಫಿಲೋಮಿನ ಕಾಲೇಜು ಸ್ನಾತಕೋತ್ತರ ಕೇಂದ್ರದ ಕ್ಯಾಂಪಸ್ ಡೈಯರೆಕ್ಟರ್ ಹಾಗೂ ಚೆಯರ್‌ಮೆನ್ ಡಾ. ಆಂಟೊನಿ ಪ್ರಕಾಶ್ ಮೊಂತೆರೋ ಸಂತ ಮದರ್ ತೆರೆಸಾ ಗುಣಗಾನ ಮಾಡಿ, ಬಡವರ ಸೇವೆ ಕೃತಿಯಿಂದ ಮಾಡಬೇಕೆ ಹೊರೆತು ಮಾತಿನಿಂದಲ್ಲ. ಅಪೂರ್ವ ಮಾನವೀಯತೆಯ ಸಂಕೇತವಾಗಿದ್ದ ಮದರ್ ತೆರೆಸಾ ಅವರನ್ನು ನೆನಪಿಸುವುದು ಅಭಿನಂದನೀಯ ಎಂದರು.

ಕರ್ನಾಟಕ ಸರಕಾರದ ಪ್ರತಿಷ್ಠಿತ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತರಾದ ಬಿ.ಸುಬ್ಬಯ್ಯ ಶೆಟ್ಟಿ, ಬಿ.ಎ.ಮೊಯ್ದಿನ್ ಹಾಗೂ ದಿನೇಶ್ ಅಮೀನ್ ಮಟ್ಟುರವರನ್ನು ಸನ್ಮಾನಿಸಲಾಯಿತು.

ರಾಜ್ಯ ಆಹಾರ ಸಚಿವ ಯು.ಟಿ.ಖಾದರ್, ವಿಧಾನ ಪರಿಷತ್ ಸರಕಾರದ ಮುಖ್ಯ ಸಚೇತಕ ಐವನ್ ಡಿಸೋಜಾ, ಶಾಸಕರಾದ ಜೆ.ಆರ್.ಲೋಬೋ, ಶಕುಂತಳಾ ಶೆಟ್ಟಿ, ಅಭಯಚಂದ್ರ ಜೈನ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ. ರಘು, ದ.ಕ. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಬಿ.ಎಂ.ಹನೀಫ್, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾಯಿಲಪ್ಪ ಸಾಲ್ಯಾನ್ , ಬ್ಲೋಸಂ ಆಸ್ಕರ್ ಫೆರ್ನಾಂಡೀಸ್ ವೇದಿಕೆಯಲ್ಲಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯರಾದ ಪದ್ಮಶೇಖರ ಜೈನ್, ಮಮತಾ ಗಟ್ಟಿ, ಮಂಜುಳಾ ಮಾಧವ ಮಾವೆ, ಎಂ.ಎಸ್.ಮಹಮ್ಮದ್, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಪಕ್ಷ ನಾಯಕರಾದ ಎ.ಸಿ.ಭಂಡಾರಿ, ಪಿಯುಸ್ ಎಲ್. ರೋಡ್ರಿಗಸ್ ಸಹಿತ ವಿವಿಧ ಬ್ಲಾಕ್ ಮಟ್ಟದ ನಾಯಕರು, ಪುರಸಭಾ ಸದಸ್ಯರು ಪಕ್ಷ ಕಾರ್ಯಕರ್ತರು ಈ ಸಂದರ್ಭ ಉಪಸ್ಥಿತರಿದ್ದರು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪ್ರಾಸ್ತಾವಿಕ ಮಾತನಾಡಿ, ಕಾರ್ಯಕ್ರಮ ಆಯೋಜನೆಯ ಪ್ರಸ್ತುತತೆ ಹಾಗೂ ಪ್ರಸಕ್ತ ಸನ್ನಿವೇಶದಲ್ಲಿ ದೇವರಾಜ ಅರಸು ಸಾಧನೆಗಳ ಮನವರಿಕೆ, ಹಿರಿಯರ ಸ್ಮರಣೆಯ ಅಗತ್ಯವನ್ನು ವಿವರಿಸಿದರು.

ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ಬಾಸ್ ಅಲಿ ವಂದಿಸಿದರು. ಶಿಕ್ಷಕ ರಾಮಚಂದ್ರರಾವ್, ಬಾಲಕೃಷ್ಣ ಆಳ್ವ, ರಾಜೀವ ಕಕ್ಕೆಪದವು ಕಾರ್ಯಕ್ರಮ ನಿರೂಪಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.