ಬಂಟ್ವಾಳ: ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಡಿಸೆಂಬರ್ 9ರಿಂದ 13ರವೆರೆಗೆ ನಡೆಯಲಿರುವ ವಿಶ್ವ ತುಳುವರೆ ಆಯೊನೊ -2016’ಪ್ರಚಾರಾರ್ಥವಾಗಿ ಜಿಲ್ಲೆಯಾದ್ಯಂತ ಸಂಚರಿಸಲಿರುವ ‘ತುಳುವ ತೇರ್ ನವೆಂಬರ್ 7 ರಂದು ಸಂಜೆ 5 ಗಂಟೆಗೆ ಬಿ.ಸಿ.ರೋಡ್ ಪ್ರವೇಶಿಸಲಿದೆ ಎಂದು ವಿಶ್ವ ತುಳುವೆರೆ ಆಯೊನೊ 2016 ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ತಿಳಿಸಿದ್ದಾರೆ.
ಬುಧವಾರ ಸಂಜೆ ಬಿ.ಸಿ.ರೋಡ್ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿ.ಸಿ.ರೋಡಿನ ಬ್ರಹ್ಮ ಶ್ರೀ ನಾರಾಯಣ ಗುರು ವೃತ್ತದಲ್ಲಿ ತುಳು ತೇರನ್ನು ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಸ್ವಾಗತಿಸಲಾಗುವುದು. ಬಳಿಕ ವೈವಿಧ್ಯಮಯ ಮೆರವಣಿಗೆಯೊಂದಿಗೆ ಸಾಗಲಿರುವ ತುಳುವ ತೇರ್ ತಾಲೂಕು ಕಚೇರಿಯ ಮುಂಭಾಗದಲ್ಲಿ ಸಂಪನ್ನಗೊಳ್ಳಲಿದೆ ಎಂದರು.
ಬಳಿಕ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಉದ್ಘಾಟಿಸಲಿದ್ದು ಬಂಟ್ವಾಳ ತುಳು ಕೂಟದ ಅಧ್ಯಕ್ಷ ಎ.ಸಿ. ಭಂಡಾರಿ ಸಭಾಧ್ಯಕ್ಷತೆ ವಹಿಸುವರು. ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ನಗರಾಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಪಿಯೂಸ್ ರೊಡ್ರಿಗಸ್ ಅತಿಥಿಗಳಾಗಿ ಭಾಗವಹಿಸಲಿದ್ದು ವಿಶ್ವ ತುಳುವೆರೆ ಆಯೊನೊದ ಸಂಚಾಲಕ ಭಾಸ್ಕರ್ ಪೂಜಾರಿ ಕುಂಬ್ಳೆ ಬದಿಯಡ್ಕದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಲಿರುವರು ಎಂದು ಹೇಳಿದರು. ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ವಿವರಿಸಿದರು.
ಬದಿಯಡ್ಕದ ತುಳುವೆರೆ ಅಯೊನೊದ ಕೂಟದ ದಶಮಾನೋತ್ಸವದ ಪ್ರಯುಕ್ತ ವಿಶ್ವ ತುಳುವೆರೆ ಆಯೊನೊ 2016 ಕಾರ್ಯಕ್ರಮ 5 ದಿನ ಕಾಲ ನಡೆಯಲಿದ್ದು ಈ ಸಂದರ್ಭ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ ಮೊದಲಾದ ಸಭೆ, ಗೋಷ್ಠಿಗಳು ನಡೆಯಲಿದೆ. ಜೊತೆಗೆ ತುಳುನಾಡಿನ ದೈವಾರಾಧನೆ ಬಗ್ಗೆ ವಿಚಾರ ವಿಮರ್ಶೆ, ತುಳುನಾಡಿನಲ್ಲಿರುವ ಎಲ್ಲ ಭಾಷೆಗಳ ಬಹು ಭಾಷೆ ಸಂಗಮವು ನಡೆಯುವುದು.
ತುಳುನಾಡಿನಾದ್ಯಂತ ವಿಶ್ವ ತುಳುವೆರೆ ಆಯೊನೊದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ತುಳುವ ತೇರ್ ಬಾರ್ಕೂರ್ ತುಳುವೇಶ್ವರ ದೇವಸ್ಥಾನದಿಂದ ಹೊರಟಿದ್ದು 108 ದಿನಗಳ ಕಾಲ ತುಳು ನಾಡಿನಾದ್ಯಂತ ಸಂಚರಿಸಿ ಡಿಸೆಂಬರ್ 9ರಂದು ಬದಿಯಡ್ಕವನ್ನು ತಲುಪಲಿದೆ ಎಂದರು.
ಪ್ರಧಾನಿಗೆ ಮನವಿ:
ತುಳುವನ್ನು ಸಂವಿಧಾನದ 8ನೆ ಪರಿಛೇದಕ್ಕೆ ಸೇರ್ಪಡೆಗೊಳಿಸುವಂತೆ ಆಗ್ರಹಿಸಿ ಅಖಿಲ ಭಾರತ ತುಳು ಕೂಟದ ನಿಯೋಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಬಂಟ್ವಾಳ ತುಳುಕೂಟದ ಅಧ್ಯಕ್ಷ ಎ.ಸಿ.ಭಂಡಾರಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪ್ರತ್ಯೇಕ ತುಳು ರಾಜ್ಯ ಕೂಗಿನ ಬಗ್ಗೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು ಇದುವೆರೆಗೆ ಪ್ರತ್ಯೇಕ ತುಳು ರಾಜ್ಯದ ಬಗ್ಗೆ ತುಳು ಕೂಟ ಚಿಂತನೆ ನಡೆಸಿಲ್ಲ ಎಂದರು. ನವೆಂಬರ್ 1ರಂದು ಜಿಲ್ಲೆಯ ಕೆಲವೆಡೆ ಪ್ರತ್ಯೇಕ ತುಳು ರಾಜ್ಯಕ್ಕೆ ಒತ್ತಾಯಿಸಿ ಧ್ವಜಾರೋಹಣ ನಡೆಸಿರುವುದರ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಬಿ.ತಮ್ಮಯ್ಯ, ಪರಮೇಶ್ವರ ಎಂ., ಬಿ.ಕೆ.ಇದಿನಬ್ಬ ಕಲ್ಲಡ್ಕ, ಕೈಯ್ಯೂರು ನಾರಾಯಣ ಭಟ್, ಎಚ್.ಕೆ.ನಯನಾಡು, ಮಂಜು ವಿಟ್ಲ, ನಾರಾಯಣ ಪೆರ್ನೆ, ಮಾಧವ ಮೊದಲಾದವರು ಉಪಸ್ಥಿತರಿದ್ದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…