ಬಂಟ್ವಾಳ

ವೆಂಟೆಡ್ ಡ್ಯಾಂ ವ್ಯಾಪ್ತಿ ರೈತರಿಗೆ ಸೂಕ್ತ ಪರಿಹಾರ

  • ತುಂಬೆ ವೆಂಟೆಡ್ ಡ್ಯಾಂನಲ್ಲಿನ್ನು 5 ಮೀಟರ್ ನೀರು ಸಂಗ್ರಹ
  • 5 ಮೀಟರ್ ಮುಳುಗಡೆಯಾಗುವ ವ್ಯಾಪ್ತಿ ರೈತರೊಂದಿಗೆ ಒಪ್ಪಂದ
  • 7 ಮೀಟರ್ ಮುಳುಗಡೆಯಾಗುವ ವ್ಯಾಪ್ತಿಗೊಳಪಡುವ ರೈತರಿಗೆ ಪರಿಹಾರಕ್ಕೆ ಕ್ರಮ
  • ನಗರ ಮಾತ್ರವಲ್ಲ ಇಡೀ ಜಿಲ್ಲೆಯ ನಾಗರಿಕನ ನೀರಿನ ಸಮಸ್ಯೆ ಪರಿಹಾರ ಅಗತ್ಯ
  • ನದಿ ತೀರದ ಜನರಿಗೆ ಕಡ್ಡಾಯವಾಗಿ ನೀರೊದಗಿಸಬೇಕು, ಅದರ ಹೊಣೆಗಾರಿಕೆ ಅಧಿಕಾರಿಗಳಿಗೆ

bantwalnews.com report

ಇಂದಿನಿಂದ ತುಂಬೆ ವೆಂಟೆಡ್ ಡ್ಯಾಂನಲ್ಲಿ 5 ಮೀಟರ್ ಎತ್ತರಕ್ಕೆ ನೀರು ಸಂಗ್ರಹವಾಗಲಿದೆ. ಇದರಿಂದ ಒಟ್ಟು 30.62 ಎಕರೆ ಭೂಮಿ ಮುಳುಗಡೆಯಾಗಲಿದ್ದು, ಅದರಲ್ಲ 12 ಎಕರೆ ಸರಕಾರಿ ಭೂಮಿ. ಉಳಿದ 18 ಎಕರೆ ಖಾಸಗಿ ಭೂಮಿ.

ಜಾಹೀರಾತು

ಒಟ್ಟು 18 ರೈತರ ಜಮೀನು ಇದರಲ್ಲಿ ಮುಳುಗಡೆಯಾಗಲಿದೆ. ಇದಕ್ಕೂ ಮುನ್ನ 5 ಮೀಟರ್ ವ್ಯಾಪ್ತಿಯಲ್ಲಿ ಮುಳುಗಡೆಯಾಗುವ ವ್ಯಾಪ್ತಿಯ ರೈತರ ಸಭೆಯನ್ನು ಸಹಾಯಕ ಕಮೀಷನರ್, ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಸಲಾಗಿದ್ದು, ಅವರೆಲ್ಲರ ಒಪ್ಪಿಗೆಯಂತೆ ವಾರ್ಷಿಕ ಬಾಡಿಗೆ ರೂಪದಲ್ಲಿ ಹಣ ಪಾವತಿಸಲಾಗುವುದು. ಹೀಗಾಗಿ 5 ಎಕರೆ ನೀರು ನಿಲ್ಲಿಸಲು ವ್ಯಾಪ್ತಿಯ ರೈತರೆಲ್ಲರೂ ಒಪ್ಪಿಗೆ ಸೂಚಿಸಿದ್ದು, ಮಂಗಳವಾರದಿಂದ ತುಂಬೆ ವೆಂಟೆಡ್ ಡ್ಯಾಂ ನಲ್ಲಿ 5 ಮೀಟರ್ ನೀರು ಸಂಗ್ರಹಕ್ಕೆ ಹಸಿರು ನಿಶಾನೆ ದೊರಕಿದೆ.

