ಬಂಟ್ವಾಳ

ಬಂಟ್ವಾಳ ಕೃಷಿ ಉತ್ಸವಕ್ಕೆ ಸಂಭ್ರಮದ ತೆರೆ

ಬಿ.ಸಿ.ರೋಡಿನ ಗಾದಪಡ್ಪು ಮೈದಾನದಲ್ಲಿ ಎರಡು ದಿನಗಳ ಕಾಲ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ನಡೆದ ಕೃಷಿ ಉತ್ಸವಕ್ಕೆ ಗುರುವಾರ ಸಂಜೆ ಸಂಭ್ರಮದ ತೆರೆ ಬಿದ್ದಿದೆ.

ಬುಧವಾರ ಬೆಳಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಂದ ಚಾಲನೆಗೊಂಡಿದ್ದ ಕೃಷಿ ಉತ್ಸವದಲ್ಲಿ ಎರಡು ದಿನಗಳ ಕಾಲ ಕೃಷಿಕರಿಗೆ ಸಂಬಂಧಿಸಿದ ಒಟ್ಟು ಐದು ವಿಚಾರ ಗೋಷ್ಠಿಗಳು ನಡೆದಿದ್ದು ಇದರಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ನಡೆಯಿತು. ಪ್ರಮುಖವಾಗಿ ಜೀವ ಜಲ ಸಂರಕ್ಷಣೆ, ಭತ್ತ ಬೇಸಾಯದಲ್ಲಿ ಯಾಂತ್ರೀಕತೆ, ವ್ಯಸನ ಮುಕ್ತ ಕುಟುಂಬ, ಸಮಗ್ರ ತೋಟಗಾರಿಕಾ ಬೆಳೆಗಳು ಹಾಗೂ ಲಾಭದಾಯಕ ಹೈನೋಧ್ಯಮದ ಕುರಿತು ವಿಚಾರ ಗೋಷ್ಠಿಗಳು ನಡೆಯಿತು.

ಜಾಹೀರಾತು

ಸಂಜೆಯ ವೇಳೆಗೆ ಎರಡು ದಿನವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆಯಿತು.

ಗುರುವಾರ ಸಂಜೆ ಕೃಷಿ ಉತ್ಸವ ಸಮಿತಿಯ ಅಧ್ಯಕ್ಷ ರೊನಾಲ್ಡ್ ಡಿಸೋಜ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ನಿರ್ವಾಹಕ ನಿರ್ದೇಶಕರಾದ ಡಾ. ಎಲ್.ಎಚ್.ಮಂಜುನಾಥ್ ಅವರು ಸಮಾರೋಪ ಭಾಷಣಗೈದು, ಎರಡು ದಿನಗಳ ಈ ಕೃಷಿ ಉತ್ಸವವು ಜಿಲ್ಲೆಯಲ್ಲೇ ಗಮನ ಸೆಳೆಯುವ ಮೂಲಕ ಯಶಸ್ವಿಯಾಗಿ ನಡೆದಿದೆ. ಇದಕ್ಕೆ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು ಎಂದರು.

ಕೃಷಿಕರು ಹಿಂದಿನ ಪರಂಪರೆಯ ಜೊತೆಗೆ ಆಧುನಿಕತೆಯನ್ನು ಬೆಸೆದಾಗ ಕೃಷಿಯಲ್ಲಿ ಲಾಭ ಪಡೆಯಲು ಸಾಧ್ಯವಾಗುದು ಎಂದ ಅವರು, ಮಕ್ಕಳಿಗೆ ಎಳೆ ಪ್ರಾಯದಲ್ಲೇ ಹೆತ್ತವರು ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವನ್ನು ಮಾಡಬೇಕು. ತನ್ಮೂಲಕ ಕೃಷಿಯನ್ನು ಉಳಿಸುವ ಕಾರ್ಯವಾಗಬೇಕು ಎಂದರು.

ಅತಿಥಿಯಾಗಿ ಭಾಗವಹಿಸಿದ ಬಂಟ್ವಾಳ ತಹಶೀಲ್ದಾರ್ ಪುರದಂರ ಹೆಗ್ಡೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕೃಷಿಕರಿಗೆ ಕೃಷಿ ಕುರಿತಾದ ತರಬೇತಿಯನ್ನು ನೀಡುವುದರ ಜೊತೆಗೆ ಸ್ವಾಭಿಮಾನಿ ಜೀವನ ನಡೆಸುವಂತೆ ಮಾಡಿದೆ ಎಂದರು.

ಜನಜಾಗೃತಿ ವೇದಿಕೆಯ ಅಧ್ಯಕ್ಷ ಪ್ರಕಾಶ್ ಕಾರಂತ್, ಉದ್ಯಮಿ ಸೇಸಪ್ಪ ಕೋಟ್ಯಾನ್, ನರಿಕೊಂಬು ಸತ್ಯಶ್ರೀ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ನಿತ್ಯಾನಂದ ಸಪಲ್ಯ, ತಾಲೂಕು ಪ್ರಾ.ಬಂ.ಸ್ವ.ಸ.ಸಂ.ಕೆ.ಒಕ್ಕೂಟದ ಅಧ್ಯಕ್ಷ ಸದಾನಂದ ಗೌಡ, ತಾಲೂಕು ಯೋಜನಾಧಿಕಾರಿ ಸುನಿತಾ ನಾಯ್ಕ್ ಉಪಸ್ಥಿತರಿದ್ದರು.

ಎರಡು ದಿನಗಳ ಕೃಷಿ ಉತ್ಸವದಲ್ಲಿ ನಿರೀಕ್ಷೆಗೂ ಮೀರಿದ ಜನಸಂದಣಿ ನೆರೆದಿತ್ತು. ಬಿ.ಸಿ.ರೋಡ್ – ಮಿಲ್ಲಾಪುರ ಹೆದ್ದಾರಿಯ ಪಕ್ಕದಲ್ಲೇ ಗಾಣದಪಡ್ಪುವಿನ ವಿಶಾಲವಾದ ಮೈದಾನದಲ್ಲಿ ಕೃಷಿ ಉತ್ಸವ ನಡೆದಿದ್ದರೂ ಯಾವುದೇ ಸಂಚಾರಕ್ಕಾಗಲೀ, ಪಾರ್ಕಿಂಗ್ ವ್ಯವಸ್ಥೆಗೆ ಅಡಚಣೆ ಉಂಟಾಗದೆ ಸ್ವಸಹಾಯ ಸಂಘದ ಕಾರ್ಯಕರ್ತರೆ ಎಲ್ಲವನ್ನು ನಿಭಾಯಿಸಿ ಮೆಚ್ಚುಗೆಗೆ ಪಾತ್ರರಾದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.