ವಿಟ್ಲ

ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿಉತ್ತಮ ಗುಣಮಟ್ಟದ ಶಿಕ್ಷಣ

ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ಖಾಸಗಿ ಶಾಲೆಗಳಿಗಿಂತ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಗಳು ನೀಡುತ್ತಿದೆ. ಸಾಧನೆಗೆ ಶಿಕ್ಷಣ ಪ್ರಮುಖ ಅಂಗವಾಗಿದ್ದು, ಸರ್ಕಾರಿ ಶಾಲೆಯೂ ಆತ್ಮಸ್ಥೈರ್ಯ ತುಂಬುತ್ತದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಅವರು ಶನಿವಾರ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿಯಲ್ಲಿ ಮಂಜೂರಾದ ಅನುದಾನದಿಂದ ನಿರ್ಮಾಣಗೊಂಡ ಕೇಪು ಗ್ರಾಮದ ಕಲ್ಲಂಗಳ ಸರ್ಕಾರಿ ಶಾಲೆಯ ನೂತನ ಕಟ್ಟಡದ ಉದ್ಘಾಟನಾ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶಾಲಾ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.
ಧಾರ್ಮಿಕ ಕೇಂದ್ರಗಳು ನಿರ್ಮಾಣವಾದರೆ ಅದು ಒಂದು ಧರ್ಮಕ್ಕೆ ಮಾತ್ರ ಸೀಮಿತವಾಗುತ್ತದೆ. ಆದರೆ ಒಂದು ಶಾಲೆ ನಿರ್ಮಾಣ ಮಾಡಿದರೆ ಒಂದು ಗ್ರಾಮವನ್ನು ನಿರ್ಮಿಸಿದಂತೆ. ಅದನ್ನು ಉಳಿಸಿ-ಬೆಳೆಸುವ ಜವಾಬ್ದಾರಿ ಇಲ್ಲಿಯ ಗ್ರಾಮಸ್ಥರ ಮೇಲಿದೆ. ಶಿಕ್ಷಣ ಕ್ಷೇತ್ರಕ್ಕೆ ದ.ಕ ಜಿಲ್ಲೆ ಅಭೂತಪೂರ್ವ ಕೊಡುಗೆ ನೀಡಿದೆ. ಇದರಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಶಿಕ್ಷಣ ಕಾಶಿ ಎಂದು ಕರೆಯಲಾಗುತ್ತಿದೆ. ಜಿಲ್ಲೆಗೆ ೬೫ ಶಾಲೆಗಳು ಮಂಜೂರಾಗಿದ್ದು, ಬಹುತೇಕ ಕಾಮಗಾರಿ ಮುಗಿದು ಉದ್ಘಾಟನೆಗೆ ಸಿದ್ಧವಾಗಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡುವ ಮೂಲಕ ಗ್ರಾಮೀಣ ಭಾಗದ ಮಕ್ಕಳಿಗೆ ವಿದ್ಯಾರ್ಜನೆ ಮಾಡಲು ಸಹಕಾರ ಮಾಡುತ್ತಿದೆ ಎಂದು ತಿಳಿಸಿದರು.
ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಅವರು ಪ್ರೀತಿ ವಿಶ್ವಾಸ, ಕಷ್ಟ-ಸುಖಗಳ ಜತೆಗೆ ಸೌಹಾರ್ದತೆ ಜೀವನ ಹಳ್ಳಿ ಶಾಲೆಗಳಲ್ಲಿ ಮಾತ್ರ ಸಿಗುತ್ತದೆ. ಇದು ಪೇಟೆ ಶಾಲೆಯಲ್ಲಿ ಸಿಗಲು ಸಾಧ್ಯವಿಲ್ಲ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಂಸ್ಕೃತಿ ಸಂಪ್ರದಾಯಗಳನ್ನು ಮೈಗೂಡಿಸಿಕೊಂಡು ಬೆಳೆಯುತ್ತಾರೆ. ಶಾಲೆಗಳನ್ನು ನೀಡುವ ಜವಾಬ್ದಾರಿ ಜನಪ್ರತಿನಿಧಿಗಳದ್ದು, ಅದನ್ನು ಉಳಿಸುವ ಜವಾಬ್ದಾರಿ ಹೆತ್ತವರ ಅಧ್ಯಾಪಕರ ಮೇಲಿದೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳಿಸುವ ಮನೋಧರ್ಮವಿದ್ದಾಗ ಸರ್ಕಾರಿ ಶಾಲೆಗಳನ್ನು ಉಳಿಸಬಹುದು. ಮಕ್ಕಳನ್ನು ಆಕರ್ಷಣೆ ಮಾಡುವ ತಂತ್ರಗಾರಿಕೆ ಹೆತ್ತವರಲ್ಲಿ ಹಾಗೂ ಅಧ್ಯಾಪಕರಲ್ಲಿದೆ ಎಂದು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಭಾಗವಹಿಸಿದ್ದರು.  ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಲಿಂಗಪ್ಪ ನಾಯ್ಕ, ಗೀತಾ ನೆಗಳಗುಳಿ, ಜಯ ಪಿ, ದೇವದಾಸ್ ರೈ, ಶ್ರೀನಿವಾಸ್ ರೈ ಕುಂಡಕೋಳಿ, ಬಾಲಚಂದ್ರ ಕಟ್ಟೆ, ಪ್ರಭಾಕರ ಶೆಟ್ಟಿ ದಂಬೆಕಾನ, ಸಂತೋಷ್ ಪುಣಚ, ಪುಷ್ಪರಾಜ್ ಶೆಟ್ಟಿ ಹಾಗೂ ಸಂಜೀವ ಉಕ್ಕುಡ ಅವರನ್ನು ಸನ್ಮಾನಿಸಲಾಯಿತು.
ಬಂಟ್ವಾಳ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆ ಚಂದ್ರಹಾಸ ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಎಂ.ಎಸ್ ಮಹಮ್ಮದ್ ಜಯಶ್ರೀ ಕೊಡಂದೂರು, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ ಬಂಗೇರ, ಕೇಪು ಗ್ರಾಮ ಪಂಚಾಯಿತಿ ಅಧ್ಯಕ್ಷ ತಾರಾನಾಥ ಆಳ್ವ, ಉಪಾಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ, ಗ್ರಾಮ ಪಂಚಾಯಿತಿ ಸದಸ್ಯರಾದ ನಿರಂಜನ, ರತ್ನಾ, ದಿವ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಮೊದಲಾದವರು ಉಪಸ್ಥಿತರಿದ್ದರು.
ಕೇಪು ಗ್ರಾಮ ಪಂಚಾಯಿತಿ ಸದಸ್ಯ, ಶಾಲಾ ಸಮಿತಿ ಕಾರ್ಯಾಧ್ಯಕ್ಷ ಅಬ್ದುಲ್ ಕರೀಂ ಕುದ್ದುಪದವು ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಮಾಲತಿ ಕೆ ವರದಿ ಮಂಡಿಸಿದರು. ಶಿಕ್ಷಕ ರಮೇಶ್ ಬಾಯಾರ್ ಸನ್ಮಾನಿತರ ಪಟ್ಟಿ ಓದಿದರು. ಶಿಕ್ಷಕ ರಮೇಶ್ ಬಿ ಬಹುಮಾನ ವಿಜೇತರ ಪಟ್ಟಿ ಓದಿದರು. ಶಿಕ್ಷಕ ಸುಬ್ರಹ್ಮಣ್ಯ ಭಟ್ ನಿರೂಪಿಸಿದರು.
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.