ಮಂಗಳವಾರ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೇತ್ರಾವತಿ ನದಿಗೆ ಬಾಗಿನ ಅರ್ಪಿಸಿದ ಬಳಿಕ ನಡೆದ ಸಭೆಯಲ್ಲಿ ಮಾತನಾಡಿದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಏಳು ಮೀಟರ್ ಎತ್ತರಕ್ಕೇರಿದ ಸಂದರ್ಭ ಅದರ ಮುಳುಗಡೆ ವ್ಯಾಪ್ತಿಯ ಸಂತ್ರಸ್ತರಿಗೂ ಸೂಕ್ತ ಪರಿಹಾರ ನೀಡಲಾಗುವುದು, ಈ ಬಗ್ಗೆ ಅನುಮಾನ ಬೇಡ ಎಂದರು. 2007ರಲ್ಲಿ ಅಣೆಕಟ್ಟು ನಿರ್ಮಾಣ ಯೋಜನೆ ರೂಪುಗೊಂಡಿದ್ದರೂ ಭೂಸ್ವಾಧೀನ ಪ್ರಕ್ರಿಯೆ, ಅನುದಾನ ಹಾಗೂ ಪರಿಹಾರ ಕುರಿತು ಯಾವುದೇ ರೀತಿಯ ಸ್ಪಷ್ಟ ರೂಪುರೇಷೆಗಳನ್ನು ಹಾಕಿಕೊಳ್ಳದಿರುವುದೇ ಅಣೆಕಟ್ಟು ನಿರ್ಮಾಣ ವಿಳಂಬವಾಗಲು ಕಾರಣ ಎಂದು ಅವರು ಹೇಳಿದರು.

ಕಳೆದ ನಾಲ್ಕು ವರ್ಷಗಳಿಂದ ಈ ಯೋಜನೆ ವೇಗ ಪಡೆದುಕೊಂಡಿತು. ವಿನಯ ಕುಮಾರ್ ಸೊರಕೆ ನಗರಾಭಿವೃದ್ಧಿ ಸಚಿವರಾಗಿದ್ದ ಸಂದರ್ಭ ಹಾಗೂ ಜಿಲ್ಲಾ ಉಸ್ತುವಾರಿ ಸಚಿವನಾಗಿ ತಾನು ಈ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಿರುವುದನ್ನು ತಮ್ಮ ಮಾತಿನಲ್ಲಿ ಉಲ್ಲೇಖಿಸಿದ ಅವರು, ಈಗಿನ ಮಂಗಳೂರು ಪಾಲಿಕೆ ಆಡಳಿತವನ್ನು ಅಭಿನಂದಿಸಿದರು.

ಕಳೆದ ಬಾರಿ ಮಂಗಳೂರಿಗೆ ನೀರಿನ ಕೊರತೆ ಉಂಟಾಗಿತ್ತು. ಲಖ್ಯಾ ಡ್ಯಾಂನಿಂದಲೂ ನೀರನ್ನು ಮಂಗಳೂರಿಗೆ ಒದಗಿಸುವ ಪ್ರಮೇಯ ಬಂತು. ಜಿಲ್ಲೆಯಾದ್ಯಂತ ನೀರಿನ ಸಮಸ್ಯೆ ತಲೆದೋರಿತ್ತು. ಪ್ರತಿ ಭಾಗದಲ್ಲೂ ನಾನು ಸಭೆ ನಡೆಸಿ ಅದರ ಪರಿಹಾರ ಕೈಗೊಳ್ಳುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ ಎಂದರು.

ಎನ್ ರೂಟ್ ವಿಲೇಜ್ ಗೆ 10 ಕೋಟಿ ರೂಪಾಯಿ

ಎಲ್ಲರಿಗೂ ನೀರು ಪಡೆಯುವ ಹಕ್ಕು ಇದೆ. ಕುಡಿಯುವ ನೀರೊದಗಿಸುವ ಸಂಬಂಧ ಯಾವುದೇ ರಾಜಿ ಇಲ್ಲ.

