ಬಂಟ್ವಾಳ

ಬಂಟ್ವಾಳ ರಸ್ತೆ ಅಗಲೀಕರಣ ಸಂದರ್ಭ ರಾಜಕೀಯ ಬೇಡ

  • ಅಧಿಕಾರಿಗಳಿಗೆ ಸಂಸದ ನಳಿನ್ ಕುಮಾರ್ ಕಟೀಲ್ ಕ್ಲಾಸ್
  • ಬೈಪಾಸ್ ಜಂಕ್ಷನ್ ರಸ್ತೆ ಸರ್ವೇ ಸಂದರ್ಭ ತೀವ್ರ ವಿರೋಧ

ರಾಷ್ಟ್ರೀಯ ಹೆದ್ದಾರಿ 234 ಅಗಲೀಕರಣ ಪ್ರಕ್ರಿಯೆ ಸಂದರ್ಭ ತಾರತಮ್ಯ ಮಾಡಬೇಡಿ. ಬಿ.ಸಿ.ರೋಡ್ ವೃತ್ತದಿಂದಲೇ ಆರಂಭಿಸಿ ಬಳಿಕ ಬಂಟ್ವಾಳ ಬೈಪಾಸ್ ಕಡೆಗೆ ಬನ್ನಿ, ರಾಜಕಾರಣ ಮಾಡಲು ನಾವಿದ್ದೇವೆ, ಅಧಿಕಾರಿಗಳು ರಾಜಕಾರಣ ಮಾಡುವುದು ಬೇಡ.

ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅವರನ್ನು ಹೀಗೆಂದು ತೀವ್ರ ತರಾಟೆಗೆ ತೆಗೆದುಕೊಂಡವರು ಸಂಸದ ನಳಿನ್ ಕುಮಾರ್ ಕಟೀಲ್.

ಜಾಹೀರಾತು

ಬುಧವಾರ ಬೆಳಗ್ಗೆ ಬಂಟ್ವಾಳ ಬೈಪಾಸ್ ಜಂಕ್ಷನ್ ನಲ್ಲಿ ತಹಶೀಲ್ದಾರ್, ಮುಖ್ಯಾಧಿಕಾರಿ ಸುಧಾಕರ್, ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್, ಲೋಕೋಪಯೋಗಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಉಮೇಶ್ ಭಟ್, ಸರ್ವೇಯರುಗಳ ಸಹಿತ ಅಧಿಕಾರಿಗಳ ದಂಡು ಸರ್ವೇ ಕಾರ್ಯಕ್ಕೆ ಮುಂದಾದರು.

ಇದೇ ಸಂದರ್ಭ ಈ ದಾರಿಯಾಗಿ ತೆರಳುತ್ತಿದ್ದ ಸಂಸದ ನಳಿನ್ ಕುಮಾರ್ ಕಟೀಲ್, ಬೈಪಾಸ್ ಜಂಕ್ಷನ್ ನಲ್ಲಿ ಜಮಾಯಿಸಿದ ಜನರನ್ನು ಕಂಡು ನಿಲ್ಲಿಸಿ ಸ್ಥಳದಲ್ಲಿದ್ದ ಪುರಸಭಾ ಸದಸ್ಯರಾದ ಗೋವಿಂದ ಪ್ರಭು, ದೇವದಾಸ ಶೆಟ್ಟಿ, ಗುತ್ತಿಗೆದಾರ ಉದಯ ಕುಮಾರ್ ಜೊತೆ ಮಾಹಿತಿ ಪಡೆದ ಅವರು ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖಾಧಿಕಾರಿಗಳನ್ನು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಈಗಾಗಲೇ ಸೂಚಿಸಲಾದ ಬಿ.ಸಿ.ರೋಡಿನ ರಸ್ತೆ ಅತಿಕ್ರಮಣವನ್ನು ಮೊದಲಿಗೆ ತೆರವುಗೊಳಿಸಿ, ಹೇಳಿದ ಕೆಲಸವನ್ನು ಮೊದಲು ಮಾಡಿ. ಆನಂತರ ಇಲ್ಲಿಗೆ ಬನ್ನಿ ಎಂದು ಗುಡುಗಿದರು.

ನಡೆದದ್ದೇನು:

