ಬಂಟ್ವಾಳ

ಯುವತಿಯ ಕೊಂದು ನೇಣಿಗೆ ಶರಣಾದ ಯುವಕ

www.bantwalnews.com report

ಬಂಟ್ವಾಳ ತಾಲೂಕಿನ ಕೊಯ್ಲದ ಪಾಂಡವರಗುಹೆ ಕೆಸಿಡಿಸಿ ಗೇರು ತೋಟದಲ್ಲಿ ಮಂಗಳವಾರ ಮಧ್ಯಾಹ್ನದ ಬಳಿಕ ಯುವಕನೊಬ್ಬ ಯುವತಿಯನ್ನು ಮಾರಕಾಯುಧದಿಂದ ಇರಿದು ಹತ್ಯೆ ಮಾಡಿ, ತಾನೂ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಪ್ರೇಮಿಗಳಾಗಿದ್ದ ಇಬ್ಬರ ನಡುವೆ ಉಂಟಾದ ಯಾವುದೋ ವೈಮನಸ್ಸು ಈ ಘಟನೆಗೆ ಕಾರಣ ಎನ್ನಲಾಗಿದೆ. ರಾಯಿ ಗ್ರಾಮದ ಕೊಯ್ಲ ಕುಡುಮನಿ ನಿವಾಸಿ ಸುಜಿತ್ (28) ತಾನು ಪ್ರೀತಿಸುತ್ತಿದ್ದ ಯುವತಿ ಬಂಟ್ವಾಳ ತಾಲೂಕಿನ ಕುದನಗುಡ್ಡೆ ಬಿ.ಕಸಬಾ ಗ್ರಾಮದ ನಿವಾಸಿ ದಿವ್ಯಾ(23) ಎಂಬಾಕೆಯನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಯುವಕ. ಇಬ್ಬರೂ ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಬಳಿಕ ಇಬ್ಬರ ನಡುವೆ ವೈಮನಸ್ಸು ಉಂಟಾಗಿ, ಸುಜಿತ್ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಾಹೀರಾತು

ಮಂಗಳೂರಿನಲ್ಲಿ ಸೆಂಟರಿಂಗ್ ಕೆಲಸ ಮಾಡುತ್ತಿದ್ದ ಸುಜಿತ್, ಮಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ದಿವ್ಯಾಳೊಂದಿಗೆ ಸ್ನೇಹದಿಂದಿದ್ದ. ಸೋಮವಾರ ತನ್ನ ಅಜ್ಜಿ ಮನೆಗೆ ಬಂದಿದ್ದ ಯುವಕ, ಮಂಗಳವಾರ ಬೆಳಗ್ಗಿನಿಂದ ನಾಪತ್ತೆಯಾಗಿದ್ದ. ಯುವತಿಯೂ ಬೆಳಗ್ಗೆ ಮನೆ ಬಿಟ್ಟವಳು ಮರಳಿರಲಿಲ್ಲ. ಇದೇ ಸಂದರ್ಭ ಯುವಕ ತನ್ನ ಸ್ನೇಹಿತರಿಗೆ ನೀಡಿದ ಸಂದೇಶದಲ್ಲಿ ತಾನು ಸಾಯುವ ಸುಳಿವು ನೀಡಿದ್ದ. ಅದರಂತೆ ಈತನ ಹುಡುಕಾಟ ನಡೆಸಲಾಯಿತು. ಗೇರು ತೋಟದ ಬಳಿ ದ್ವಿಚಕ್ರ ವಾಹನವನ್ನು ನೋಡಿ ಹುಡುಕಾಡಿದಾಗ ಯುವತಿಯ ದೇಹದ ಕೆಲ ಭಾಗಗಳಲ್ಲಿ ಇರಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಅನತಿ ದೂರದಲ್ಲೇ ಚೂರಿ ಬಿದ್ದಿತ್ತು. ಅಲ್ಲೇ ಸನಿಹ ಯುವಕನ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಕಂಡುಬಂದಿದೆ.

ಪ್ರೇಮವೈಫಲ್ಯ ಕಾರಣವೇ?

ಇಬ್ಬರೂ ಪ್ರೇಮಿಗಳಾಗಿದ್ದರೂ ಹತ್ಯೆ ಹಾಗೂ ಆತ್ಮಹತ್ಯೆಗೆ ಏನು ಕಾರಣ ಎಂಬುದಕ್ಕೆ ನಿಖರ ಕಾರಣ ಇನ್ನೂ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ. ಆದರೆ ಮೇಲ್ನೋಟಕ್ಕೆ ಇದೊಂದು ಪ್ರೇಮವೈಫಲ್ಯದ ಘಟನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸುಜಿತ್ ಹಾಗೂ ದಿವ್ಯಾ ಇಬ್ಬರೂ ಬಡ ಕುಟುಂಬದವರಾಗಿದ್ದು, ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದರು. ದಿವ್ಯಾ ಮನೆಮಂದಿಗೆಲ್ಲ ಆಧಾರವಾಗಿದ್ದಳು.

ಬಂಟ್ವಾಳ ಗ್ರಾಮಾಂತರ ಪೊಲೀಸ್ ಎಸ್. ಐ. ರಕ್ಷಿತ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ತನಿಖೆ ಕೈಗೊಂಡಿದ್ದಾರೆ. ಡಿವೈಎಸ್ಪಿ ರವೀಶ್ ಸಿ.ಆರ್, ಸರ್ಕಲ್ ಇನ್ಸ್ ಪೆಕ್ಟರ್ ಮಂಜಯ್ಯ ಮಾರ್ಗದರ್ಶನದಲ್ಲಿ ಎಸ್ಪಿ ಭೂಷಣ್ ಜಿ.ಬೊರಸೆ ನಿರ್ದೇಶನದಂತೆ ಪೊಲೀಸರು ಮಹಜರು ನಡೆಸಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.