ಎಡಿಬಿ ಯೊಜನೆಯಡಿ ನದಿ ಹಾದುಹೋಗುವ ಗ್ರಾಮಗಳಿಗೆ (ಎನ್ ರೂಟ್ ವಿಲೇಜ್ ) ಹತ್ತು ಕೋಟಿ ರೂಪಾಯಿಗಳು ಮಂಜೂರಾಗಿದೆ. ಡ್ಯಾಂ ಇರುವ ಕಳ್ಳಿಗೆ ಗ್ರಾಮ ನನ್ನ ಗ್ರಾಮ, ಈ ಬಾರಿ ಅಣೆಕಟ್ಟಿನಿಂದ ಕಳ್ಳಿಗೆ ಗ್ರಾಮಕ್ಕೆ ನೀರು ಒದಗಿಸಿದರೆ ಸಮಸ್ಯೆ ಬಹುಪಾಲು ಪರಿಹಾರವಾಗುತ್ತದೆ ಎಂದು ರೈ ಹೇಳಿದರು.

ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ಜೆ.ಆರ್. ಲೋಬೊ ಮಾತನಾಡಿ, ಮಂಗಳೂರಿಗೆ ಸಾಗುವ ನೀರು ಸೋರಿಕೆಯಾಗುವುದನ್ನು ತಡೆಗಟ್ಟಿದರೆ, ಅಣೆಕಟ್ಟಿನಲ್ಲಿ ಈಗ ಸಂಗ್ರಹವಾಗಿರುವ ನೀರು ಸಾಕಾಗುತ್ತದೆ ಎಂದರು.

ವಿಧಾನಪರಿಷತ್ತು ಮುಖ್ಯ ಸಚೇತಕ ಐವನ್ ಡಿಸೋಜ, ಮಂಗಳೂರು ಮೇಯರ್ ಕೆ.ಹರಿನಾಥ್ ಮೊದಲಾದವರು ಉಪಸ್ಥಿತರಿದ್ದರು. ರಾಜೇಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.

477.61 ಎಕರೆ ಮುಳುಗಡೆ, 70 ಕೋಟಿ ರೂ ವೆಚ್ಚ

ಕಿಂಡಿ ಅಣೆಕಟ್ಟಿನಲ್ಲಿ ಏಳು ಮೀಟರ್ ಎತ್ತರಕ್ಕೆ ನೀರು ಶೇಖರಿಸಲು ಅವಕಾಶ. ಇದರ ಸಾಮರ್ಥ್ಯ 14730 ಮಿಲಿಯನ್ ಲೀಟರ್ ನೀರು ಸಂಗ್ರಹ. ಇದು ಮಂಗಳೂರು ನಗರದ ಬೇಸಿಗೆ ಕಾಲದ ಮೂರು ತಿಂಗಳ ನೀರಿನ ಬೇಡಿಕೆ. ಕಿಂಡಿ ಅಣೆಕಟ್ಟಿನಲ್ಲಿ ಈ  ನೀರು ಸಂಗ್ರಹಿಸಿದರೆ, ಒಟ್ಟು 477.61 ಎಕರೆ ಜಮೀನು ಮುಳುಗಡೆಯಾಗಲಿದೆ. ಪ್ರಸ್ತುತ 5 ಮೀಟರ್ ಎತ್ತರಕ್ಕೆ ನೀರು ನಿಲ್ಲಿಸಲಾಗಿದೆ. 5 ಮೀಟರ್ ಎತ್ತರಕ್ಕೆ ನೀರು ನಿಲ್ಲಿಸಿದಾಗ, ಒಟ್ಟು 49.93 ಎಕರೆ ಜಮೀನು ಮುಳುಗಡೆ ಆಗಲಿದೆ.

ಸರಕಾರದ ಅನದಾನ ಶೇ.40,(30.2 ಕೋಟಿ ರೂ) ಹಣಕಾಸು ಸಂಸ್ಥೆಗಳಿಂದ ಶೇ.50ರಷ್ಟು ಸಾಲ (37.75 ಕೋಟಿ ರೂ ಸಾಲ), ಸ್ಥಳೀಯ ಸಂಸ್ಥೆ ವಂತಿಗೆ ಶೇ 10. (7.55 ಕೋಟಿ). ಕಿಂಡಿ ಅಣೆಕಟ್ಟಿನಲ್ಲಿ ಒಟ್ಟು 29 ಆಧಾರಸ್ತಂಭಗಳಿದ್ದು, 30 ಸಂಖ್ಯೆಯ ವಿದ್ಯುಚ್ಛಾಲಿತ ಗೇಟು ಅಳವಡಿಸಲಾಗಿದೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.