 ಗುತ್ತಿಗೆದಾರ ಉದಯ ಕುಮಾರ್ ಅವರ ನಿವಾಸದ ಬಳಿ ಸರ್ವೇಗೆ ಮುಂದಾದಾಗ ಪುರಸಭಾ ಸದಸ್ಯರಾದ ಗೋವಿಂದ ಪ್ರಭು, ದೇವದಾಸ ಶೆಟ್ಟಿ ಹಾಗೂ ಉದಯ ಕುಮಾರ್ ಸಹಿತ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸದಸ್ಯರು, ರಸ್ತೆ ಅಭಿವೃದ್ಧಿಗೆ ನಮ್ಮ ತಕರಾರಿಲ್ಲ. ಈ ವಿಚಾರದಲ್ಲಿ ನಾವು ಪೂರ್ಣ ಸಹಕಾರ ನೀಡುತ್ತೇವೆ. ಆದರೆ ಎಲ್ಲರಿಗೂ ಕಾನೂನು, ನಿಯಮ ಒಂದೇ ರೀತಿಯಲ್ಲಿ ಪಾಲಿಸಬೇಕು. ಜೋಡುಮಾರ್ಗ ಉದ್ಯಾನವನ ಬಳಿಯಿಂದಲೇ ತೆರವು ಕಾರ್ಯ ಆರಂಭಗೊಳ್ಳಬೇಕು. ಇದರಲ್ಲಿ ಯಾವುದೇ ರಾಜಕೀಯ ನುಸುಳಬಾರದು. ಅಧಿಕಾರಿಗಳು ಕೂಡ ರಾಜಕೀಯ ಪ್ರಭಾವಕ್ಕೆ ಒಳಗಾಗಬಾರದು ಎಂದರು. ಈ ಸಂದರ್ಭ ಪ್ರತಿಕ್ರಿಯಿಸಿದ ತಹಶೀಲ್ದಾರ್ ಪುರಂದರ ಹೆಗ್ಡೆ, ನಾವು ಸರಕಾರಿ ಜಾಗವನ್ನು ಮಾತ್ರ ಸರ್ವೇ ಕಾರ್ಯ ನಡೆಸುತ್ತಿದ್ದೇವೆ. ಪಟ್ಟಾ ಜಾಗವನ್ನು ಕಾನೂನುಬದ್ಧ ಪರಿಹಾರದ ಮೂಲಕವೇ ಪಡೆದುಕೊಳ್ಳಲಾಗುವುದು ಎಂದರು.

ಸರ್ವೇ ಕಾರ್ಯ ಸಮರ್ಪಕವಾಗಿಲ್ಲ, ಇದಕ್ಕೆ ಪೂರಕ ದಾಖಲಾತಿಯನ್ನೂ ನಾವೇ ಇಲಾಖೆಗೆ ಒದಗಿಸಿದ್ದೇವೆ. ಈ ಹಿಂದೆ ಎರಡು ಸಾರಿ ನಡೆದ ಸರ್ವೇ ಕಾರ್ಯದಲ್ಲೂ ಉದಯಕುಮಾರ್ ಅವರ ಜಾಗ ಪಟ್ಟಾ ಸ್ಥಳವೆಂದು ಕಂಡುಬಂದಿದೆ. ಇದೀಗ ಮತ್ತೆ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಕೇವಲ ಬೈಪಾಸ್ ಜಂಕ್ಷನ್ ಅಗಲೀಕರಣಕ್ಕೆ ಮುಂದಾಗಿರುವುದು ಸಮಂಜಸವಲ್ಲ. ಬಂಟ್ವಾಳ ನಗರ ಅಗಲೀಕರಣದ ಪ್ರಸ್ತಾಪಕ್ಕೆ ತಿಲಾಂಜಲಿ ನೀಡಿ, ಏಕಾಏಕಿ ಬೈಪಾಸಿನ ಅಗಲೀಕರಣಕ್ಕೆ ಮುಂದಾಗಿರುವುದರ ಔಚಿತ್ಯವಾದರೂ ಏನು ಎಂದು ಪ್ರಶ್ನಿಸಿದ ಸದಸ್ಯರು, ಜೋಡುಮಾರ್ಗ ಉದ್ಯಾನವನದಿಂದಲೇ ಆರಂಭಿಸುವುದಾದರೆ ನಾವು ತೆರವು ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಮಾಹಿತಿ ನೀಡದ್ದಕ್ಕೆ ತರಾಟೆ

ಜೋಡುಮಾರ್ಗ ಉದ್ಯಾನವನ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅಕ್ರಮವಾಗಿ ನಿರ್ಮಿಸಲಾಗಿದೆ. ಈ ಬಗ್ಗೆ ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದರೂ ಇದುವರೆಗೂ ಸಂಬಂಧಪಟ್ಟ ಇಲಾಖೆಯಲ್ಲಿ, ಜಿಲ್ಲಾಡಳಿತವಾಗಲಿ ಯಾವುದೇ ಮಾಹಿತಿ ನೀಡದೆ ಕತ್ತಲಲ್ಲಿಟ್ಟಿದೆ ಎಂದು ದೇವದಾಸ ಶೆಟ್ಟಿ, ತಹಸೀಲ್ದಾರ್ ಅವರಲ್ಲಿ ದೂರಿದರು.

ಸಭೆಗೆ ಆಹ್ವಾನವಿಲ್ಲ

ಬಂಟ್ವಾಳ ಅಭಿವೃದ್ಧಿ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಗೆ ಜನಪ್ರತಿನಿಧಿಗಳಾದ ನಮ್ಮನ್ನು ಸೌಜನ್ಯಕ್ಕಾದರೂ ಆಹ್ವಾನಿಸಲಿಲ್ಲ ಎಂದು ಗೋವಿಂದ ಪ್ರಭು ದೂರಿದರು.

ಜಿಪಂ ಸದಸ್ಯರಾದ ತುಂಗಪ್ಪ ಬಂಗೇರ, ಬಿಜೆಪಿ ಮುಖಂಡರಾದ ಜಿ.ಆನಂದ, ಪ್ರೇಮನಾಥ, ರಮಾನಾಥ ಪೈ, ದೇವಪ್ಪ ಪೂಜಾರಿ, ಸ್ಥಳೀಯ ರಿಕ್ಷಾ ಚಾಲಕರು ಉಪಸ್ಥಿತರಿದ್ದರು.

 

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.