ವಿಟ್ಲ

ನೆಕ್ಕರೆಕಾಡು ಶೂಟೌಟ್ ಗೆ ತಂದೆ, ಮಗನ ಕದನ ಕಾರಣವಾಯಿತೇ?

  • ಪುತ್ರನ ಮೇಲೆ ಎರಡು ಸುತ್ತು ಗುಂಡು ಹಾರಾಟ
  • ಕೃಷಿಕ ಇಂದ್ರಕುಮಾರ್ ಬಲಿಯಾದ ವ್ಯಕ್ತಿ, ಕಿರಿಯ ಪುತ್ರ ಚಂದ್ರಹಾಸನಿಗೆ ಗುಂಡೇಟು
  • ಬಳಿಕ ಇಂದ್ರಕುಮಾರ್ ಸಾವು, ತಾನೇ ಗುಂಡು ಹಾರಿಸಿ ಸಾವನ್ನಪ್ಪಿರುವ ಶಂಕೆ
  • ವಿಟ್ಲ ಪರಿಸರದಲ್ಲಿ ತಡರಾತ್ರಿ ಬೆಚ್ಚಿಬೀಳಿಸಿದ ಘಟನೆ

bantwalnews.com report

ಒಂದೆಡೆ ನೆಕ್ಕರೆಕಾಡು ನಿವಾಸಿ ಕೃಷಿಕ ಇಂದ್ರಕುಮಾರ್ (64) ರಕ್ತದ ಮಡುವಿನಲ್ಲಿ ಬಿದ್ದಿದ್ದಾರೆ. ಮತ್ತೊಂದೆಡೆ ಗುಂಡೇಟು ತಗಲಿದ ಪುತ್ರ ಚಂದ್ರಹಾಸ್ ಬಚಾವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಜಾಹೀರಾತು

ಇಂದ್ರಕುಮಾರ್ ಪುತ್ರನಿಗೆ ಗುಂಡು ಹಾರಿಸಿದ ಬಳಿಕ ಆತ ಸತ್ತಿರಬಹುದು ಎಂದು ಭಾವಿಸಿ ತಾನೇ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರು.

ಪೊಲೀಸ್ ತನಿಖೆಯಲ್ಲಿ ನಿಜವಾಗಿ ಏನಾಯಿತು ಎಂದು ಅಧಿಕೃತವಾಗಿ ತಿಳಿಯಬೇಕಾದರೂ, ಇಂದ್ರಕುಮಾರ್ ಗುಂಡು ಹಾರಾಟದಿಂದ ಸಾವನ್ನಪ್ಪಿದ ಘಟನೆ ವಿಟ್ಲ ಪರಿಸರದಲ್ಲಿ ಬೆಚ್ಚಿ ಬೀಳಿಸಿದೆ. ತಂದೆ ಮತ್ತು ಮಗನ ನಡುವಿನ ಜಗಳ ಗುಂಡು ಹಾರಾಟದಲ್ಲಿ ಸಾಯುವಲ್ಲೇ ಅಂತ್ಯವಾಗಿದೆ.

ಘಟನೆಯ ಕುರಿತು ಸಮಗ್ರ ತನಿಖೆ ನಡೆಸುತ್ತಿದ್ದೇವೆ ಎಂದು ಡಿವೈಎಸ್ಪಿ ರವೀಶ್ ಸಿ.ಆರ್. bantwalnews.com ಗೆ ಮಾಹಿತಿ ನೀಡಿದ್ದಾರೆ.

ಏನಾಯಿತು?

ವಿಟ್ಲ ಕಸಬಾ ಗ್ರಾಮದ ನೆಕ್ಕರೆಕಾಡಿನಲ್ಲಿ ನಡೆದ ಘಟನೆ ಇದು. ನೆಕ್ಕರೆಕಾಡು ನಿವಾಸಿ ಕೃಷಿಕ ಇಂದ್ರಕುಮಾರ್ (64) ಗುಂಡಿಗೆ ಬಲಿಯಾದ ವ್ಯಕ್ತಿಯಾಗಿದ್ದಾನೆ. ಸುಮಾರು 20 ವರ್ಷದಿಂದ ಕಿರಿಯ ಪುತ್ರನ ಜೊತೆ ಈತ ಜಗಳವಾರಂಭಿಸಿದ್ದು, ಕ್ಷುಲ್ಲಕ ಕಾರಣಕ್ಕೆ ವರ್ಷದಿಂದ ಪುತ್ರನಿಗೆ ಬಂದೂಕು ತೋರಿಸಿ ಮೂಲಕ ಕೊಲೆ ಮಾಡುವುದಾಗಿ ಹೆದರಿಸುತ್ತಿದ್ದರು ಎಂಬ ಕುರಿತು ವಿಟ್ಲ ಠಾಣೆಯಲ್ಲಿ ತಂದೆಯ ವಿರುದ್ದ ಚಂದ್ರಹಾಸ ದೂರು ದಾಖಲಿಸಿದ್ದರು. ಕೆಲವು ದಿನಗಳ ಹಿಂದೆ ಮಾತುಕತೆ ನಡೆದು ಪ್ರಕರಣ ಬಗೆಹರಿದಿತ್ತು.

