ಸ್ಥಳಕ್ಕೆ ಭೇಟಿ ನೀಡಿರುವ ಕುತೂಹಲಿಗರು.
ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ಇರಾಪದವು ಬಳಿ ಕೆಂಪು ಕಲ್ಲಿನ ಕೋರೆಯಲ್ಲಿ ಭಾನುವಾರ ಸಂಜೆ ಹೂತಿಟ್ಟ ಸ್ಥಿತಿಯಲ್ಲಿ ಮೃತದೇಹದ ತಲೆಬುರುಡೆಯೊಂದು ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.
www.bantwalnews.com report
ಸ್ಥಳಕ್ಕೆ ಭೇಟಿ ನೀಡಿರುವ ಕುತೂಹಲಿಗರು.
ಸ್ಥಳಕ್ಕೆ ಉನ್ನತ ಪೊಲೀಸ್ ಅಧಿಕಾರಿಗಳಾದ ಡಿವೈಎಸ್ಪಿ ರವೀಶ್ ಸಿ.ಆರ್, ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಗೌಡ ಹಾಗೂ ಸಿಬ್ಬಂದಿ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಈಗಾಗಲೇ ರಾತ್ರಿಯಾಗಿರುವುದರಿಂದ ಮೃತದೇಹವನ್ನು ಸೋಮವಾರ ಬೆಳಗ್ಗೆ ತಜ್ಞರ ಸಮ್ಮುಖ ತೆಗೆಯಲಾಗುವುದು ಬಳಿಕವಷ್ಟೇ ನಿಖರ ವಿಚಾರ ತಿಳಿಯಲು ಸಹಾಯಕವಾಗುವುದು ಎಂದು ಪೊಲೀಸರು www.bantwalnews.com ಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಇರಾ ಗ್ರಾಪಂ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಗ್ರಾಪಂ ಸದಸ್ಯರು ಭೇಟಿ ನೀಡಿದರು.
ಹೇಗೆ ಗೊತ್ತಾಯಿತು:
ಕಡಂತಬೆಟ್ಟು ಪ್ರದೇಶವು ಕೊಳ್ನಾಡು ಮತ್ತು ಇರಾ ಗ್ರಾಮದ ಗಡಿ ಪ್ರದೇಶವಾಗಿದ್ದು ದಟ್ಟ ಕಾಡಿನಿಂದ ಆವರಿಸಲ್ಪಟ್ಟಿದೆ.
ಸಂಜೆಯ ವೇಳೆಗೆ ಸ್ಥಳೀಯ ನಿವಾಸಿಯೊಬ್ಬರು ಗುಡ್ಡದಲ್ಲಿ ಆಡು ಮೇಯಿಸಲು ತೆರಳಿದ್ದ ಸಂದರ್ಭ ಇಲ್ಲಿನ ಕೆಂಪು ಕಲ್ಲಿನ ಕೋರೆಯಲ್ಲಿ ಹೂತ ಸ್ಥಿತಿಯಲ್ಲಿದ್ದ ಮೃತದೇಹವನ್ನು ನಾಯಿಗಳು ಎಳೆದು ತಿನ್ನುತ್ತಿರುವುದನ್ನು ಗಮನಿಸಿದರು. ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿದನ್ವಯ, ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು ಬಂಟ್ವಾಳ ಗ್ರಾಮಾಂತರ ಠಾಣೆ ಎಸ್ಸೈ ಎ.ಕೆ.ರಕ್ಷಿತ್ ಗೌಡ ಹಾಗೂ ಅವರ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನಾ ಕಾರ್ಯ ನಡೆಸಿದರು.
ಕೊಲೆ ಶಂಕೆ:
ಮೃತದೇಹ ಸಿಕ್ಕಿದ ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ವಿಧವಿಧದ ಸುದ್ದಿಗಳು ಹರಿದಾಡತೊಡಗಿತು. ಯಾವುದೋ ಮಹಿಳೆಯನ್ನು ಕರೆದುಕೊಂಡು ಬಂದು ಕೊಂದು ಹಾಕಲಾಗಿದೆ, ಇದು ಎರಡು ತಿಂಗಳ ಮೊದಲೇ ನಡೆದಿರುವ ಕೃತ್ಯ ಎಂಬಿತ್ಯಾದಿ ಅನುಮಾನಗಳುಳ್ಳ ಮೆಸೇಜ್ ಗಳು ಹರಿದಾಡತೊಡಗಿವೆ. ಆದರೆ ಯಾವುದೂ ಖಚಿತವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ನಾಳೆ ಬೆಳಗ್ಗೆಯಷ್ಟೇ ಶವ ಮೇಲಕ್ಕೆತ್ತಿದ ಬಳಿಕ ನಡೆಯುವ ಪ್ರಕ್ರಿಯೆ ಬಳಿಕ ಮುಂದಿನ ತೀರ್ಮಾನಕ್ಕೆ ಪೊಲೀಸರು ಬರಲಿದ್ದು, ಆಗಲಷ್ಟೇ ಶವ ಮಹಿಳೆಯದ್ದೋ, ಪುರುಷನದ್ದೋ, ಎಷ್ಟು ಸಮಯವಾಗಿದೆ ಎಂಬಿತ್ಯಾದಿ ಮಾಹಿತಿಗಳು ಹೊರಬೀಳಲು ಅನುಕೂಲವಾಗುತ್ತದೆ ಎಂದು ಪೊಲೀಸರು www.bantwalnews.com ಗೆ ತಿಳಿಸಿದ್ದಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…