ಬಂಟ್ವಾಳ: ಒಂದೆಡೆ 500, 1000 ರೂ ನೋಟು ಬದಲಾಯಿಸಲು ಮತ್ತು ಜಮೆ ಮಾಡಲು ಗ್ರಾಹಕರು ಬ್ಯಾಂಕಿನ ಮುಂದೆ ಸಾಲುಗಟ್ಟಿ ನಿಂತಿದ್ದರೆ, ಇನ್ನೊಂದೆಡೆ ಎಟಿಎಂ ಯಂತ್ರದಲ್ಲಿ ಬಂದ ಹಣವನ್ನು ಅದರ ವಾರೀಸುದಾರರಿಗೆ ಒಪ್ಪಿಸಿ ಮಾನವೀಯತೆ ಮೆರೆದ ವಿದ್ಯಮಾನ ಶನಿವಾರ ನಡೆಯಿತು.
ತುಂಬೆ ನಿವಾಸಿ ಟಿ.ಹಕೀಂ ವಾರದ ಹಿಂದೆ ಹಣಡ್ರಾ ಮಾಡಲೆಂದು ತುಂಬೆಯಲ್ಲಿರುವ ಇಂಡಿಕ್ಯಾಶ್ ಎಟಿಎಂಗೆ ತೆರಳಿದ್ದರು. ಅವರ ಖಾತೆ ತುಂಬೆ ಕಾರ್ಪೊರೇಷನ್ ಬ್ಯಾಂಕ್ನಲ್ಲಿದ್ದು, ಕಾರ್ಪೊರೇಷನ್ ಎಟಿಎಂ ದುರಸ್ಥಿಯಲ್ಲಿದ್ದ ಕಾರಣ ಹಣ ಡ್ರಾ ಮಾಡಲು ಇಂಡಿಕ್ಯಾಶ್ ಎಟಿಎಂಗೆ ತೆರಳಿದ್ದರು. ತನ್ನಲ್ಲಿದ್ದ ಎಟಿಎಂ ಕಾರ್ಡನ್ನು ಎಟಿಎಂ ಯಂತ್ರಕ್ಕೆ ಹಾಕಿ ಪಾಸ್ ವರ್ಡ್ ನಮೂದಿಸಿ ಹಣ ಡ್ರಾ ಮಾಡಲೆಂದು 10 ಸಾವಿರ ಒತ್ತಿದ್ದರು. ಅದೇ ಸಂದರ್ಭ ವಿದ್ಯುತ್ ಕಡಿತಗೊಂಡು ಎಟಿಎಂ ಸ್ಥಗಿತಗೊಂಡಿತು. ದಿಕ್ಕು ತೋಚದ ಹಕೀಂ ಕೆಲ ಹೊತ್ತು ಅಲ್ಲೇ ನಿಂತರು. ಕಾದು ಸುಸ್ತಾದ ಅವರು ಕ್ಯಾನ್ಸಲ್ ಗುಂಡಿ ಒತ್ತಿ ಎಟಿಎಂನಿಂದ ವಾಪಸ್ ತೆರಳಿದರು.
ಇದಾದ ಕೆಲ ಹೊತ್ತಿನ ಬಳಿಕ ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆ ಸಿಬ್ಬಂದಿ ಜೆನಿಟ ಮೀನಾ ಡಿಕುನ್ನ ಇಂಡಿಕ್ಯಾಶ್ ಎಟಿಎಂಗೆ ಹೋದಾಗ ಒಂದಿಷ್ಟು ಹಣ ಎಟಿಎಂ ಯಂತ್ರದಿಂದ ಹೊರ ಬಂದಿತ್ತು. ಅದನ್ನು ಸ್ವೀಕರಿಸಿ ಬಳಿಕ ತನ್ನ ಎಟಿಎಂನಿಂದ ಹಣ ಡ್ರಾ ಮಾಡಿ ನೇರವಾಗಿ ತುಂಬೆಯಲ್ಲಿರುವ ಫಾದರ್ ಮುಲ್ಲರ್ ಆಸ್ಪತ್ರೆಗೆ ತೆರಳಿ ಎಟಿಎಂನಲ್ಲಿ ದೊರೆತಿದ್ದ ಹಣವನ್ನು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಕಿರಣ್ ಶೆಟ್ಟಿ ಅವರಲ್ಲಿ ನೀಡಿ ವಿಷಯ ತಿಳಿಸಿ ಮಂಗಳೂರಿಗೆ ಹೋದರು.
ಡಾ.ಶೆಟ್ಟಿ ಈ ಹಣವನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಎಸ್ ಐ ರಕ್ಷಿತ್ ಗೌಡ ಅವರಿಗೆ ಆಸ್ಪತ್ರೆ ಸಿಬ್ಬಂದಿ ಮೂಲಕ ತಲುಪಿಸಿದರು.
ಪಿಕಪ್ ಚಾಲಕನಾಗಿರುವ ಹಕೀಂ ಹಣ ಕಳೆದುಕೊಂಡ ಬಗ್ಗೆ ಎಟಿಎಂ ಇರುವ ಕಟ್ಟಡದ ಮಾಲೀಕ ಹಾಗೂ ಬ್ಯಾಂಕ್ಗೆ ಮಾಹಿತಿ ನೀಡಿದರು. ಎಸ್ಸೈ ರಕ್ಷಿತ್ ನಿರ್ದೇಶನದಂತೆ ಸಿಬ್ಬಂದಿ ಜನಾರ್ದನ್ ತುಂಬೆಗೆ ಬಂದು ಪರೀಶೀಲನೆ ನಡೆಸಿದಾಗ ಎಟಿಎಂನಲ್ಲಿ ಸಿಕ್ಕಿರುವ ಹಣ ತುಂಬೆಯ ಹಕೀಂ ಎಂಬವರದ್ದು ಎಂದು ದೃಢಪಟ್ಟಿತು.
ಪೊಲೀಸರ ಸೂಚನೆಯಂತೆ ಹಕೀಂ ಬ್ಯಾಂಕ್ ದಾಖಲೆಗಳೊಂದಿಗೆ ಠಾಣೆಗೆ ಶನಿವಾರ ಆಗಮಿಸಿದರು. ಎಸ್ಸೈ ರಕ್ಷಿತ್ ಉಪಸ್ಥಿತಿಯಲ್ಲಿ ಫಾದರ್ ಮುಲ್ಲರ್ ಸಿಬ್ಬಂದಿ ಜೈಸನ್ ನಗದನ್ನು ಹಸ್ತಾಂತರಿಸಿದರು. ಈ ವೇಳೆ ಹೆಡ್ ಕಾನ್ಸ್ಟೇಬಲ್ ಜನಾರ್ದನ, ಎಎಸ್ ಐ ರಮೇಶ್ ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…