ಶುಕ್ರವಾರ ರಾತ್ರಿ ಸುಮಾರು 9.30ರ ಬಳಿಕ ಈ ಘಟನೆ ನಡೆದಿದೆ.  ಚಂದ್ರಹಾಸ ವೃತ್ತಿಯಲ್ಲಿ ಜೀಪು ಚಾಲನೆಯನ್ನೂ ಮಾಡುತ್ತಾರೆ. ಎಂದಿನಂತೆ 9.30 ರ ಸುಮಾರಿಗೆ ಮನೆಗೆ ಆಗಮಿಸಿದ್ದು, ತಾಯಿಯ ಜತೆಗೆ ಊಟಕ್ಕೆ ಕುಳಿತಿದ್ದಾರೆ. ಈ ಸಂದರ್ಭ ಬಂದೂಕು ಶಬ್ದ ಕಿವಿಗೆ ಕೇಳಿಸಿದೆ. ಕೂಡಲೇ ಅವರು ಅರ್ಧದಲ್ಲೇ ಊಟದಿಂದ ಎದ್ದಿದ್ದಾರೆನ್ನಲಾಗಿದೆ. ಬಳಿಕ ಮನೆಯ ಹೊರಭಾಗದಲ್ಲಿರುವ ಸ್ನಾನದ ಮನೆಯಿಂದ ಸ್ನಾನ ಮುಗಿಸಿ ಮನೆಯ ಮುಂಭಾಗಕ್ಕೆ ಬರುತ್ತಿದ್ದಂತೆ ಚಂದ್ರಹಾಸ್ ಭುಜದಲ್ಲಿದ್ದ ಬಟ್ಟೆ ಜಾರಿದೆ ಇದನ್ನು ಹೆಕ್ಕಲೆಂದು ನೆಲಕ್ಕೆ ಮುಖ ಮಾಡುತ್ತಿದ್ದಂತೆ ಮೊದಲ ಗುಡ್ಡು ಮನೆಯೊಳಗಿಂದ ಹಾರಿದೆ. ಇದರಿಂದ ಕುತ್ತಿಗೆಯ ಭಾಗಕ್ಕೆ ಸ್ವಲ್ಪ ಗಾಯವಾಗಿದ್ದು, ಅಲ್ಲಿಂದ ಬರ್ಮುಡಾ ಚಡ್ಡಿಯ ಹಾಗೂ ಬೈರಾಸ್ ಹಿಡಿದು ಓಟಕ್ಕೆ ನಿಂತಿದ್ದಾರೆ. ಆಗ ಬಂದ ಇಂದ್ರಕುಮಾರ್ ಗೇಟಿನವರೆಗೆ ಮಗನನ್ನು ಓಡಿಸಿದ್ದಾರೆ. ಪಕ್ಕದ ಮನೆಯ ಗೇಟ್ ತೆರೆಯುವಂತೆ ಕೇಳುತ್ತಿದ್ದ ಪುತ್ರನ ಮೇಲೆ ಮತ್ತೊಂದು ಸುತ್ತಿನ ಗುಂಡು ಹಾರಟ ನಡೆದಿದೆ. ಇದರಿಂದ ಚಂದ್ರಹಾಸ್ ಬೆನ್ನಿಗೆ ಸಣ್ಣಪುಟ್ಟ ಗಾಯವಾಗಿದೆ. ಅದಾಗಲೇ ವಿಟ್ಲ ಪೊಲೀಸರಿಗೆ ಮಾಹಿತಿ ಲಭಿಸಿ ಅವರು ಅತ್ತಕಡೆ ಧಾವಿಸಿದ್ದಾರೆ. ರಸ್ತೆಯಲ್ಲಿ ಓಡಿ ಬರುತ್ತಿದ್ದ ಚಂದ್ರಹಾಸನನ್ನು ಜೀಪಲ್ಲಿ ಕುಳ್ಳಿರಿಸಿ, ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಲಾಯಿತು. ಇದೇ ವೇಳೆ ಮನೆಯತ್ತ ತೆರಳಿದ ಪೊಲೀಸರಿಗೆ ಮನೆಯ ಮೆಟ್ಟಲಲ್ಲಿ ಇಂದ್ರಕುಮಾರ್ ನೆತ್ತರ ಮಡಿಲಲ್ಲಿ ಬಿದ್ದಿರುವುದು ಕಂಡಿದೆ. ತಲೆ ಹಾಗೂ ಮುಖದ ಭಾಗ ಛಿದ್ರವಾಗಿತ್ತು. ಪುತ್ರನ ಮೇಲೆ ಹಾರಿಸಿದ ಗುಂಡಿಗೆ ಆತ ಬಲಿಯಾಗಿರಬಹುದೆಂಬ ಊಹೆಯ ಮೇರೆಗೆ ತಾನೂ ಗುಂಡು ಹಾರಿಸಿಕೊಂಡು ಸಾವನ್ನಪ್ಪಿರುವುದಾಗಿ ಮೇಲ್ನೋಟಕ್ಕೆ ಕಂಡುಬಂದಿದೆ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ ಬೊರಸೆ, ಬಂಟ್ವಾಳ ಉಪ ವಿಭಾಗ ಸಹಾಯಕ ಅಧೀಕ್ಷಕ ರವೀಶ್, ವೃತ್ತ ನಿರೀಕ್ಷಕ ಮಂಜಯ್ಯ, ಉಪನಿರೀಕ್ಷಕ ನಾಗರಾಜ್ ಮತ್ತು ಸಿಬ್ಬಂದಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದರು. ಬೆರಳಚ್ಚು ತಜ್ಞರು ಆಗಮಿಸಿ ಬಂದೂಕನ್ನು ವಶಕ್ಕೆ ಪಡೆದುಕೊಂಡರು. ದೇರಳಕಟ್ಟೆ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥ ಮಹಾಬಲ ಶೆಟ್ಟಿ ಆಗಮಿಸಿ ದೇಹದ ಪರಿಶೀಲನೆ ನಡೆಸಿದರು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.